ಶುಕ್ರವಾರ, ಮಾರ್ಚ್ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ರೋಚಕ ಪಂದ್ಯವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಏಕೆಂದರೆ, ಐಪಿಎಲ್ನಲ್ಲಿ ಪರಸ್ಪರ ಎದುರಾಳಿಯಾಗಿ ಆಡುವಾಗ ಜಗಳಕ್ಕೆ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅಪ್ಪುಗೆ ನೀಡಿ ನೆರೆದಿದ್ದ ಪ್ರೇಕ್ಷಕರು ಮತ್ತು ಕ್ರಿಕೆಟ್ ಲೋಕವನ್ನು ಅಚ್ಚರಿಗೊಳಿಸಿದರು.

ಆರ್ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಪಾನೀಯ ವಿರಾಮದ ಸಮಯದಲ್ಲಿ ಮೈದಾನಕ್ಕೆ ಬಂದ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಬಳಿ ಹೋಗಿ ಪ್ರೀತಿಯಿಂದ ಅಪ್ಪುಗೆಯ ವಿನಿಮಯ ಹಂಚಿಕೊಂಡರು.
ಈ ಮೂಲಕ ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ನಡುವಿನ ವೈಯಕ್ತಿಕ ಜಿದ್ದು ಎಲ್ಲವೂ ಸರಿಯಾಗಿದಂತೆ ಕಂಡುಬಂತು. ಗಂಭೀರ್ ಮತ್ತು ಕೊಹ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದರೊಂದಿಗೆ ಇಬ್ಬರ ನಡುವಿನ ದ್ವೇಷದ ಊಹಾಪೋಹಗಳಿಗೆ ಅಂತ್ಯ ಹಾಡಿದರು.
ಅಪ್ಪುಗೆ ಸಂದರ್ಭದಲ್ಲಿ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿರುವುದಕ್ಕೆ ಅಭಿನಂದನೆ ತಿಳಿಸಿದರು ಮತ್ತು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕೆ ಶ್ಲಾಘಿಸಿದರು ಎನ್ನಲಾಗುತ್ತಿದೆ.

ಕಳೆದ ವರ್ಷ ಗೌತಮ್ ಗಂಭೀರ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು ಮತ್ತು ಆರ್ಸಿಬಿ ವಿರುದ್ಧದ ಪಂದ್ಯದ ನಂತರ, ವಿರಾಟ್ ಕೊಹ್ಲಿಯೊಂದಿಗೆ ಮೈದಾನದಲ್ಲಿ ತೀವ್ರ ವಾಗ್ವಾದ ನಡೆಸಿದ್ದರು.
ಆ ಘಟನೆಯ ಬಳಿಕ ಇಬ್ಬರಿಗೂ ಪಂದ್ಯದ ಶೇ.100ರಷ್ಟು ದಂಡ ವಿಧಿಸಲಾಗಿತ್ತು. ಇದು ಇಬ್ಬರ ನಡುವೆ ಮೈದಾನದಲ್ಲಿ ನಡೆದ ಮೊದಲ ವಾಗ್ವಾದವೇನಲ್ಲ.

ಆದರೆ, ಶುಕ್ರವಾರ ನಡೆದ ಆರ್ಸಿಬಿ ಮತ್ತು ಕೆಕೆಆರ್ ಪಂದ್ಯದಲ್ಲಿ ನಡೆದದ್ದು ಇದಕ್ಕೆ ತದ್ವಿರುದ್ಧವಾಗಿತ್ತು. ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿದರು ಮತ್ತು ಟೈಮ್-ಔಟ್ ಸಮಯದಲ್ಲಿ ಆರ್ಸಿಬಿ ಸ್ಟಾರ್ ಆಟಗಾರನನ್ನು ತಬ್ಬಿಕೊಂಡರು.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ವಿಕೆಟ್ ನಷ್ಟಕ್ಕೆ ಸ್ಕೋರ್ ಬೋರ್ಡ್ನಲ್ಲಿ ರನ್ಗಳನ್ನು ಗಳಿಸಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 183 ರನ್ಗಳ ಸವಾಲಿನ ಗುರಿ ನೀಡಿತು.
ನೆರೆದಿದ್ದ ತವರಿನ ಅಭಿಮಾನಿಗಳ ಎದುರು ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 83 ರನ್ ಬಾರಿಸಿದರು.