ಮೇ 18 ಶನಿವಾರ, ಐಪಿಎಲ್ 2024ರ ಹೈವೋಲ್ಟೇಜ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆಎ) ತಂಡಗಳು ಮುಖಾಮುಖಿಯಾಗಲಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ನಡೆಯಲಿದೆ.
ಉಭಯ ತಂಡಗಳು ಪ್ಲೇ ಆಫ್ನ ಕೊನೆಯ ನಾಲ್ಕನೇ ಸ್ಥಾನಕ್ಕೆ ತಲುಪಲು ಈ ಪಂದ್ಯವನ್ನು ಗೆಲ್ಲುವುದು ಮುಖ್ಯವಾಗಿದೆ. ಸಿಎಸ್ಕೆ ಸುಲಭವಾಗಿ ಪಂದ್ಯ ಗೆದ್ದರೆ ಸಾಕು ಪ್ಲೇ ಆಫ್ಗೆ ಹೋಗಲಿದೆ. ಆದರೆ, ಆರ್ಸಿಬಿ ಗೆಲುವಿನಲ್ಲಿ ಭಾರೀ ಲೆಕ್ಕಚಾರವಿದೆ. ಉತ್ತಮ ರನ್ ರೇಟ್ನೊಂದಿಗೆ ಆರ್ಸಿಬಿ, ಸಿಎಸ್ಕೆ ಎದುರು ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ.

ಈಗಾಗಲೇ ಐಪಿಎಲ್ 2024ರ ಪ್ಲೇ ಆಫ್ಗೆ ರಾಜಸ್ಥಾನ ರಾಯಲ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅರ್ಹತೆ ಪಡೆದಿವೆ. ಆದರೆ ಇದೀಗ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯಕ್ಕೆ ಮಳೆಯ ಭೀತಿ ಶುರುವಾಗಿದೆ.
ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯ ರಾತ್ರಿ ಹೊತ್ತು ನಡೆಯುವುದರಿಂದ ಈ ಸಮಯದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಲ್ಲಿ ಕಳೆದೆರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ . ಗುರುವಾರ ರಾತ್ರಿಯೂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಸುರಿದಿದ್ದು, ಶುಕ್ರವಾರ ಬೆಳಗಿನ ಜಾವದವರೆಗೂ ವರುಣನ ಅರ್ಭಟ ಜೋರಾಗಿತ್ತು.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇಂದು ಮಧ್ಯ ಬೆಂಗಳೂರು ಪ್ರದೇಶದಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬಲವಾದ ಗಾಳಿ, ಚಂಡಮಾರುತ ಮತ್ತು ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ರಾತ್ರಿ 7:30 ಕ್ಕೆ ಪಂದ್ಯ ಪ್ರಾರಂಭವಾಗುವ ಸಮಯದಲ್ಲಿ, ತಾಪಮಾನವು 23 ° ಸೆಲ್ಸಿಯಸ್ ಆಗರಲಿದೆ. ಜೊತೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ.
ವಿಶ್ವದಲ್ಲೇ ಎಂ ಚಿನ್ನಸ್ವಾಮಿ ಸ್ಟೇಡಿಯಂ ಉತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಸಬ್ಏರ್ ವ್ಯವಸ್ಥೆಯಿಂದಾಗಿ ಮಳೆ ನಿಂತ ಕೇವಲ 15 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದಾಗಿದೆ.

ಎಷ್ಟೇ ಭಾರೀ ಮಳೆ ಸುರಿದರೂ ಆಟಕ್ಕೆ ಮೈದಾನವನ್ನು ತ್ವರಿತವಾಗಿ ಸಿದ್ಧಗೊಳಿಸಬಹುದು. ಅತ್ಯಾಧುನಿಕ ತಂತ್ರಜ್ಞಾನದ ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆಯು ಪ್ರತಿ ನಿಮಿಷಕ್ಕೆ 10 ಸಾವಿರ ಲೀಟರ್ ನೀರನ್ನು ಮೈದಾನದಿಂದ ಹೊರಹಾಕುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ.
ಪಂದ್ಯದ ನಿಗದಿತ ಸಮಯದ ವರೆಗೆ ಮಳೆ ನಿಲ್ಲದೆ ಹೋದಲ್ಲಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆಗ ಚೆನ್ನೈ ಸೂಪರ್ ಕಿಂಗ್ಸ್ ನೇರವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಆರ್ಸಿಬಿ ಮುಂದಿನ ಹಂತ ತಲಪುವ ಆಸೆ ಮಣ್ಣು ಪಾಲಾಗುತ್ತದೆ.
ಆರ್ಸಿಬಿ ಪ್ಲೇ ಆಫ್ ತಲುಪಲು ಚೆನ್ನೈ ವಿರುದ್ಧ ಗೆಲ್ಲಲೇಬೇಕು. ಅಷ್ಟೇ ಅಲ್ಲ, ಪ್ಲೇ ಆಫ್ಗೆ ಲಗ್ಗೆ ಇಡಲು ಆರ್ಸಿಬಿ ಉತ್ತಮ ರನ್ ರೇಟ್ನೊಂದಿಗೆ ಪಂದ್ಯವನ್ನು ಗೆಲ್ಲಬೇಕಾದ ಅನಿರ್ವಾಯದಲ್ಲಿದೆ.
ಮೊದಲು ಆರ್ಸಿಬಿ ಬ್ಯಾಟಿಂಗ್ ಮಾಡಿ 200ಕ್ಕೂ ಹೆಚ್ಚು ರನ್ಗಳ ಟಾರ್ಗೆಟ್ ಅನ್ನು ಸಿಎಸ್ಕೆ ತಂಡಕ್ಕೆ ನೀಡಬೇಕು. ಬಳಿಕ ಸಿಎಸ್ಕೆ ವಿರುದ್ಧ 18 ರನ್ ಅಂತರದಿಂದ ಗೆಲ್ಲಬೇಕು. ಇದು ಸಾಧ್ಯವಾಗದೆ ಇದ್ದಲ್ಲಿ ಚೆನ್ನೈ ನೀಡುವ ಗುರಿಯನ್ನು ಕೇವಲ 18.1 ಓವರ್ಗಳಲ್ಲಿ ಮುಟ್ಟಬೇಕು. ಆಗ 14 ಅಂಕಗಳೊಂದಿಗೆ ಚೆನ್ನೈಗಿಂತ ಮೇಲಕ್ಕೆ ತಲುಪಿ ಪ್ಲೇ ಆಫ್ಗೆ ಅರ್ಹತೆ ಪಡೆಯಲಿದೆ.
ತಲಾ 5 ಓವರ್ಗಳಿಗೆ ಪಂದ್ಯ ನಡೆದರೆ ಇಂತಹ ಪರಿಸ್ಥಿತಿಯಲ್ಲಿ ಆರ್ಸಿಬಿ ಗೆಲ್ಲುವುದು ಕಷ್ಟು ಎನ್ನಲಾಗಿದೆ. ಏಕೆಂದರೆ ಈ ಸನ್ನಿವೇಶದಲ್ಲಿ ಆರ್ಸಿಬಿ ಮೊದಲು ಬ್ಯಾಟ್ ಮಾಡಿದರೆ, 100 ರನ್ಗಳ ಆಸುಪಾಸಿನಲ್ಲಿ ಟಾರ್ಗೆಟ್ ನೀಡಿ, 60 ರನ್ಗಳಿಂದ ಗೆಲುವು ಸಾಧಿಸಬೇಕು.
ಅಲ್ಲದೆ ಚೆನ್ನೈ ನೀಡುವ ಗುರಿಯನ್ನು ಬೆನ್ನಟ್ಟಿದ ಪಕ್ಷದಲ್ಲಿ ಆರ್ಸಿಬಿ 2 ಓವರ್ಗಳ ಅಂತರದಲ್ಲಿ ಆ ಮೊತ್ತವನ್ನು ಮುಟ್ಟಬೇಕು.ಕ್ರಿಕೆಟ್ ನಿಯಮಗಳ ಪ್ರಕಾರ, 20 ಓವರ್ಗಳ ಲೆಕ್ಕಾಚಾರವನ್ನು ಐದು ಓವರ್ಗಳಿಗೆ ಇಳಿಸಿದಾಗ ರನ್ಗಳ ಟಾರ್ಗೆಟ್ ಹಿಗ್ಗುತ್ತದೆ. ಓವರ್ಗಳ ಟಾರ್ಗೆಟ್ ಕಡಿಮೆ ಆಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಲ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ : ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೆರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್, ಮಹೇಶ್ ತೀಕ್ಷಣ.