2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳುಲು ನಡೆಸಿದ ಮಹಾ ಕಾಳಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಸಿ ತನ್ನ ಪ್ರಾಬಲ್ಯ ಮೆರೆದಿದೆ. ಉತ್ತಮ ರನ್ ರೇಟ್ ಮೂಲಕ ಅಂಕಪಟ್ಟಿಯಲ್ಲಿ 12 ಪಾಯಿಂಟ್ಗಳೊಂದಿಗೆ 5ನೇ ಸ್ಥಾನಕ್ಕೆ ಆರ್ಸಿಬಿ ಜಿಗಿದಿದೆ.
ಮುಂದಿನ ಪಂದ್ಯದಲ್ಲಿ ಮೇ 18 ರಂದು ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ಗೆ ಟಿಕೆಟ್ ಪಡೆಯಲು ಆರ್ಸಿಬಿಗೆ 5 ದಿನಗಳ ಕಾಲಾವಕಾಶವಿದೆ. ಮತ್ತೊಂದೆಡೆ ಉಳಿದ ತಂಡಗಳ ಫಲಿತಾಂಶದ ಮೇಲೂ ಆರ್ಸಿಬಿ ಹಣೆಬರಹ ನಿರ್ಧಾರವಾಗಲಿದೆ. ಆದರೆ ಇದೀಗಾ ಡೆಲ್ಲಿ ಸೋಲಿಸಿರುವ ಆರ್ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿದೆ.

ಭಾನುವಾರ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಆರ್ಸಿಬಿಯ ಅಗ್ರಮಾನ್ಯ ಬ್ಯಾಟರ್ ರಜತ್ ಪಾಟಿದಾರ್ ಅರ್ಧಶತಕ, ಅಕ್ಷರ್ ಪಟೇಲ್ ಅವರ ನಾಯಕತ್ವದ ಇನ್ನಿಂಗ್ಸ್, ಇಶಾಂತ್ ಮತ್ತು ಕೊಹ್ಲಿಯ ತಮಾಷೆಯ ವಿಶೇಷ ಘಟನೆ, ಅನುಷ್ಕಾ ಶರ್ಮಾ ಅವರ ಗೆಲುವಿನ ಸಂಭ್ರಮ, ಡ್ರೆಸ್ಸಿಂಗ್ ರೂಮ್ನಲ್ಲಿ ಆರ್ಸಿಬಿ ವಿಜಯೋತ್ಸವದ ಪ್ರತಿಯೊಂದು ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಇದನ್ನು ನೋಡಿದ ಅಭಿಮಾನಿಗಳು ಹಲವು ರೀತಿ ವರ್ಣನೆ ಮಾಡುತ್ತಿದ್ದಾರೆ.
ಈ ಎಲ್ಲ ಕ್ಷಣಗಳ ಮಧ್ಯೆ ಆರ್ಸಿಬಿ ಸಾಮಾಜಿಕ ಜಾಲತಾಣದ ಆಡ್ಮಿನ್ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ. ಆರ್ಸಿಬಿ ಎದುರು ಪಂದ್ಯವಾಡುವ ಮೊದಲು ಡೆಲ್ಲಿ ತನ್ನ ಅಧಿಕೃತ ಟ್ವೀಟರ್ (ಎಕ್ಸ್)ನಲ್ಲಿ "ನಮಸ್ಕಾರ ಬೆಂಗಳೂರು. ಭೇಟಿ ಆಗೋಣ ಚಿನ್ನಸ್ವಾಮಿಯಲ್ಲಿ" ಎಂದು ಬರೆದುಕೊಳ್ಳುವ ಮೂಲಕ ಆರ್ಸಿಬಿ ತಂಡಕ್ಕೆ ಎಚ್ಚರಿಕೆ ಸಂದೇಶ ನೀಡಿತ್ತು.
ಆದರೆ ಆರ್ಸಿಬಿ ಇದಕ್ಕೆ ತಕ್ಕಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಿಂಚಿನ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ತಂಡವನ್ನು ತವರಿನಲ್ಲಿ ಕಟ್ಟಿ ಹಾಕಿತ್ತು. ಇದೀಗಾ ಪಂದ್ಯ ಬಳಿಕ ಆರ್ಸಿಬಿ ಆಡ್ಮಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಾಲೆದಿದ್ದಾರೆ. "ಭೇಟಿ ಆಗೋಕೆ ಬಂದು ಬೇಟೆ ಆಗೋದ್ರು" ಎಂದು ಡೆಲ್ಲಿ ಕ್ಯಾಪಿಟಲ್ಸ್ ಆಡ್ಮಿನ್ಗೆ ಆರ್ಸಿಬಿ ಆಡ್ಮಿನ್ ಟಕ್ಕರ್ ಕೊಟ್ಟಿದ್ದಾರೆ. ಇತ್ತ ಈ ರಿಪ್ಲೈಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿಯ ಈ ಟ್ವೀಟ್ ಸಖತ್ ವೈರಲ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಶುರು ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಡೆಲ್ಲಿ ವಿರುದ್ಧ ವಿಲ್ ಜ್ಯಾಕ್ಸ್ ಮತ್ತು ರಜತ್ ಪಾಟಿದಾರ್ ಬಿರುಸಿನ ಬ್ಯಾಟಿಂಗ್ ಮಾಡಿದರು. ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ 9 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತ್ತು. ಬಳಿಕ ಆರ್ಸಿಬಿ ನೀಡಿದ 188 ರನ್ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಆರ್ಸಿಬಿ ಸಾಂಘಿಕ ಬೌಲಿಂಗ್ ದಾಳಿಗೆ ತಲೆ ಬಾಗಿತು. 19.1 ಓವರ್ಗಳಲ್ಲಿ ತನ್ನಲ್ಲೆ ವಿಕೆಟ್ಗಳನ್ನು ಕಳೆದುಕೊಂಡ ಡೆಲ್ಲಿ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ನಾಯಕ ಅಕ್ಸರ್ ಪಟೇಲ್ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಹೀಗಾಗಿ ಆರ್ಸಿಬಿ 47 ರನ್ಗಳ ಭರ್ಜರಿ ಜಯ ಕಂಡಿದೆ.