RCB IPL 2026: ಚಿನ್ನಸ್ವಾಮಿಯಲ್ಲಿ ಬುಧವಾರ (ಏಪ್ರಿಲ್ 15) ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಅವರು ತಮ್ಮ ತಂಡದ ಪ್ಲಾನ್ ಹಾಗೂ ಉತ್ತಮ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ತಮ್ಮ ತವರು ಮೈದಾನವಾದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಎಸ್ಜಿ ನೀಡಿದ 147 ರನ್ಗಳ ಗುರಿಯನ್ನು ಸುಲಭವಾಗಿ ಮುಟ್ಟಿ ಭರ್ಜರಿ ಜಯ ಸಾಧಿಸಿತು. ಆರ್ಸಿಬಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರು, ತವರು ಮೈದಾನದ ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಂಡಿರುವುದೇ ತಂಡದ ಯಶಸ್ಸಿನ ಪ್ರಮುಖ ಕಾರಣ ಎಂದು ತಿಳಿಸಿದರು.
"ಈ ವರ್ಷ ನಾವು ಪಿಚ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇವೆ ಎಂದು ನನಗನ್ನಿಸುತ್ತದೆ. ನಾವು ಪಿಚ್ಗೆ ತಕ್ಕಂತೆ ಹೊಂದಿಕೊಳ್ಳುತ್ತಿದ್ದೇವೆ. ತಾಂತ್ರಿಕವಾಗಿ ಕೆಲಸ ಮಾಡುತ್ತಿದ್ದೇವೆ. ಇದೇ ಕಾರಣಕ್ಕಾಗಿಯೇ ನಾವು ತವರಿನ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಿದ್ದೇವೆ. ನಾವು ಎಷ್ಟು ಚಾಣಾಕ್ಷತನದಿಂದ ಮತ್ತು ಸಮರ್ಥವಾಗಿ ಆಟ ಆಡುತ್ತಿದ್ದೇವೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ," ಎಂದು ಹೇಳಿದರು.
ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಕಾರಣ ವಿರಾಟ್ ಕೊಹ್ಲಿ ಅವರು, ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, 147 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕಿಳಿದರು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಅವರು, 34 ಎಸೆತಗಳಲ್ಲಿ ಆರು ಬೌಂಡರಿ, ಒಂದು ಸಿಕ್ಸರ್ ಸಹಿತ 49 ರನ್ ಗಳಿಸಿದರು. ಈ ಆವೃತ್ತಿಯಲ್ಲಿ ಒಟ್ಟು 228 ರನ್ ಗಳಿಸಿರುವ ಅವರು ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
"ಕಳೆದ ಪಂದ್ಯದಲ್ಲಿ ಅವರಿಗೆ ಸಣ್ಣ ಗಾಯದ ಸಮಸ್ಯೆಯಿತ್ತು, ಹಾಗಾಗಿ ಅವರು ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ನಮಗೆ ಅನ್ನಿಸಿತು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ಹೆಚ್ಚಿನ ಒತ್ತಡ ಹೇರಲು ನಮಗೆ ಇಷ್ಟವಿರಲಿಲ್ಲ, ಅದಕ್ಕಾಗಿಯೇ ಅವರಿಗೆ ವಿಶ್ರಾಂತಿ ನೀಡಲಾಯಿತು. ನಮ್ಮ ತಂಡದ ಪ್ರಮುಖರಾಗಿರುವ ಅವರನ್ನು ನಾವು ಅಪಾಯಕ್ಕೆ ಸಿಲುಕಿದಲು ಬಯಸುವುದಿಲ್ಲ," ಎಂದು ಜಿತೇಶ್ ಶರ್ಮಾ ಅವರು ತಿಳಿಸಿದರು ತಿಳಿಸಿದರು.
"ಬೌಲರ್ಗಳ ಮೇಲೆ ಸವಾರಿ ಮಾಡುವುದೇ ನಮ್ಮ ಈಗಿನ ಗುರಿಯಾಗಿದೆ. ಸಂದರ್ಭ ಯಾವುದೇ ಇರಲಿ, ನಾನು ಬ್ಯಾಟಿಂಗ್ ಮಾಡಲು ಹೋದಾಗ ಪ್ರತಿ ಎಸೆತವೂ ಮುಖ್ಯ. ನಮ್ಮ ಎಲ್ಲಾ ಬೌಲರ್ಗಳು ಸಹ ಎದುರಾಳಿ ತಂಡಗಳ ಮೇಲೆ ಉತ್ತಮ ದಾಳಿ ನಡೆಸಲು ಬಯಸುತ್ತಾರೆ," ಎಂದು ಹೇಳಿದರು.
ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವ ವೇಗಿ ರಸಿಕ್ ದಾರ್ ಸಲಾಮ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ರಸಿಕ್ ಅವರು 24 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಅಮೋಘ ಪ್ರದರ್ಶನ ನೀಡಿದ್ದರು. "ರಸಿಕ್ ಈಗ ತೋರಿಸುತ್ತಿರುವ ಕೌಶಲಗಳು ಅವರಲ್ಲಿ ಮೊದಲೇ ಇದ್ದವು. ಆದರೆ ಅವುಗಳನ್ನು ಯಾವಾಗ ಬಳಸಬೇಕು ಎಂಬುದನ್ನು ಅವರು ಈಗ ಕಲಿತಿದ್ದಾರೆ," ಎಂದು ಹೇಳಿದರು.
"ನಿಮಗೆ ಉತ್ತಮ ಮಾರ್ಗದರ್ಶಕರು, ಕೋಚ್ ಮತ್ತು ಪೂರಕ ವಾತಾವರಣ ಸಿಕ್ಕಾಗ, ನಿಮ್ಮಲ್ಲಿರುವ ಅಸ್ತ್ರಗಳನ್ನು ಯಾವಾಗ, ಎಲ್ಲಿ ಮತ್ತು ಅದರ ಅಗತ್ಯವಿದೆಯೇ ಎಂದು ಅರಿತುಕೊಂಡು ಬಳಸುವುದನ್ನು ನೀವು ಅರಿಯುತ್ತೀರಿ. ಬಳಿಕ ನೀವು ಆ ಅಸ್ತ್ರಗಳನ್ನು ಯಾವಾಗಲೂ ಹರಿತಗೊಳಿಸುತ್ತಿರಬೇಕು. ಉದಾಹರಣೆಗೆ, ದೇಶೀಯ ಕ್ರಿಕೆಟ್ನಲ್ಲಿ ಅವರು ನನ್ನೊಂದಿಗೆ ಬರೋಡಾ ತಂಡದಲ್ಲಿ ಆಡುವಾಗ ತಮ್ಮ ಯಾರ್ಕರ್ ಮತ್ತು ಸ್ಲೋಯರ್ ಎಸೆತಗಳ ಬಗ್ಗೆ ಸಾಕಷ್ಟು ಶ್ರಮವಹಿಸಿದ್ದರು ಎಂದು ರಸಿಕ್ ದಾರ್ ಸಲಾಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇಗಿ ಜೋಶ್ ಹ್ಯಾಜಲ್ವುಡ್ ಅವರ ಸುಧಾರಿತ ಫಿಟ್ನೆಸ್ ಬಗ್ಗೆಯೂ ಮಾತನಾಡಿದರು. ಅವರು ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಕೇವಲ 20 ರನ್ ನೀಡಿ ಒಂದು ವಿಕೆಟ್ ಪಡೆದರು. ಅವರಿಗೆ ಸರಿಯಾದ ಸಮಯಕ್ಕೆ ವಿಶ್ರಾಂತಿ ಸಿಕ್ಕಿದೆ. ಮೊದಲಿಗಿಂತ ಹೆಚ್ಚು ವೇಗವಾಗಿ ಮತ್ತು ಫಿಟ್ ಆಗಿದ್ದಾರೆ ಎಂದು ನನಗನ್ನಿಸುತ್ತದೆ. ಈಗ ಅವರಿಗೆ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಆತ್ಮವಿಶ್ವಾಸವಿದೆ," ಎಂದು ಜಿತೇಶ್ ಶರ್ಮಾ ಹೇಳಿದರು.
"ನನ್ನ ಬ್ಯಾಟಿಂಗ್ ಬಗ್ಗೆ ನಾನು ಯಾವತ್ತೂ ತೃಪ್ತನಾಗುವುದಿಲ್ಲ. ನಾನು ಅತಿಯಾಗಿ ಬ್ಯಾಟಿಂಗ್ ಅಭ್ಯಾಸ ಮಾಡುವುದರಿಂದ ನನ್ನ ಕೋಚ್ಗಳು ಯಾವಾಗಲೂ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಕೆಳ ಕ್ರಮಾಂಕದ ಬ್ಯಾಟರ್ ಆಗಿ ನನಗೆ ಕೆಲವು ಪಂದ್ಯಗಳಲ್ಲಿ ಕೇವಲ ಐದು ಎಸೆತಗಳು ಸಿಗಬಹುದು, ಇನ್ನು ಕೆಲವು ಪಂದ್ಯಗಳಲ್ಲಿ 20 ಎಸೆತಗಳು ಸಿಗಬಹುದು ಎಂದು ನನಗೆ ತಿಳಿದಿದೆ. ಆದರೆ ನನ್ನ ಉದ್ದೇಶ ಯಾವಾಗಲೂ ತಂಡವನ್ನು ಗೆಲ್ಲಿಸುವುದೇ ಆಗಿರುತ್ತದೆ ಎಂದು ಹೇಳಿದರು.