ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಭಾರೀ ಸುದ್ದಿಯಲ್ಲಿದೆ. ಕಪ್ ಗೆಲ್ಲುತ್ತಿದ್ದಂತೆ ಕಾಲ್ತುಳಿತದ ಕಪ್ಪು ಚುಕ್ಕೆ ಫ್ರಾಂಚೈಸಿಯನ್ನು ಬಹುವಾಗಿ ಕಾಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕಾಗಿ 17 ವರ್ಷಗಳ ಬಳಿಕ ಟ್ರೋಫಿ ಗೆದ್ದರೂ, ಆರ್ಸಿಬಿ (RCB) ತಂಡದ ಮಾಲೀಕತ್ವ ಬೇರೆಯವರಿಗೆ ಹಸ್ತಾಂತರಿಸುವ ಮಾತುಗಳು ಕೇಳಿ ಬರುತ್ತಿವೆ.
ಜೂನ್ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದ ಹೊರಗಡೆ ನಡೆದ ಕಾಲ್ತುಳಿತದ ಬಳಿಕ ಆರ್ಸಿಬಿ ಮ್ಯಾನೇಜ್ಮೆಂಟ್, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಟೀಕೆಗಳನ್ನು ಎದುರಿಸಿತು. ಅಲ್ಲದೆ ಕಾನೂನು ಹೋರಾಟದ ಬಿಸಿಯನ್ನು ಅನುಭವಿಸುತ್ತಿವೆ. ಈ ಬೆನ್ನೆಲ್ಲೆ ಆರ್ಸಿಬಿ ಮಾಲೀಕತ್ವವನ್ನು ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಆರ್ಸಿಬಿ ತಂಡವನ್ನು ಮಾರಾಟ ಮಾಡುವ ಬಗ್ಗೆ ಬಹುದಿನಗಳಿಂದ ಚರ್ಚೆಗಳು ನಡೆದಿದ್ದವು. ಈಗ ಈ ಚರ್ಚೆಗೆ ಒಂದು ಸಣ್ಣ ಅಲ್ಪವಿರಾಮ ಬಿದ್ದಿದೆ.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಈಗ ಆರ್ಸಿಬಿ ತಂಡವನ್ನು ಇಟ್ಟುಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಪರಮಾರ್ಶೆ ನಡೆಸುತ್ತಿದೆ. ಮುಂದಿನ ಆವೃತ್ತಿಯ ಐಪಿಎಲ್ ವೇಳೆಗೆ ಆರ್ಸಿಬಿ ಯಾವ ಕಂಪನಿಯ ಪಾಲಾಗಬಹುದು ಎಂಬ ಸ್ಪಷ್ಟತೆ ಸಿಗುವುದಿತ್ತು. ಆದರೆ ಆರ್ಸಿಬಿ ಮಾಲೀಕರು ನೀಡಿರುವ ಪರಮಾರ್ಶೆಯ ಹೇಳಿಕೆ ಬಹಳ ಕುತೂಹಲ ಮೂಡಿಸಿದೆ. ಯುಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಸೋಮೇಶ್ವರ್, ಆರ್ಸಿಬಿ ಒಂದು ಅಮೂಲ್ಯವಾದ ಆಸ್ತಿಯಾಗಿದೆ. ಆರ್ಸಿಬಿ ತಂಡ ಮೈದಾನದಲ್ಲಿ ಹಾಗೂ ಹೊರಗೆ ಉತ್ತಮವಾದದನ್ನು ಮಾಡುತ್ತದೆ ಎಂದು ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್ (RCSPL) ಐಪಿಎಲ್ನಲ್ಲಿ ಪುರುಷ ಹಾಗೂ ಮಹಿಳಾ ತಂಡಗಳ ಒಡೆತನವನ್ನು ಹೊಂದಿದೆ. ಇನ್ನು ಪುರುಷರ ತಂಡ 18ನೇ ಆವೃತ್ತಿಯ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮಹಿಳಾ ತಂಡ 2024ರಲ್ಲಿ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಲು ಆರಂಭಿಸುತ್ತಿದ್ದಂತೆ ದಿಗ್ಗಜ ಉದ್ಯಮಿಗಳು ಸಹ ಈ ಕಂಪನಿಯನ್ನು ತಮ್ಮ ತೆಕ್ಕೆಗೆ ಪಡೆಯಲು ಕಸರತ್ತು ನಡೆಸಿವೆ. ಆದರೆ ಕಂಪನಿಯ ಪರಮಾರ್ಶೆ ನಡೆ ಬಹಳ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ವಿಶ್ವದಲ್ಲೇ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಆರ್ಸಿಬಿ, ಮೊದಲಿನಿಂದಲೂ ಸ್ಟಾರ್ ಪ್ಲೇಯರ್ಗಳನ್ನು ಪೋಷಿಸುತ್ತಾ ಬಂದಿದೆ. ಈ ತಂಡದಲ್ಲಿ ವಿಶ್ವ ವಿಖ್ಯಾತ ಸ್ಟಾರ್ ಆಟಗಾರರು ಆಡಿ ಮಿಂಚಿದ್ದಾರೆ. ಸದ್ಯ ಆರ್ಸಿಬಿ ತಂಡದ ಮುಖವಾಗಿರುವ ವಿರಾಟ್ ಕೊಹ್ಲಿ, ಸತತ 18 ವರ್ಷಗಳಿಂದ ಆರ್ಸಿಬಿ ಪರ ಆಡುತ್ತಿದ್ದಾರೆ. ಯುವ ಪ್ರತಿಭೆಗಳನ್ನು ಪೋಷಿಸುವಲ್ಲಿ ಆರ್ಸಿಬಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ. ಈ ತಂಡವನ್ನು ಪ್ರತಿನಿಧಿಸಿದ ಬಳಿಕ ಅದೆಷ್ಟೋ ಯುವ ಆಟಗಾರರು ತಮ್ಮ ತಮ್ಮ ದೇಶದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಇಂತಹ ದೊಡ್ಡ ಕಂಪನಿಯನ್ನು ಇಷ್ಟು ಎತ್ತರಕ್ಕೆ ಬೆಳಸಿ, ಬೇರೆಯವರ ಕೈಗೆ ಹಸ್ತಾಂತರಿಸುವ ಬಗ್ಗೆ ಚರ್ಚೆಗಳು ನಡೆದಿವೆ.