ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ ತಂಡವನ್ನು ಸೆಣೆಸಾಡಲಿದೆ. ಕೆಕೆಆರ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಆರ್ಸಿಬಿ ಈ ಪಂದ್ಯದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದು ಆಟಗಾರರ ಪ್ರದರ್ಶನ ಕುತೂಹಲ ಮೂಡಿಸಿದೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಾಕಷ್ಟು ಅದ್ಭುತ ಆಟಗಾರರನ್ನು ಹೊಂದಿದ್ದು ಕಠಿಣ ಸವಾಲನ್ನು ಹೇಗೆ ಎದುರಸಿಲಿದೆ ಎಂಬುದು ಪ್ರಶ್ನೆಯಾಗಿದೆ.
ಇನ್ನು ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆರ್ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು ತಂಡ ಸೂಕ್ತ ರೀತಿಯ ಪರಾಮರ್ಶೆ ಮಾಡಿಕೊಂಡಿದೆ ಎಂದಿರುವ ಫಾಫ್ ಡು ಪ್ಲೆಸಿಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣೆಸಾಡಲು ಸಂಪೂರ್ಣ ಸಿದ್ಧ ಎಂದಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 205 ರನ್ಗಳ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ಹಠಾತ್ ಕುಸಿತ್ತಕ್ಕೆ ಒಳಗಾಗಿತ್ತು. ಹೀಗಾಘಿ ಆರ್ಸಿಬಿ ಕೇವಲ 123 ರನ್ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕ ನಾಲ್ಕು ಓವರ್ಗಳಲ್ಲಿ ಉತ್ತಮ ಲಯದಲ್ಲಿದ್ದಂತೆ ಕಂಡು ಬಂದರು ಕೂಡ ಕೆಕೆಆರ್ ತಂಡದ ಸ್ಪಿನ್ನರ್ಗಳ ದಾಳಿಗೆ ಆಘಾತ ಅನುಭವಿಸುವಂತಾಗಿತ್ತು.
"ಮೊದಲ ಪಂದ್ಯದಂತೆಯೇ ನಾವು ಎರಡನೇ ಪಂದ್ಯದ ಬಳಿಕವೂ ಪರಾಮರ್ಶೆ ನಡೆಸಿದ್ದೇವೆ. ಯಾವ ವಿಭಾಗದಲ್ಲಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಗುರುತಿಸಿಕೊಂಡಿದ್ದೇವೆ. ಕಳೆದ ಪಂದ್ಯದಲ್ಲಿ ನೀಡಲು ಸಾಧ್ಯವಾಗದ ಪ್ರದರ್ಶನವನ್ನು ನೀಡಲು ಆಟಗಾರರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ" ಎಂದಿದ್ದಾರೆ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್.
"ನಾವು ಯಾವೆಲ್ಲಾ ವಿಭಾಗದಲ್ಲಿ ಇನ್ನಷ್ಟು ಉತ್ತಮವಾಗಬಹುದು ಎಂಬುದರತ್ತ ಗಮನಹರಿಸಿದ್ದೇವೆ. ಪಂದ್ಯದಲ್ಲಿ ಸೋತರೂ ಅಥವಾ ಗೆದ್ದರೂ ಇದು ಬಹಳ ಮುಖ್ಯವಾಗುತ್ತದೆ. ನಾವು ಎಲ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಿದೆ ಎಂಬುದರತ್ತ ಮಾತ್ರ ಗಮನಹರಿಸಿಲ್ಲ. ಯಾವೆಲ್ಲಾ ವಿಭಾಗದಲ್ಲಿ ಇನ್ನಷ್ಟು ಹೆಚ್ಚಿನ ಪ್ರದರ್ಶನ ನೀಡಬಹುದು ಎಂಬುದನ್ನು ಕೂಡ ಗುರುತಿಸಿದ್ದೇವೆ. ದೊಡ್ಡ ಸೋಲಿನ ಬಳಿಕ ಈ ರೀತಿಯ ವಿಮರ್ಶೆಗಳ ಅಗತ್ಯವಿದೆ" ಎಂದಿದ್ದಾರೆ ಫಾಫ್ ಡು ಪ್ಲೆಸಿಸ್.
ಮುಂದುವರಿದು ಮಾತನಾಡಿದ ಅವರು ಎದುರಾಳಿ ತಂಡದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ತವರಿನ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಆದರೆ ಅವೇ ಪಂದ್ಯದಲ್ಲಿ ಅದು ಸೋಲು ಕಂಡಿದೆ. ಈ ಬಗ್ಗೆ ಮಾತನಾಡಿರುವ ಫಾಫ್ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಾಕಷ್ಟು ಸಮತೋಲಿತವಾಗಿದೆ ಎಂದಿದ್ದಾರೆ.
"ಹೊಸದಾಗಿ ಸೇರ್ಪಡೆಯಾದ ಎರಡು ತಂಡಗಳು ಕೂಡ ಉತ್ತಮವಾಗಿ ಆಡುತ್ತಿದೆ. ಎಲ್ಎಸ್ಜಿ ಬಹಳ ಸಮತೋಲಿತವಾದ ತಂಡವಾಗಿದೆ. ಅವರು ಬಹಳ ಉತ್ತಮ ತಂಡವಾಗಿದ್ದು ನಾವು ಈ ಪಂದ್ಯದಲ್ಲಿ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಬೇಕಿದೆ" ಎಂದಿದ್ದಾರೆ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್.