17ನೇ ಆವತ್ತಿ ಐಪಿಎಲ್ನಲ್ಲಿ ಆರ್ಸಿಬಿ ತಂಡಕ್ಕೆ ತವರಿನಲ್ಲಿ ಮೊದಲ ಸೋಲು ಎದುರಾಗಿದೆ. ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪ್ರಸಕ್ತ ಋತುವಿನ 10ನೇ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ ಸೋಲು ಕಂಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ತವರಿನ ತಂಡದ ಡಾಮಿನ್ಸ್ಗೆ ಬ್ರೇಕ್ ಬಿದ್ದಿದೆ. ಅಲ್ಲದೆ ಕೆಕೆಆರ್ ಸಹ ಎದುರಾಳಿ ಅಂಗಳದಲ್ಲಿ ಗೆಲುವು ಸಾಧಿಸಿ ಮಿಂಚಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ಗೆ 182 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 16.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಕಲೆ ಹಾಕಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು. ಆರ್ಸಿಬಿ ತವರಿನಲ್ಲಿ ನಡೆದ ಪಂದ್ಯವನ್ನು ಕೈ ಚೆಲ್ಲುವುದಕ್ಕೆ ಕಾರಣವಾದ ಅಂಶಗಳು ಯಾವವು ಎಂಬ ಬಗ್ಗೆ ವರದಿ ಇಲ್ಲಿದೆ.

ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ಗಳು ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಮಹತ್ವದ ಕಾಣಿಕೆ ನೀಡುವಲ್ಲಿ ವಿಫಲರಾದರು. ಈ ಆಟಗಾರರು ನೆಲಕ್ಕೂರಿ ನಿಂತರೂ ಸಹ ಬಿಗ್ ಇನ್ನಿಂಗ್ಸ್ ಕಟ್ಟಲಿಲ್ಲ. ಆಲ್ರೌಂಡರ್ ಕ್ಯಾಮರೂನ್ ಗ್ರೀನ್ 33 ರನ್ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ರಸೆಲ್ ತೋಡಿದ ಖೆಡ್ಡಾಗೆ ಬಲಿಯಾದರು. ಗ್ಲೇನ್ ಮ್ಯಾಕ್ಸ್ವೆಲ್ಗೆ ಜೀವದಾನಗಳೂ ಸಿಕ್ಕರೂ ಸಹ ಇದರ ಲಾಭ ಪಡೆಯಲಿಲ್ಲ. ಇವರ ಇನ್ನಿಂಗ್ಸ್ ಸಹ 28 ರನ್ಗಳಿಗೆ ಕೊನೆಯಾಯಿತು.
ಆರ್ಸಿಬಿ ತಂಡ ಬ್ಯಾಟಿಂಗ್ ಮಾಡುವಾಗ ಕೊನೆಯ ನಾಲ್ಕು ಓವರ್ಗಳಲ್ಲಿ ನಿರೀಕ್ಷಿತ ರನ್ಗಳನ್ನು ಕಲೆ ಹಾಕಲಿಲ್ಲ. 17ನೇ ಓವರ್ನಲ್ಲಿ ಕೇವಲ 7 ರನ್ ಬಂದವು ಅಲ್ಲದೆ ಒಂದು ವಿಕೆಟ್ ಸಹ ಆರ್ಸಿಬಿ ಕಳೆದುಕೊಂಡಿತು. 18ನೇ ಓವರ್ನಲ್ಲೂ ಕೇವಲ 5 ರನ್ ಬಂದಿದ್ದು, ಈ ಓವರ್ನಲ್ಲೂ ಒಂದು ವಿಕೆಟ್ ಬಿದ್ದಿತು. 19ನೇ ಓವರ್ನಲ್ಲಿ 13 ಹಾಗೂ ಕೊನೆಯ ಓವರ್ನಲ್ಲಿ 16 ರನ್ ಬಂದಿದ್ದರಿಂದ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಮೊದಲ ಎರಡು ಓವರ್ಗಳಲ್ಲೂ ಡಬಲ್ ಡಿಜಿಟ್ನಲ್ಲಿ ರನ್ಗಳು ಬಂದಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು.
ಆರ್ಸಿಬಿ ತಂಡದ ಯುವ ಆಟಗಾರರು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ರಜತ್ ಪಟಿದಾರ ಬ್ಯಾಟಿಂಗ್ಗೆ ಬಂದಾಗ ಇನ್ನು ಸುಮಾರು ಆರು ಓವರ್ಗಳು ಇದ್ದವು. ಆದರೆ ಬಂದಂತೆ ಬಿಗ್ ಹಿಟ್ ಬಾರಿಸಲು ಹೋಗಿ ಔಟ್ ಆದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಅನುಜ್ ರಾವತ್ ಸಹ ತಮ್ಮ ಮೇಲೆ ತಂಡ ಇಟ್ಟ ಭರವಸೆಯನ್ನು ಹುಸಿಯಾಗಿಸಿದರು. ಮಯಾಂಕ್ ದಗಾರ್ ಸ್ಪಿನ್ ವರ್ಕ್ಔಟ್ ಆಗಲಿಲ್ಲ. ತಂಡದಲ್ಲಿ ಸ್ಪಿನ್ ಬೌಲರ್ಗಳ ಕೊರತೆ ಇರುವುದು ಕಂಡು ಬಂದಿತು.

ಸಾಮಾನ್ಯವಾಗಿ ಪವರ್ ಪ್ಲೇನಲ್ಲಿ ಬ್ಯಾಟರ್ಗಳ ಮೆರೆದಾಟ ಜೋರಾಗಿರುತ್ತದೆ. ಆದರೆ ಕೆಕೆಆರ್ ಬ್ಯಾಟರ್ಗಳು ಆರ್ಭಟವನ್ನೇ ನಡೆಸಿದರು. ಮೊದಲ ಓವರ್ನಿಂದಲೇ ಆರ್ಸಿಬಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಸ್ಟಾರ್ ಆಟಗಾರರು ಕೆಕೆಆರ್ ನಗುವಿಗೆ ಕಾರಣರಾದರು. ಮೊದಲ ಪವರ್ ಪ್ಲೇ (6 ಓವರ್) 85 ರನ್ ನೀಡಿ ಕೈ ಸುಟ್ಟುಕೊಂಡಿತು. ದುಬಾರಿ ಬೌಲರ್ ಅಲ್ಜಾರಿ ಜೋಸೆಫ್ ಕಟ್ಟುನಿಟ್ಟಿನ ದಾಳಿ ನಡೆಸಲಿಲ್ಲ.
ಆರ್ಸಿಬಿ ಫೀಲ್ಡಿಂಗ್ನಲ್ಲಿ ಸಖತ್ ಬದಲಾವಣೆಗಳನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಫ್ ಚಾನ್ಸ್ನ್ನು ಕನ್ವರ್ಟ್ ಮಾಡೋದು ಬಿಡಿ, ಕೈಯಲ್ಲಿದ್ದ ಕ್ಯಾಚ್ನ್ನೇ ಕೈ ಚೆಲ್ಲಿ ಮುಮೆಂಟ್ ಎದುರಾಳಿ ಕಡೆ ಶಿಫ್ಟ್ ಆಗುವಂತೆ ಮಾಡಿದರು. ಇನ್ನು ಬೌಂಡರಿ ತಡೆಯುವುದು, ಚೆಂಡನ್ನು ಬೇಗನೆ ಹಿಡಯುವಲ್ಲಿ ಆರ್ಸಿಬಿ ಹಿನ್ನಡೆ ಅನುಭವಿಸಿತು.