ಮೇ 19 ಭಾನುವಾರ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧದ ನಾಕೌಟ್ ಪಂದ್ಯದಲ್ಲಿ ಅಂತಿಮ ಓವರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಗೆಲುವು ತಂದುಕೊಟ್ಟ ವೇಗದ ಬೌಲರ್ ಯಶ್ ದಯಾಳ್ ಅವರು ಹೀರೋ ಆಗಿ ಹೊರಹೊಮ್ಮಿದ್ದಾರೆ.
ಸಿಎಸ್ಕೆ ಪರವಾಗಿ ಹೋಗುತ್ತಿದ್ದ ಹೈಲೋಲ್ಟೇಜ್ ಪಂದ್ಯವನ್ನು ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಆರ್ಸಿಬಿ ಗೆಲುವಿನ ಕಡೆ ಯಶ್ ದಯಾಳ್ ತಿರುಗಿಸಿದರು. ಈ ಮೂಲಕ ಸಿಎಸ್ಕೆ ತಂಡವನ್ನು 27 ರನ್ಗಳಿಂದ ಸೋಲಿಸಿದ ಆರ್ಸಿಬಿ ಪ್ಲೇ ಆಫ್ನಲ್ಲಿ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.

ಕಳೆದ ಋತುವಿನಲ್ಲಿ ಗುಜರಾತ್ ಟೈಟನ್ಸ್ ಪರ ಆಡುತ್ತಿದ್ದ ಯಶ್ ದಯಾಳ್ ಕಳಪೆ ಬೌಲಿಂಗ್ ಪ್ರದರ್ಶನದಿಂದ ಭಾರೀ ಸುದ್ದಿಯಾಗಿದ್ದರು. ಅಲ್ಲದೆ ಯಶ್ ದಯಾಳ್ ಕ್ರಿಕೆಟ್ ವೃತ್ತಿಜೀವನ ಮುಂದಿನ ದಿನಗಳಲ್ಲಿ ಕಷ್ಟಕರ ಎಂಬ ಮಾತುಗಳು ಸಹಾ ಕೇಳಿ ಬಂದಿದ್ದವು.
ಇದಕ್ಕೆ ಬಹುಮುಖ ಕಾರಣ ಎಂದರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಯಶ್ ದಯಾಳ್ ತಮ್ಮ ಬೌಲಿಂಗ್ನಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ಕೆಕೆಆರ್ ಗೆಲುವಿಗೆ ಕೊನೆಯ ಓವರ್ನಲ್ಲಿ 29 ರನ್ಗಳ ಅವಶ್ಯಕತೆಯಿತ್ತು.
ಈ ವೇಳೆ ಯಶ್ ದಯಾಳ್ ಕೊನೆ ಓವರ್ ಬೌಲಿಂಗ್ ಮಾಡಲು ಬಂದಿದ್ದರು. ಕ್ರೀಸ್ನಲ್ಲಿದ್ದ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್ ಯಶ್ ದಯಾಳ್ ಅವರಿಗೆ 5 ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಬಳಿಕ ಯಶ್ ದಯಾಳ್ ಸಾಕಷ್ಟು ಮಾನಸಿಕ ತೊಂದರೆಗೆ ಒಳಗಾಗಿದ್ದರು.
ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೂ ಒಳಗಾಗಿದ್ದರು. ನಂತರ ಗುಜರಾತ್ ಟೈಟನ್ಸ್ ತಂಡದಿಂದ ಯಶ್ ದಯಾಳ್ ಅವರನ್ನು ಕೈ ಬಿಡಲಾಗಿತ್ತು. ಈ ವರ್ಷ ಆರ್ಸಿಬಿ ಯಶ್ ಅವರಿಗೆ 5 ಕೋಟಿ ರೂ. ಕೊಟ್ಟು ತಂಡಕ್ಕೆ ಸೇರಿಸಿಕೊಂಡಿತ್ತು.
ಇದೀಗ ಅದೇ ಯಶ್ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಸುಮಾರು ಒಂದು ವರ್ಷದ ಬಳಿಕ ಕೊನೆಯ ಓವರ್ನಲ್ಲಿ ಆರ್ಸಿಬಿ ತಂಡಕ್ಕೆ ಜಯ ತಂದು ಕೊಟ್ಟಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ.
ಅಂದು ಅವಮಾನಕ್ಕೀಡಗಿದ್ದ ಯಶ್ ಅವರಿಗೆ ಇಂದು ಸನ್ಮಾನ ನಡೆಯುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ವೈರಲ್ ಮಾಡಿದ್ದಾರೆ. ಜೊತೆಗೆ, ಮಾಜಿ ಕ್ರಿಕೆಟಿಗರು, ಸಹ ಆಟಗಾರರು, ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಜಗತ್ತಿನ ಹಲವರು ಯಶ್ ಅವರನ್ನು ಪ್ರಶಂಸಿಸಿ ಶುಭಾಶಯ ಕೋರಿದ್ದಾರೆ.
ಮತ್ತೊಂದೆಡೆ ಯಶ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿರುವ ರಿಂಕು ಸಿಂಗ್ ವಿಶೇಷ ಪೋಸ್ಟ್ ಹಾಕಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸೆಲ್ಯೂಟ್ ಎಮೋಜಿಯೊಂದಿಗೆ, 'ದೇವರ ಪ್ಲಾನ್ ಬೇಬಿ' (God's plan baby) ಎಂದು ರಿಂಕು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೂ ಸಾಕಷ್ಟು ಉತ್ತಮ ಪ್ರಕ್ರಿಯೆಗಳು ಸಿಕ್ಕಿವೆ.
ಚೆನ್ನೈಗೆ ಪ್ಲೇಆಫ್ ತಲುಪಲು ಕೊನೆಯ ಓವರ್ನಲ್ಲಿ 17 ರನ್ಗಳ ಅಗತ್ಯವಿತ್ತು. ಈ ವೇಳೆ ನಾಯಕ ಫಾಪ್ ಡು ಪ್ಲೆಸಿಸ್ ಅವರು ಕೊನೆಯ ಓವರ್ ಅನ್ನು ಯಶ್ ದಯಾಳ್ ಅವರಿಗೆ ನೀಡಿದರು.
ಫಾಪ್ ನೀಡಿದ ಜವಾಬ್ದಾರಿ ಹೊತ್ತು ಬೌಲಿಂಗ್ ಮಾಡಿದ ಯಶ್ ದಯಾಳ್ಗೆ ಮೊದಲ ಎಸೆತದಲ್ಲೇ ಎಂ ಎಸ್ ಧೋನಿ ಸಿಕ್ಸರ್ ಹೊಡೆಯುವ ಮೂಲಕ ಆರ್ಸಿಬಿಗೆ ಶಾಕ್ ನೀಡಿದ್ದರು. ಈ ಸಿಕ್ಸರ್ ಹೋದ ನಂತರವೂ ಸಂಯಮ ಕಳೆದುಕೊಳ್ಳದ ದಯಾಳ್ ಎರಡನೇ ಎಸೆತದಲ್ಲಿ ಎಂಎಸ್ ಧೋನಿ ಅವರನ್ನು ಔಟ್ ಮಾಡಿದರು.
ಈ ಸಮಯದಲ್ಲಿ ಸಿಎಸ್ಕೆ ಗೆಲುವಿಗೆ 4 ಎಸೆತಗಳಲ್ಲಿ 11 ರನ್ ಬೇಕಿತ್ತು. ಆದರೆ ಶಾರ್ದೂಲ್ ಠಾಕೂರ್ ಎದುರಿಸಿದ ಮೊದಲ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಂತರ ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸಿ ಸ್ಟ್ರೈಕ್ ಅನ್ನು ರವೀಂದ್ರ ಜಡೇಜಾ ಅವರಿಗೆ ಬಿಟ್ಟುಕೊಟ್ಟರು.
ಜಡೇಜಾ ಎದುರಿಸಿದ ಕೊನೆಯ ಎರಡು ಎಸೆತಗಳಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ ಬೌಲಿಂಗ್ ಮಾಡಿದ ಯಶ್, ಜಡೇಜಾ ಅವರನ್ನು ಕಟ್ಟಿ ಹಾಕಿದ್ದರು. ಹೀಗಾಗಿ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿತ್ತು.