ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮಾರ್ಚ್ 28 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆರ್ಸಿಬಿ ಎರಡನೇ ಬಾರಿ ಪ್ರಶಸ್ತಿಯನ್ನು ಎತ್ತುವ ಕನಸು ಹೊಂದಿದೆ. ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ಪಡೆ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿತ್ತು. ಈ ಬಾರಿಯೂ ಇಂತಹದ್ದೇ ಸಾಧನೆ ಮಾಡುವ ಆಸೆಯನ್ನು ಹೊಂದಿದೆ.
ಹಾಲಿ ಚಾಂಪಿಯನ್ ಆರ್ಸಿಬಿ ಉದ್ಘಾಟನಾ ಪಂದ್ಯದಲ್ಲಿ ಎಸ್ಆರ್ಎಚ್ ತಂಡದ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದೆ. ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗ ಬಲಾಢ್ಯವಾಗಿದೆ. ಹಾಗಿದ್ದರೆ ಆರ್ಸಿಬಿ ತಂಡದ ಬಲ ಹಾಗೂ ದೌರ್ಬಲ್ಯಗಳು ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗ ಬಲಾಢ್ಯವಾಗಿದೆ. ತಂಡದ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಸ್ಟಾರ್ ಬ್ಯಾಟರ್ಗಳ ದಂಡೇ ಇದೆ. ಇವರು ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು. ಇವರು ಒಂದು ತುದಿಯಲ್ಲಿ ರನ್ ಗಳಿಸುತ್ತ ಯುವ ಹಾಗೂ ಅನುಭವಿ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಾ ಸಾಗುತ್ತಾರೆ. ವಿರಾಟ್ ಇತ್ತೀಚಿನ ದಿನಗಳಲ್ಲಿ ತಮ್ಮ ಬ್ಯಾಟಿಂಗ್ ಧಾಟಿಯನ್ನು ಬದಲಿಸಿದ್ದಾರೆ. ಇವರು ಟಿ20 ಫಾರ್ಮೆಟ್ನಲ್ಲಿ ಚುರುಕಿನಿಂದ ರನ್ ಕಲೆ ಹಾಕುವತ್ತ ದೃಷ್ಟಿ ನೆಟ್ಟಿದ್ದಾರೆ.

ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸಾಥ್ ನೀಡಬಲ್ಲ ಸ್ಟಾರ್ ಬ್ಯಾಟರ್ಗಳ ದಂಡೇ ಇದೆ. ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್, ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟಿದಾರ್, ವೆಂಕಟೇಶ್ ಅಯ್ಯರ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬ ಬಲ್ಲ ಆಟಗಾರರು. ದೇವದತ್ ತಂಡದಲ್ಲಿ ಸಮತೋಲನ ತರಬಲ್ಲ ಆಟಗಾರ. ವೆಂಕಟೇಶ್ ಅಯ್ಯರ್ ಒಂದು ಬದಿಯಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ.

ದೇವದತ್ ಪಡಿಕ್ಕಲ್ ಹಾಗೂ ವೆಂಕಟೇಶ್ ಅಯ್ಯರ್ ಅವರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ನಾಯಕ ರಜತ್ ಪಾಟಿದಾರ್ ಅವರು ಸ್ಪಿನ್ ಬೌಲಿಂಗ್ನ್ನು ಚೆನ್ನಾಗಿ ಎದುರಿಸಲಿದ್ದು, ಮಿಡ್ಲ್ ಓವರ್ಗಳಲ್ಲಿ ಬಲ ತುಂಬಲಿದ್ದಾರೆ.

ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜಿತೇಶ್ ಶರ್ಮಾ ಹಾಗೂ ರೊಮಾರಿಯೊ ಶೆಫರ್ಡ್ ರನ್ ಕಲೆ ಹಾಕುವಲ್ಲಿ ಸ್ಥಿರತೆ ತೋರಿಸದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ರೊಮಾರಿಯೊ ಶೆಫರ್ಡ್ ಸ್ಥಿರ ಪ್ರದರ್ಶನ ನೀಡದೇ ಇದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟ. ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಆರ್ಸಿಬಿ ತಂಡದ ವೇಗದ ಬೌಲರ್ ವಿಭಾಗದಲ್ಲಿ ಜೋಶ್ ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಆಟಗಾರ. ಭುವಿ ಒಂದು ತುದಿಯಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು. ದಯಾಳ್ ಅವರು ವಿಕೆಟ್ ಪಡೆಯುವ ಅನಿವಾರ್ಯತೆ ಇದೆ. ನುವಾನ್ ತುಶಾರ ಅವರ ಮೇಲೆ ತಂಡ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ತಂಡದ ಬೌಲರ್ಗಳು ಡೆತ್ ಓವರ್ಗಳಲ್ಲಿ ಶಿಸ್ತುಬದ್ಧ ದಾಳಿಯನ್ನು ಸಂಘಟಿಸಬೇಕಿದೆ. ಅಂದಾಗ ಗೆಲುವಿನ ಆಸೆ ಸಾಕಾರವಾಗುತ್ತದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಬಿಗುವಿನ ದಾಳಿ ನಡೆಸಬೇಕಿದೆ. ಇವರು ಮಿಡ್ಲ್ ಓವರ್ಗಳಲ್ಲಿ ರನ್ಗಳಿಗೆ ಕಡಿವಾಣ ಹಾಕಿ ವಿಕೆಟ್ ಪಡೆಯಬೇಕಿದೆ.