ಮೇ 18 ಶನಿವಾರ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲೇ ಇಂದು ಅತ್ಯಂತ ವಿಶೇಷವಾದ ದಿನವಾಗಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದ್ದು, ಕೊನೆಯ ಒಂದು ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಾಕೌಟ್ ಪಂದ್ಯ ನಡೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾತ್ರಿ 7.30ರಿಂದ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ಒಂದು ತಂಡ ಪ್ಲೇ ಆಫ್ಗೆ ಲಗ್ಗೆ ಇಡಲಿದೆ.

ಆರ್ಸಿಬಿ ಎದುರು ಸುಲಭ ಗೆಲುವಿನೊಂದಿಗೆ ಚೆನ್ನೈ ಪ್ಲೇಆಫ್ನಲ್ಲಿ ಕೊನೆಯ ಸ್ಥಾನಕ್ಕೆ ಸ್ಥಾನ ಪಡೆಯುತ್ತದೆ. ಆದರೆ ಆರ್ಸಿಬಿಗೆ ಪ್ಲೇಆಫ್ನಲ್ಲಿ ನಾಲ್ಕನೇ ತಂಡವಾಗಲು ದೊಡ್ಡ ಗೆಲುವಿನ ಅಗತ್ಯವಿದೆ. ಹೀಗಾಗಿ ಈ ಪಂದ್ಯದ ಕುತೂಹಲ ಅಭಿಮಾನಿಗಳಲ್ಲಿ ಇನ್ನಷ್ಟು ಹೆಚ್ಚಿಸಿದೆ.
ಈ ಋತುವಿನಲ್ಲಿ ಆರ್ಸಿಬಿ ಒಟ್ಟು 13 ಪಂದ್ಯಗಳನ್ನು ಆಡಿದ್ದು, 6 ಪಂದ್ಯ ಗೆದ್ದು 7 ರಲ್ಲಿ ಸೋಲು ಕಂಡಿದೆ. ಪ್ರಸ್ತುತ 12 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಸಿಎಸ್ಕೆ ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದೆ. 7 ಪಂದ್ಯಗಳನ್ನು ಗೆದ್ದು, 6 ರಲ್ಲಿ ಸೋತಿದೆ. ಸದ್ಯ 14 ಅಂಕಗಳೊಂದಿಗೆ ಸಿಎಸ್ಕೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಒಟ್ಟು 32 ಬಾರಿ ಎದುರಾಗಿವೆ. ಈ ಅವಧಿಯಲ್ಲಿ ಸಿಎಸ್ಕೆ 21 ಪಂದ್ಯಗಳನ್ನು ಗೆದ್ದಿದ್ದರೆ, ಆರ್ಸಿಬಿ ಕೇವಲ 10 ಪಂದ್ಯಗಳನ್ನು ಗೆದ್ದಿದೆ. ಈ ಎರಡು ತಂಡಗಳ ನಡುವಿನ ಒಂದು ಪಂದ್ಯವೂ ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯವಾಗಿದೆ.
ಈ ಎರಡು ತಂಡಗಳ ನಡುವೆ ಕಳೆದ 5 ಪಂದ್ಯಗಳಲ್ಲಿ ಸಿಎಸ್ಕೆ 4 ಮತ್ತು ಆರ್ಸಿಬಿ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಬೆಂಗಳೂರಿನ ವಿರುದ್ಧ ಸಿಎಸ್ಕೆ ಗರಿಷ್ಠ ಸ್ಕೋರ್ 226 ರನ್ ಮತ್ತು ಚೆನ್ನೈ ವಿರುದ್ಧ ಆರ್ಸಿಬಿ ಉತ್ತಮ ಸ್ಕೋರ್ 218 ರನ್ ಆಗಿದೆ. ಆರ್ಸಿಬಿ ವಿರುದ್ಧ ಸಿಎಸ್ಕೆ ಪ್ರಾಬಲ್ಯ ಸಾಧಿಸಿದೆ.
ಮುಂದಿನ ಒಂದು ವಾರದ ವರೆಗೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಇಂದು ಕೂಡ ಪಂದ್ಯ ನಡೆಯುವ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಮಳೆ ಬಂದು ನಿಂತರೆ, ಮೈದಾನದಲ್ಲಿ ಇರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನೀರನ್ನು ಹೊರ ಹಾಕಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಲ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ : ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೆರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್, ಮಹೇಶ್ ತೀಕ್ಷಣ.