2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಅವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಕೆಟ್ಟ ಆರಂಭ ಪಡೆದಿದೆ. ಉದ್ಘಾಟನಾ ಪಂದ್ಯ ಸೇರಿದಂತೆ ಆಡಿದ 4 ಪಂದ್ಯಗಳಲ್ಲಿ ಮೂರು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಸೊರಗುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಕಿಂಗ್ಸ್ ತಂಡ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಅರ್ಧಶತಕದ ಸಹಾಯದಿಂದ ನಿಗದಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ಗಳನ್ನು ಕಲೆಹಾಕಿತ್ತು.

182 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡದ ಯಾವುದೇ ಬ್ಯಾಟರ್ಗಳಿಂದ ದೊಡ್ಡ ಇನ್ನಿಂಗ್ಸ್ ಬರದ ಕಾರಣ, 19.4 ಓವರ್ಗಳಲ್ಲಿ ಕೇವಲ 153 ರನ್ಗಳಿಗೆ ಸರ್ವಪತನ ಕಂಡಿತು ಮತ್ತು ತವರಿನ ಅಂಗಳದಲ್ಲಿ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಂದುವರೆದಿದೆ.
ಇದು ಯಾವುದೇ ತಂಡದ ಟ್ರೋಫಿ ಗೆಲುವಿನ ಕನಸಿಗೆ ಅತ್ಯಂತ ಕೆಟ್ಟ ಅಭಿಯಾನವಾಗಿರುತ್ತದೆ. ಕಳೆದ 16 ವರ್ಷಗಳಿಂದಲೂ ಆರ್ಸಿಬಿ ತಂಡ ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲದಿರುವುದು ಮತ್ತೊಂದು ನೋವಿನ ಸಂಗತಿಯಾಗಿದ್ದು, ಆ ನಿರಾಸೆ ಈ ವರ್ಷವೂ ಮುಂದುವರೆಯುವ ಹಾದಿಯಲ್ಲಿದೆ.
2008ರಲ್ಲಿ ಐಪಿಎಲ್ ಪಂದ್ಯಾವಳಿಯ ಪ್ರಾರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪುರುಷರ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ ಎಂದು ಭಾರತದ ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿದರು ಮತ್ತು ಇದೇ ವೇಳೆ ವಿರಾಟ್ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದರು.

ಐಪಿಎಲ್ 2024ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪಿನ್ನರ್ಗೆ ಔಟಾದ ನಂತರ, ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಪ್ರತಿಕ್ರಿಯಿಸಿದ್ದು, ಹಲವು ವರ್ಷಗಳಿಂದ ಆರ್ಸಿಬಿ ತಂಡದ ದೊಡ್ಡ ಸಮಸ್ಯೆ ಎಂದರೆ ಆಟಗಾರರಿಗೆ ಬೆಂಬಲದ ಕೊರತೆ. ಎಂದರು.
ಆರ್ಸಿಬಿ ತಂಡವು ಶೇನ್ ವ್ಯಾಟ್ಸನ್, ಯುಜ್ವೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಪಂದ್ಯ ವಿಜೇತ ಆಟಗಾರರು ಫ್ರಾಂಚೈಸಿಯನ್ನು ತೊರೆಯಲು ಅವಕಾಶ ಮಾಡಿಕೊಟ್ಟರು ಎಂದು ಹರಿಹಾಯ್ದರು.
ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ಆರ್ಸಿಬಿ ನಾಯಕರಾಗಿದ್ದರು ಮತ್ತು ರಿಟೇನ್ ಮತ್ತು ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಅಭಿಪ್ರಾಯವನ್ನು ಹೊಂದಿದ್ದರು, ಆದರೆ ತಂಡವು ಗುಣಮಟ್ಟದ ಬೌಲರ್ಗಳನ್ನು ಎಂದಿಗೂ ಖರೀದಿಸಲಿಲ್ಲ ಎಂದು ಅಂಬಟಿ ರಾಯುಡು ಟೀಕಿಸಿದರು.

ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಆರ್ಸಿಬಿ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿಯೂ ಸಹ, ವಿರಾಟ್ ಕೊಹ್ಲಿ ಒಬ್ಬರೇ ಅಗ್ರ ಕ್ರಮಾಂಕದ ಭಾರವನ್ನು ಹೊತ್ತಿದ್ದಾರೆ. ಅವರು ಔಟಾದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಯಾರೊಬ್ಬರೂ ಇಲ್ಲ ಎಂದು ಸಿಎಸ್ಕೆ ಮಾಜಿ ಆಟಗಾರ ಅಭಿಪ್ರಾಯಪಟ್ಟರು.
"ವಿರಾಟ್ ಕೊಹ್ಲಿಯೊಂದಿಗಿದ್ದ ಅಗ್ರಮಾನ್ಯ ಆಟಗಾರರೂ ಬೆಂಬಲ ಪಡೆಯದೇ ತಂಡದಿಂದ ಹೊರನಡೆದರು. ಅದೇ ಆಟಗಾರರು ಇತರ ಫ್ರಾಂಚೈಸಿಗಳನ್ನು ಸೇರಿದ ನಂತರ ಉತ್ತಮ ಪ್ರದರ್ಶನ ನೀಡಿದರು. ಕೊಹ್ಲಿ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಲಿಲ್ಲ," ಎಂದು ಕಿಡಿಕಾರಿದರು.
"ವಿರಾಟ್ ಕೊಹ್ಲಿ ಆರ್ಸಿಬಿ ಫ್ರಾಂಚೈಸಿಗಾಗಿ 7000 ರನ್ ಗಳಿಸಿದ್ದಾರೆ. ಆದರೆ ಅದೇ ತಂಡಕ್ಕಾಗಿ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಬ್ಯಾಟರ್ ಹೆಸರನ್ನು ಹೇಳಿ ನೋಡೋಣ, ಯಾರೂ ಇಲ್ಲ. ಒಬ್ಬ ಆಟಗಾರನ ಭುಜದ ಮೇಲೆ ಸವಾರಿ ಮಾಡುವ ತಂಡವು ಟ್ರೋಫಿಯನ್ನು ಗೆಲ್ಲಲು ಸಾಧ್ಯವಿಲ್ಲ," ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.