ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಹೈವೋಲ್ಟೇಜ್ ಫೈಟ್ ಶುಕ್ರವಾರ ನಡೆಯಲಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ, ಈ ಪಂದ್ಯ ಕುತೂಹಲ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದಾರೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಮೇಲೆ ನೆಟ್ಟಿರಲಿವೆ.
ಬೆಂಗಳೂರು ತಂಡ ಈ ಅಂಗಳದಲ್ಲಿ ಗೆಲುವಿನ ನಗೆ ಬೀರಿ ದಶಕಗಳೇ ಕಳೆದಿವೆ. ಈ ಮೈದಾನದಲ್ಲಿ ಜಯ ಸಾಧಿಸಬೇಕಾದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಈ ಸ್ಟಾರ್ ಆಟಗಾರರು ಅಬ್ಬರದ ಆಟವನ್ನು ಆಡಬೇಕಿದೆ. ಈ ಪಾಂಡವರು ಚೆನ್ನೈ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದೇ ಆದಲ್ಲಿ ಗೆಲುವಿನ ಆಸೆ ಚಿಗುರುತ್ತದೆ.

ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿರುವ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಆಡಿದ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ವಿರಾಟ್ ಭರವಸೆ ಹೆಚ್ಚಿಸಿದ್ದಾರೆ. ಚೆನ್ನೈ ವಿರುದ್ಧವೂ ಇವರ ಅಂಕಿ ಅಂಶ ಅಮೋಘವಾಗಿವೆ. ಈ ಪಂದ್ಯದಲ್ಲಿ ಮತ್ತೊಮ್ಮೆ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಇನ್ನು ವಿರಾಟ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಫಿಲ್ ಸಾಲ್ಟ್ ಸಹ ಕೆಕೆಆರ್ ವಿರುದ್ಧ ಆರ್ಭಟಿಸಿದ್ದರು. ಚೆನ್ನೈ ವಿರುದ್ಧ ಸಾಲ್ಟ್ ತಮ್ಮ ನೈಜ್ಯ ಆಟವನ್ನು ಆಡಿದ್ದೇ ಆದಲ್ಲಿ ಗೆಲುವಿನ ಕನಸು ನನಸಾಗುತ್ತದೆ.
ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ ಸ್ಪಿನ್ ಬೌಲಿಂಗ್ನ್ನು ಸಮರ್ಥವಾಗಿ ಎದುರಿಸುವ ಆಟಗಾರ. ಇವರು ಚೆನ್ನೈ ತಂಡದ ಬಿಗುವಿನ ಸ್ಪಿನ್ ದಾಳಿಗೆ ಕಠಿಣ ಸವಾಲು ಹಾಕಬೇಕಿದೆ. ಅಂದಾಗ ಮಾತ್ರ ಆರ್ಸಿಬಿ ದೊಡ್ಡ ಮೊತ್ತ ಕಲೆ ಹಾಕಬಹುದು. ಈ ಮೈದಾನದಲ್ಲಿ ಸ್ಪಿನ್ ಬೌಲರ್ಗಳ ಪಾತ್ರ ಮುಖ್ಯವಾಗಿದ್ದು, ಬ್ಯಾಟರ್ಗಳು ಸಹ ಸ್ಪಿನ್ ವಿರುದ್ಧ ನೆಲಕಚ್ಚಿ ಆಡಬೇಕಿದೆ. ಈ ಕೆಲಸವನ್ನು ರಜತ್ ಮಾಡುವ ವಿಶ್ವಾಸ ಹೊಂದಿದ್ದಾರೆ.
ಆಲ್ರೌಂಡರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಗ್ಸ್ಟೋನ್, ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನೆರವಾಗಬೇಕಿದೆ. ಇವರು ಮಿಡ್ಲ್ ಓವರ್ನಲ್ಲಿ ವಿಕೆಟ್ ಬೀಳದಂತೆ ನಿಂತು ರನ್ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ. ಇನ್ನು ಬೌಲಿಂಗ್ನಲ್ಲಿ ಇವರು ಸ್ಪಿನ್ ಮೂಲಕ ಎದುರಾಳಿಗಳನ್ನು ಕಾಡುವ ಅನವಿರ್ಯತೆ ಇದೆ.
ಆರ್ಸಿಬಿ ತಂಡವನ್ನು ಸೇರಿಕೊಂಡಿರುವ ಭುವನೇಶ್ವರ್ ಕುಮಾರ್, ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಇವರು ಸ್ವಿಂಗ್ ಬೌಲಿಂಗ್ಗೆ ಹೆಸರುವಾಸಿ. ಭುವಿ ಪವರ್ ಪ್ಲೇ ಹಾಗೂ ಡೆತ್ ಓವರ್ನಲ್ಲಿ ಮೊನಚಾದ ದಾಳಿ ಸಂಘಟಿಸಿ ಚೆನ್ನೈ ಬ್ಯಾಟರ್ಗಳನ್ನು ಕಾಡಬೇಕು. ಅಂದಾಗ ಮಾತ್ರ ಬೆಂಗಳೂರು ತಂಡದ ಗೆಲುವಿನ ಆಸೆ ಚಿಗುರುತ್ತದೆ.