ಮೇ 12 ಭಾನುವಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಡಲು ಸಿದ್ದವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಆದರೆ ಈ ಪಂದ್ಯಕ್ಕೆ ಇದೀಗ ಮಳೆಯ ಭಯ ಶುರುವಾಗಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿತ್ತು. ಶನಿವಾರ ಕೆಲವು ಕಡೆ ಮಾತ್ರ ಸಾಧಾರಣ ಮಳೆಯಾಗಿದ್ದು, ಇಂದು ಕೂಡ ಮಧ್ಯಾಹ್ನಯಿಂದಲ್ಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಹನಿ ಮಳೆ ಶುರುವಾಗಿದೆ.

ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ. ಹಗಲಿನಲ್ಲಿ ಹೆಚ್ಚು ಬಿಸಿಲು ಕಾಣಿಸಿಕೊಳ್ಳಲಿದ್ದು, ಸಂಜೆ ವೇಳೆ ಮಳೆ ಬರಲಿದೆ. ಅಲ್ಲದೆ, ರಾತ್ರಿ 11ರ ನಂತರ ಮಳೆ ಆರ್ಭಟ ಜೋರಾಗಿರಲಿದೆ ಎಂದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೀಗಾಗಿ ಇಂದು ಆರ್ಸಿಬಿ ಪ್ಲೇಆಫ್ ಆಸೆ ಜೀವಂತವಾಗಿರಬೇಕೆಂದರೆ ಡೆಲ್ಲಿ ವಿರುದ್ಧ ಗೆಲ್ಲವುದರ ಜೊತೆಗೆ ಮಳೆ ಬರದಂತೆ ವರುಣ ದೇವನನ್ನು ಪಾರ್ಥನೆ ಮಾಡಬೇಕಾದ ಸ್ಥಿತಿಯಲ್ಲಿದೆ. ಜೊತೆಗೆ ರಾಜಸ್ತಾನ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಬೇಕು. ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲಬೇಕು. ಗುಜರಾತ್ ಟೈಟನ್ಸ್ ಎರಡು ಪಂದ್ಯ ಪರಾಭವಗೊಳ್ಳಬೇಕು. ಇದರ ಮಧ್ಯೆ ಒಂದು ವೇಳೆ ಮಳೆ ಅಬ್ಬರಿಸಿದರೆ ಆರ್ಸಿಬಿ ಪ್ಲೇ ಆಫ್ ಕನಸು ಬಹುತೇಕ ಕಮರಲಿದೆ.
ಮೇ 7 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಮಾಡಿರುವುದು ಸಾಬೀತಾದ ಹಿನ್ನೆಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮ ಕೈಗೊಂಡಿದೆ.
ರಿಷಬ್ ಪಂತ್ ಅವರನ್ನು ಐಪಿಎಲ್ ಒಂದು ಪಂದ್ಯಕ್ಕೆ ಬ್ಯಾನ್ ಮಾಡಿದ್ದು, 30 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಹೀಗಾಗಿ ಭಾನುವಾರ ನಡೆಯಲಿರುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ತಂಡದಿಂದ ಹೊರಗುಳಿದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.