ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಈ ತಂಡ ಐಪಿಎಲ್ ಆರಂಭದಿಂದಲೂ ಆಡುತ್ತಿದೆ. ಆದರೆ ಇನ್ನೂ ಒಮ್ಮೆಯೂ ಟ್ರೋಫಿಗೆ ಮುತ್ತಿಟ್ಟಿಲ್ಲ. ಸತತ 17 ಆವೃತ್ತಿಗಳಲ್ಲಿ ಮಾಡಲಾಗದ ಸಾಧನೆಯನ್ನು ಮಾಡಲು ಆರ್ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ ಬೆಂಗಳೂರು ತಂಡ ಸ್ಟಾರ್ ಆಟಗಾರರಿಗೆ ಮಣೆ ಹಾಕಲಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ರಿಂದ 25ರ ವರೆಗೆ ಸೌದಿ ಅರೆಬಿಯಾದ ಜಿಡಾದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಹರಾಜಿಗೂ ಮುನ್ನ ಅಭಿಮಾನಿಗಳು ತಮ್ಮ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ.
ಐಪಿಎಲ್ ಮೆಗಾ ಆಕ್ಷನ್ಗೂ ಮುನ್ನ ರಿಟೇನ್ ಲೀಸ್ಟ್ ಬಿಡುಗಡೆ ಮಾಡಲಾಗಿದ್ದು, ಆರ್ಸಿಬಿ ಭರವಸೆಯ ಮೂವರು ಆಟಗಾರರಿಗೆ ಮಣೆ ಹಾಕಿದೆ. ಪ್ರಥಮ ಆಯ್ಕೆಯ ಆಟಗಾರನಾಗಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದು, ಇವರಿಗೆ ತಂಡ 21 ಕೋಟಿ ರೂ. ನೀಡಿದೆ. ಇನ್ನು ರಜತ್ ಪಟೀದಾರ್ ಸಹ ತಂಡದಲ್ಲಿದ್ದು, ಇವರಿಗೆ 11 ಕೋಟಿ ರೂ. ಹಾಗೂ ಯಶ್ ದಯಾಳ್ ಅವರಿಗೆ 5 ಕೋಟಿ ರೂ. ನೀಡಿ ಉಳಿಸಿಕೊಂಡಿದೆ. ಆರ್ಸಿಬಿ ಪರ್ಸ್ನಲ್ಲಿ ಇನ್ನು 83 ಕೋಟಿ ರೂ.ಗಳಿದ್ದು, 20ಕ್ಕೂ ಹೆಚ್ಚು ಆಟಗಾರರನ್ನು ಕೊಳ್ಳಬಹುದಾಗಿದೆ. ಆರ್ಸಿಬಿ ಬಳಿ ಮೂರು ರೈಟ್ ಟು ಮ್ಯಾಚ್ ಕಾರ್ಡ್ ಇದ್ದು, ಐಪಿಎಲ್ ಮೆಗಾ ಹರಾಜಿನಲ್ಲಿ ಬಳಸಬಹುದು.

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಮೂವರು ಮಾಜಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಈ ಆಟಗಾರರಿಗೆ ಬಾಜಿ ಕಟ್ಟಿ ತಮ್ಮ ತಂಡವನ್ನು ಬಲಾಢ್ಯ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ.
ಕರ್ನಾಟಕದ ಸ್ಟಾರ್ ಕ್ರಿಕೆಟ್ ಆಟಗಾರ ಕೆಎಲ್ ರಾಹುಲ್ ಅವರಿಗೆ ಆರ್ಸಿಬಿ ಬಾಜಿ ಕಟ್ಟಬಹುದು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದ ರಾಹುಲ್ ಅವರನ್ನು ತಂಡ ಕೈ ಬಿಟ್ಟಿತ್ತು. ಹೀಗಾಗಿ ಇವರು ಐಪಿಎಲ್ ಮೆಗಾ ಹರಾಜು ಅಂಗಳಕ್ಕೆ ಎಂಟ್ರಿ ನೀಡಿದ್ದಾರೆ. ಆರ್ಸಿಬಿ ಪರ ರಾಹುಲ್ 2013ರಲ್ಲಿ ಆಡಿದ್ದರು. ಅಲ್ಲದೆ ಆಡಿದ ಮೊದಲ ಆವೃತ್ತಿಯಲ್ಲಿ 417 ರನ್ ಸಿಡಿಸಿದ್ದರು. ಇವರು ಬೆಂಗಳೂರು ತಂಡದ ಪರ 2 ಆವೃತ್ತಿಗಳಲ್ಲಿ ಬ್ಯಾಟ್ ಮಾಡಿದ್ದರು. ಕನ್ನಡಿಗ ರಾಹುಲ್ ಆರ್ಸಿಬಿ ತಂಡಕ್ಕೆ ಎಂಟ್ರಿ ಆದರೆ, ಇವರು ವಿಕೆಟ್ ಕೀಪರ್, ಟಾಪ್ ಆರ್ಡರ್ ಬ್ಯಾಟರ್ ಹಾಗೂ ನಾಯಕರಾಗಿ ಬಲ ತುಂಬ ಬಲ್ಲರು.

ತಮಿಳು ನಾಡಿನ ಆಲ್ರೌಂಡರ್ 31 ವರ್ಷದ ವಾಷಿಂಗ್ಟನ್ ಸುಂದರ್ ಅವರಿಗೆ ಮಣೆ ಹಾಕಬಹದು. ಇವರು ಈಗಾಗಲೇ ಆರ್ಸಿಬಿ ಪರ 2018 ರಿಂದ 2021ರ ವರೆಗೆ ಆಡಿದ್ದು, 19 ವಿಕೆಟ್ ಹಾಗೂ 208 ರನ್ ಸಿಡಿಸಿದ್ದಾರೆ. ಇನ್ನು 2022ರ ಹರಾಜಿನಲ್ಲಿ ಇವರನ್ನು ಎಸ್ಆರ್ಎಚ್ ಖರೀದಿ ಮಾಡಿದರೂ ಹೆಚ್ಚಿನ ಅವಕಾಶ ಸಿಗಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್ ಕಂ ಬ್ಯಾಕ್ ಮಾಡಿದರು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ವಿಕೆಟ್ ಪಡೆದಿದ್ದರು. ಹೀಗಾಗಿ ಇವರ ಮೇಲೆ ಎಲ್ಲ ಮಾಲೀಕರ ಚಿತ್ತ ಈ ಯುವ ಸ್ಪಿನ್ ಬೌಲರ್ಗೆ ಮಣೆ ಹಾಕುವ ಸಾಧ್ಯತೆ ಇದೆ.

ಆರ್ಸಿಬಿಗೆ ಕಳೆದ ಆವೃತ್ತಿಯಲ್ಲಿ ಸ್ಪಿನ್ ಬೌಲರ್ಗಳ ಕೊರತೆ ಎದ್ದು ಕಂಡಿತು. ಈ ಬಾರಿಯ ಮೆಗಾ ಹರಾಜಿನಲ್ಲಿ ಬೆಂಗಳೂರು ತಂಡ ನುರಿತ ಸ್ಪಿನ್ ಬೌಲರ್ಗೆ ಮಣೆ ಹಾಕಲಿದೆ. ರಾಜಸ್ಥಾನ ರಾಯಲ್ಸ್ ಅವರಿಂದ ರಿಲೀಸ್ ಆಗಿರುವ ಯುಜುವೇಂದ್ರ ಚಹಾಲ್ ಅವರಿಗೆ ಆರ್ಸಿಬಿ ಟಾರ್ಗೆಟ್ ಮಾಡಲಿದೆ. ಆರ್ಸಿಬಿ ಪರ ಈಗಾಗಲೇ ಆಡಿರುವ ಚಹಾಲ್ ಮಿಡ್ಲ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. 2022ರ ವರೆಗೆ ಇವರು ಆರ್ಸಿಬಿ ತಂಡದ ಪರ ಆಡಿದ್ದಾರೆ. ಒಟ್ಟಾರೆ ಐಪಿಎಲ್ನಲ್ಲಿ 205 ವಿಕೆಟ್ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ.