ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ರೋಚಕತೆ ಹೆಚ್ಚುತ್ತಿದೆ. ಈ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿದಿದೆ. ಸೋಮವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಆರ್ಸಿಬಿ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಮುಂದಾಯಿತು.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 264 ರನ್ಗಳನ್ನು ಕಲೆ ಹಾಕಿತ್ತು. ಇದೇ ಧಾಟಿಯಲ್ಲಿ ಡೆಲ್ಲಿ ಬ್ಯಾಟಿಂಗ್ ನಡೆಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆರ್ಸಿಬಿ ವೇಗದ ಬೌಲರ್ಗಳ ಕರಾರುವಾಕ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ಗಳು ಧಾರಾಶಾಹಿಯಾದರು. ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದ ಆರ್ಸಿಬಿ ವೇಗದ ಬೌಲರ್ಗಳ ಬೆಂಕಿಯಂತಹ ಚೆಂಡುಗಳನ್ನು ಎದುರಿಸುವಲ್ಲಿ ಡೆಲ್ಲಿ ಬ್ಯಾಟರ್ಗಳು ಹೈರಾಣಾದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಆರು ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡೆಲ್ಲಿ ತಂಡದ ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆರ್ಸಿಬಿ ತಂಡದ ವೇಗದ ಬೌಲರ್ಗಳಾದ ಜೋಶ್ ಹ್ಯಾಜಲ್ವುಡ್ ಹಾಗೂ ಭುವನೇಶ್ವರ್ ಕುಮಾರ್ ಮಾರಕ ದಾಳಿ ನಡೆಸಿದರು. ಈ ಇಬ್ಬರೂ ವೇಗದ ಬೌಲರ್ಗಳು ಪವರ್ ಪ್ಲೇನಲ್ಲಿ ತಲಾ ಮೂರು ವಿಕೆಟ್ ಪಡೆದರು.
ಆರ್ಸಿಬಿ ಈ ಪಂದ್ಯವನ್ನು ಅರ್ಧ ಗೆಲ್ಲಲು ಕಾರಣ ಆ ಒಂದು ವಿಕೆಟ್. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಆರ್ಸಿಬಿ ಪಾಳಯದಲ್ಲಿ ಗೆಲುವಿನ ಸಂಭ್ರಮ ಕಾಣಿಸಿಕೊಂಡಿತ್ತು. ಜೋಶ್ ಹ್ಯಾಜಲ್ವುಡ್ ಎಸೆದ ಬೌನ್ಸರ್ಗೆ ಪುಲ್ ಮಾಡಲು ಹೋದ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಈ ವಿಕೆಟ್ ನಿಜಕ್ಕೂ ಪಂದ್ಯದ ಚಿತ್ರಣವನ್ನೇ ಬದಲಿಸಿತು.