
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸಹಭಾಗಿತ್ವದಲ್ಲಿ ಈ ಬಾರಿ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 'ಬ್ಲೀಡ್ ನಮ್ಮ ಆರ್ಸಿಬಿ' ಹೆಸರಿನಲ್ಲಿ ನಡೆದ ಈ ರಕ್ತದಾನ ಶಿಬಿರ ಯಶಸ್ವಿಯಾಗಿದೆ.
ಏಪ್ರಿಲ್ 4ರ ಭಾನುವಾರ ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬೆಳಗ್ಗೆ 10 amನಿಂದ 3 pmವರೆಗೆ ರಕ್ತದಾನ ಶಿಬಿರ ನಡೆಲಾಗಿತ್ತು. ಬ್ಲೀಡ್ ನಮ್ಮ ಆರ್ಸಿಬಿ, ಕಡಲತೀರದ ಭಾರ್ಗವ ಚಿತ್ರ ತಂಡದ ಸಹಯೋಗದೊಂದಿಗೆ ಈ ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಕ್ತದಾನ ಶಿಬಿರದಲ್ಲಿ ಕಿಡ್ವಯ್ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿಗಳು, ಸ್ಟಾರ್ಸ್ಪೋರ್ಟ್ಸ್ನ ಸಿಬ್ಬಂದಿಯೂ ಪಾಲ್ಗೊಂಡಿದ್ದರು. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಕನ್ನಡ ಚಿತ್ರನಟ ಹರೀಶ್ ಅರಸು ಅವರು ಫೇಸ್ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ.

ಇದೇ ಪೋಸ್ಟ್ನಲ್ಲಿ ಅರಸು ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭಹಾರೈಕೆಗಳು, ಗೆದ್ದು ಬನ್ನಿ ಎಂದು ಶುಭಾಶಯ ಕೋರಿದ್ದಾರೆ. ಐಪಿಎಲ್ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಸಾಲಿನಲ್ಲಿರುವ ಆರ್ಸಿಬಿ ಈ ಬಾರಿಯಾದರೂ ಕಪ್ ಗೆಲ್ಲುತ್ತಾ ಕಾದುನೋಡಬೇಕಿದೆ. ಏಪ್ರಿಲ್ 9ರ ಉದ್ಘಾಟನಾ ಪಂದ್ಯದಲ್ಲೇ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಡಲಿವೆ.
