ಮೇ 18 ಶನಿವಾರ, ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಕೌಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್ ಆಗಿದ್ದಾರೆ.
ಶುರುವಿನಲ್ಲಿ ಸ್ಪಿನ್ನರ್ಗಳ ವಿರುದ್ಧ ರನ್ ಗಳಿಸಲು ಪರದಾಡಿದ ಫಾಪ್, ಬಳಿಕ ಲಯ ಕಂಡುಕೊಂಡರು. ಭರ್ಜರಿ ಬ್ಯಾಟಿಂಗ್ ಮಾಡಿದ ಫಾಪ್ 12ನೇ ಓವರ್ನಲ್ಲಿ ಅರ್ಧಶತಕವನ್ನೂ ಬಾರಿಸಿದರು.

13ನೇ ಓವರ್ ಮಾಡಲು ಬಂದ ಸಿಎಸ್ಕೆ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರ ಬೌಲಿಂಗ್ನ ಎಸೆತದಲ್ಲಿ ರಜತ್ ಪಾಟಿದಾರ್ ಬಲವಾಗಿ ಬ್ಯಾಟ್ ಬೀಸಿದರು. ಆದರೆ ಚೆಂಡು ನೇರವಾಗಿ ಸ್ಯಾಂಟ್ನರ್ ಅವರ ಬೆರಳ ತುದಿಗೆ ತಾಗಿ ನಾನ್ ಸ್ಟ್ರೈಕರ್ ವಿಕೆಟ್ಗೆ ಬಡಿಯಿತು. ಹೀಗಾಗಿ ಮೂರನೇ ಅಂಪೈರ್ ಅವರಿಗೆ ಔಟ್ಗಾಗಿ ಸಿಎಸ್ಕೆ ಆಟಗಾರರು ಮನವಿ ಮಾಡಿದರು.
ಈ ವೇಳೆ ಚೆಂಡು ವಿಕೆಟ್ಗೆ ಬಡಿಯುವ ಮುನ್ನವೇ ಫಾಪ್ ತನ್ನ ಬ್ಯಾಟ್ ಅನ್ನು ಕ್ರೀಸ್ ಒಳಗೆ ಇಟ್ಟಿದ್ದರು. ಪರಿಶೀಲನೆ ನಡೆಸಿದ ಮೂರನೇ ಅಂಪೈರ್, ಔಟೆಂದು ಸಿಎಸ್ಕೆ ಪರವಾಗಿ ನಿರ್ಧಾರ ನೀಡಿದರು.
ಆದರೆ, ಫಾಫ್ ಅವರ ಬ್ಯಾಟ್ ಗಾಳಿಯಲ್ಲಿದೆಯೇ ಅಥವಾ ನೆಲಕ್ಕೆ ತಾಗಿದೆಯೇ ಎಂಬುದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಸ್ವಲ್ಪ ಸಮಯದವರೆಗೂ ಪರಿಶೀಲನೆ ನಡೆಸಿದ ಮೂರನೇ ಅಂಪೈರ್ ಮೈಕೆಲ್ ಗಾಫ್, ಔಟ್ ಕೊಟ್ಟರು.
ಚೆಂಡು ಸ್ಯಾಂಟ್ನರ್ ಕೈಗೆ ತಾಗಿದ್ದು ಮಾತ್ರ ಮೂರನೇ ಅಂಪೈರ್ ಪರಿಶೀಲನೆ ವೇಳೆ ಸ್ಪಷ್ಟವಾಗಿ ಕಂಡು ಬಂತು. ಆದರೆ ಬ್ಯಾಟ್ ತಾಗಿದ್ದನ್ನು ಸರಿಯಾಗಿ ಪರಿಶೀಲಿಸದೆ ಔಟ್ ಕೊಟ್ಟಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಈ ನಿರ್ಧಾರದಿಂದ ಕ್ರೀಸ್ನಲ್ಲಿದ್ದ ರಜತ್ ಪಾಟಿದಾರ್, ಫಾಫ್ ಸೇರಿದಂತೆ ಆರ್ಸಿಬಿ ಆಟಗಾರರಿಗೆ ಅಚ್ಚರಿ ಮೂಡಿಸಿತು.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ಅಂಪೈರ್ಗಳಿಂದ ಆರ್ಸಿಬಿ ತಂಡಕ್ಕೆ ಸಾಕಷ್ಟು ಮೋಸವಾಗಿದೆ. ಇಂತಹ ಕೆಟ್ಟ ಅಂಪೈರಿಂಗ್ ಐಪಿಎಲ್ನಲ್ಲಿ ಬಿಟ್ಟರೆ ಬೇರೆಲ್ಲೂ ನೋಡಿಲ್ಲ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಕೆಕೆಆರ್ ವಿರುದ್ಧ ವಿರಾಟ್ ಕೊಹ್ ಔಟ್ ಆದಾಗ ನೋ ಬಾಲ್ ಕೊಡಲಿಲ್ಲ, ಡೆಲ್ಲಿ ವಿರುದ್ಧ ಸಂಜು ಸ್ಯಾಮ್ಸನ್ ಕ್ಯಾಚ್ ಔಟ್, ವೈಡ್ಗಳು , ನೋಬಾಲ್ಗಳು, ರನೌಟ್ಗಳು, ಟಾಸ್ ಪೌಲ್ ಸೇರಿದಂತೆ ಹಲವು ಮೋಸಗಳಿಗೆ ಅಂಪೈರ್ಗಳು ಕಾರಣರಾಗಿದ್ದಾರೆ. ಆದರೂ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ.