
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭಾರತ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದೆ. ವಿದೇಶಗಳಲ್ಲಿ ಪ್ರಸಾರವಾಗುವ ಪ್ರತಿ ಪಂದ್ಯಾವಳಿಗಳನ್ನು ನೋಡುವ ಕ್ರೀಡಾಭಿಮಾನಿಗಳು ತಮ್ಮಿಷ್ಟದ ತಂಡವನ್ನು ಬೆಂಬಲಿಸುತ್ತಿದ್ದಾರೆ. ಹಾಗೆ ಇಂಗ್ಲೆಂಡ್ ದೇಶದ ಪುಟ್ಬಾಲ್ ಆಟಗಾರನೋರ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನನ್ನ ಮೆಚ್ಚಿನ ತಂಡವೆಂದು ಹೇಳುವ ಮೂಲಕ ಅಭಿಮಾನವನ್ನು ವ್ಯಕ್ತ ಪಡಿಸಿದ್ದಾರೆ.
ಇಂಗ್ಲೆಂಡ್ ದೇಶದ ಖ್ಯಾತ ಫುಟ್ಬಾಲ್ ಆಟಗಾರ ಹ್ಯಾರಿ ಕೇನ್ ಆರ್ಸಿಬಿ ತನ್ನ ನೆಚ್ಚಿನ ತಂಡವೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಯಾವಾಗಲೂ ಆರ್ಸಿಬಿ ನನ್ನ ಫೇವರಿಟ್ ತಂಡ, ಕಳೆದ ವರ್ಷಕ್ಕೆ ಹೋಲಿಸಿದರೆ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಈ ಬಾರಿ ಬಲಿಷ್ಠವಾಗಿದೆ. ಈ ಬಾರಿ ತಂಡವು ಕಪ್ ಗೆಲ್ಲುವ ನಿರೀಕ್ಷೆಯಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿದ ಕೇನ್, ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇನೆ. ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಕೊಹ್ಲಿಯನ್ನು ಹಲವು ಬಾರಿ ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಸಂಗತಿ ಎಂದಿದ್ದಾರೆ. ಕಳೆದ ಬಾರಿ ಆರ್ಸಿಬಿಗೆ ದುರಾದೃಷ್ಟ ಕಾಡಿತ್ತು. ಈ ಬಾರಿ ತಂಡಕ್ಕೆ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆರ್ಸಿಬಿ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಮಾಡಿದೆ. ಈ ಆವೃತ್ತಿಯಲ್ಲಿ ಅದ್ಭುತ ಮೈಲುಗಲ್ಲುಗಳನ್ನು ಸಾಧಿಸಬಹುದು ಎಂಬ ನಂಬುಗೆಯನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ಶ್ರೇಷ್ಠ ತಂಡಗಳಿವೆ. ನಾನು ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ. ಆದರೆ ಆರ್ಸಿಬಿ ತಂಡ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ. ವಿರಾಟ್ ವ್ಯಕ್ತಿತ್ವವನ್ನು ನಾನು ಬಹಳವೇ ಮೆಚ್ಚುತ್ತೇನೆ. ಆತ ನಿಜಕ್ಕೂ ಡೌನ್ ಟು ಅರ್ಥ್ ವ್ಯಕ್ತಿ. ಕ್ರಿಕೆಟ್ ಅನ್ನು ಆನಂದಿಸುತ್ತಾ ಆಡುತ್ತಾರೆ. ವಿರಾಟ್ ಬ್ಯಾಟಿಂಗ್ ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಅತನ ಆಟದ ಕಿಚ್ಚು ಮತ್ತು ಉತ್ಸಾಹವನ್ನು ನೋಡುವುದೇ ಖುಷಿ ಎಂದು ಕೇನ್ ಬಣ್ಣಿಸಿದ್ದಾರೆ.

ಪುಣೆಯ ಎಂಸಿಎ ಮೈದಾನದಲ್ಲಿ ರಾಜಸ್ಥಾನ ತಂಡವನ್ನು ಬೆಂಗಳೂರು ತಂಡ ಎದುರಿಸಲಿದೆ. ರಾಜಸ್ಥಾನ ತಂಡದ ಜಾಸ್ ಬಟ್ಲರ್ ಮೂರು ಶತಕಗಳನ್ನು ಗಳಿಸುವ ಮೂಲಕ ಉತ್ತಮ ಪಾರ್ಮ್ನಲ್ಲಿದ್ದಾರೆ. ಕಳೆದ ಏಳು ಪಂದ್ಯಗಳಲ್ಲಿ 491 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಧರಿಸಿಕೊಂಡಿದ್ದಾರೆ. ಇನ್ನೊಂದೆಡೆ ತಂಡದ ಮಾರಕ ಬೌಲಿಂಗ್ ಅಸ್ತ್ರವಾಗಿರುವ ಚಾಹಲ್ ಸಹ ಫಾರ್ಮ್ನಲ್ಲಿದ್ದು, ಏಳು ಪಂದ್ಯಗಳಲ್ಲಿ 18 ವಿಕೆಟ್ ಪಡೆದುಕೊಂಡು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಕಡೆ ಆರ್ಸಿಬಿಯ ಮಾಜಿ ನಾಯಕ ಎರಡು ಬಾರಿ ಡಕ್ಔಟ್ ಆಗುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ 68 ರನ್ಗಳಿಗೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಪ್ರದರ್ಶನ ನೀಡಿರುವ ಆರ್ಸಿಬಿ ತಂಡ ಈ ಪಂದ್ಯದಲ್ಲಿ ತಮ್ಮ ತಪ್ಪುಗಳನ್ನು ಸುಧಾರಿಸಿಕೊಂಡು ಮತ್ತೆ ಜಯದ ಹಾದಿಗೆ ಮರಳಿದೆಯೇ ಎಂದು ಕಾದು ನೋಡಬೇಕಿದೆ.