ಇನ್ನೇನು ಐಪಿಎಲ್ 2025 ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ಮೆಗಾ ಹರಾಜಿನಲ್ಲಿ ಆರ್ಸಿಬಿ ಸಹ ಭಾಗವಹಿಸಲಿದ್ದು, ಅಭಿಮಾನಿಗಳ ಕಣ್ಣು ಈ ತಂಡದ ಮೇಲೆ ನೆಟ್ಟಿದೆ. ಬಹಳ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿರುವ ಆರ್ಸಿಬಿ, ತನ್ನ ತಂಡವನ್ನು ಹರಾಜಿನಲ್ಲಿ ಆಯ್ಕೆ ಮಾಡಲಿದೆ. ಈ ವೇಳೆ ಆರ್ಸಿಬಿ ಕನಿಷ್ಠ 15 ಜನರ ಆಟಗಾರರು ಹಾಗೂ ಗರಿಷ್ಠ 22 ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಈ ವೇಳೆ ಆರ್ಸಿಬಿ ಯಾವ ಪ್ಲೇಯರ್ ಉಳಿಸಿಕೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಆರ್ಸಿಬಿ ಈ ಬಾರಿ ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಬಿಸಿಸಿಐ ಆರು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ನೀಡಿತ್ತು. ಆದರೆ ಆರ್ಸಿಬಿ ಮೂವರನ್ನು ಮಾತ್ರ ಉಳಿಸಿಕೊಂಡಿದೆ. ಆರ್ಸಿಬಿ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ವಿರಾಟ್ ಕೊಹ್ಲಿ ಅವರಿಗೆ ಮಣೆ ಹಾಕಿದ್ದು, ಇವರಿಗೆ 21 ಕೋಟಿ ರೂ. ನೀಡಿದೆ. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ರಜತ್ ಪಟಿದಾರ ಅವರಿಗೆ 11 ಕೋಟಿ ನೀಡಿ ತಂಡದಲ್ಲಿ ಸ್ಥಾನ ನೀಡಿದೆ. ಉಳಿದಂತೆ ಯುವ ಆಟಗಾರ ಯಶ್ ದಯಾಳ್ ಅವರು ಕಳೆದ ಆವೃತ್ತಿಯಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಸ್ಥಾನ ನೀಡಿದೆ. ಇನ್ನು ಆರ್ಸಿಬಿ ಬಳಿ ಮೂರು ಆರ್ಟಿಎಂ ಕಾರ್ಡ್ಗಳು ಇವೆ.

RTM (ರೈಟ್ ಟು ಮ್ಯಾಚ್ ಕಾರ್ಡ್)- RTM ಕಾರ್ಡ್ ಅನ್ನು IPL ಹರಾಜಿನಲ್ಲಿ ಬಳಸಲಾಗುತ್ತದೆ. ಇದರಲ್ಲಿ ಆಟಗಾರನ ಹರಾಜು ನಡೆಯುತ್ತದೆ. ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸುತ್ತಾರೆ. ಕೊನೆಗೆ ಒಂದು ಮೊತ್ತಕ್ಕೆ ಈ ಪ್ಲೇಯರ್ ಒಂದು ತಂಡಕ್ಕೆ ಹೋಗುತ್ತಾನೆ ಎಂದು ತಿಳಿದ ಬಳಿಕ, ಆ ಆಟಗಾರ ಈ ಹಿಂದೆ ಪ್ರತಿನಿಧಿಸಿದ ತಂಡವನ್ನು ಹರಾಜು ದಾರ ಕೇಳುತ್ತಾರೆ. ನೀವು ಬಿಡ್ ಆದಷ್ಟು ಹಣವನ್ನು ನೀಡಿ ಇವರನ್ನು ಖರೀದಿಸುತ್ತೀರಾ ಎಂದು. ಆಗ ಮಾಲೀಕರು ಹೌದು ಎಂದಾದರೆ ಆ ಆಟಗಾರ ಆ ತಂಡವನ್ನು ಪ್ರತಿನಿಧಿಸುತ್ತಾನೆ.
ಆರ್ಸಿಬಿ ಬಳಿ ಇಂತಹ ಮೂರು ಕಾರ್ಡ್ಗಳು ಇವೆ. ಆರ್ಸಿಬಿ ಯಾವ ಪ್ಲೇಯರ್ಗಳಿಗೆ ಈ ಕಾರ್ಡ್ ಬಳಕೆ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಕಳೆದ ಆವೃತ್ತಿಯ ಹರಾಜಿನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಪ್ಲೇಯರ್ ಫಾಫ್ ಡುಪ್ಲೇಸಿಸ್. ಇವರು ಇತ್ತೀಚಿಗೆ ಕೆರಿಬಿಯನ್ ಲೀಗ್ನಲ್ಲೂ ಸ್ಥಿರ ಪ್ರದರ್ಶನವನ್ನು ನೀಡಿ ತಾವು ಮುನ್ನಡೆಸಿದ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದರು. ಇವರು ಟಾಪ್ ಆರ್ಡರ್ನಲ್ಲಿ ಒಬ್ಬ ಬೆಸ್ಟ್ ಪ್ಲೇಯರ್. ಅಲ್ಲದೆ ಬೆಸ್ಟ್ ಫೀಲ್ಡರ್. ಇವರನ್ನು ಬಿಟ್ಟು ಕೊಡುವ ಗೋಜಿಗೆ ಆರ್ಸಿಬಿ ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿ ಆರ್ಸಿಬಿ ಈ ಪ್ಲೇಯರ್ ಮೇಲೆ ಆರ್ಟಿಎಂ ಅಸ್ತ್ರ ಪ್ರಯೋಗಿಸಬಹುದು.
17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಕೊನೆಯಲ್ಲಿ ಅಬ್ಬರಿಸಿದ ಆಟಗಾರ ವಿಲ್ ಜಾಕ್ಸ್. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಸ್ಥಿರ ಪ್ರದರ್ಶನ ನಿಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಇವರಿಗೆ ಆರ್ಸಿಬಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ಮಿಡ್ಲ್ ಆರ್ಡರ್ನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಶತಕ ಸಿಡಿಸಿದ್ದು. ಹೀಗಾಗಿ ಆರ್ಸಿಬಿ ಇವರ ಮೇಲೆ ನಂಬಿಕೆ ಇಟ್ಟು ಇವರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕದ ಸ್ಟಾರ್ ಬೌಲರ್ ವಿಜಯ್ ಕುಮಾರ್ ವೈಶಾಖ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪ್ಲೇಯರ್. ಇವರನ್ನು ಕೊಳ್ಳಲು ಈ ಬಾರಿ ಹಲವು ಮಾಲೀಕರು ಹಣವನ್ನು ಸುರಿಯಬಹುದು. ಆದರೆ ಇವರ ಕ್ಷಮತೆಯನ್ನು ಗುರುತಿಸಿರುವ ಆರ್ಸಿಬಿ ಇವರಿಗೆ ಹರಾಜಿನಲ್ಲಿ ಆರ್ಟಿಎಂ ಬಳಸಿ ತಂಡದಲ್ಲಿ ಸ್ಥಾನ ನೀಡಬಹುದಾಗಿದೆ.