ಭರವಸೆಯ ಬ್ಯಾಟರ್ ಟೀಮ್ ಡೇವಿಡ್ ಹಾಗೂ ವೇಗಿ ಜೋಶ್ ಹ್ಯಾಜಲ್ ವುಡ್ ಹೋರಾಟ ವ್ಯರ್ಥವಾಗಿದೆ. ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಆಸೆ ಮುಂದಿನ ಪಂದ್ಯಕ್ಕೆ ಶಿಫ್ಟ್ ಆಗಿದೆ. ಪಂಜಾಬ್ ವಿರುದ್ಧ ಬೆಂಗಳೂರು 5 ವಿಕೆಟ್ಗಳ ಸೋಲು ಕಾಣುತ್ತಿದ್ದಂತೆ ಚಿನ್ನಸ್ವಾಮಿ ಅಂಗಳದಲ್ಲಿ ಹ್ಯಾಟ್ರಿಕ್ ಸೋಲಿನ ಕಹಿ ತಂಡವನ್ನು ಅಪ್ಪಿಕೊಂಡಿದೆ. ಆರ್ಸಿಬಿ ಕ್ಯಾಂಪ್ನಲ್ಲಿರುವ ಹಲವು ಚಿಂತೆಯ ಗೆರೆಗಳ ಮಧ್ಯ, ಬೆಳ್ಳಿ ರೇಖೆಯೂ ಕಾಣಿಸಿಕೊಂಡಿದೆ.
ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್ಸಿಬಿ ತಂಡ ಸೋಲನ್ನು ಎದುರಿಸಿದೆ. ಮಳೆ ಅಡ್ಡಿಪಡಿಸಿದ ಕಾರಣ ತಡವಾಗಿ 14 ಓವರ್ಗಳಿಗೆ ಪಂದ್ಯ ಶುರುವಾಯಿತು. ಪಂದ್ಯದಲ್ಲಿ ಆರ್ಸಿಬಿ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.

ಬೆಂಗಳೂರಿನಲ್ಲಿ ನಡೆದ ಪಂದ್ಯಕ್ಕೆ ಟಾಸ್ ಆರಂಭಕ್ಕೂ ಮುನ್ನ ಮಳೆ ಅಡ್ಡಿಪಡಿಸಿತು. ಪಂದ್ಯ ವಿಳಂಭವಾಗಿ ಆರಂಭವಾಯಿತು. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಪಂಜಾಬ್ ಬೌಲರ್ಸ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಆರ್ಸಿಬಿ ತಂಡವನ್ನು ಕಟ್ಟಿ ಹಾಕಿದರು. ಪರಿಣಾಮ ಆರ್ಸಿಬಿ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 95 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ನಿಗದಿಪಡಿಸುವಲ್ಲಿ ಟಿಮ್ ಡೇವಿಡ್ ಪ್ರಮುಖ ಪಾತ್ರವಹಿಸಿದರು.
ಆರ್ಸಿಬಿ ತಂಡದ ಗೌರವವನ್ನು ಉಳಿಸುವ ಕೆಲಸವನ್ನು ಟಿಮ್ ಡೇವಿಡ್ ಮಾಡಿದರು. ಕ್ರೀಸ್ಗೆ ಬ್ಯಾಟಿಂಗ್ ಮಾಡಲು ಬಂದ ಟಿಮ್ ಡೇವಿಡ್ ಪಂಜಾಬ್ ಬೌಲರ್ಸ್ ಅನ್ನು ತರಾಟೆಗೆ ತೆಗೆದುಕೊಂಡು ಸ್ಪೋಟಕ ಬ್ಯಾಟಿಂಗ್ ಮಾಡಿದರು. ಅವರು ಕೇವಲ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಮಿಂಚಿದರು. ಡೇವಿಡ್ ಅವರು 14ನೇ ಓವರ್ನಲ್ಲಿ ಮೂರು ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿದರು. ಈ ಮೂಲಕ ಐಪಿಎಲ್ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದರು. ಪಂಜಾಬ್ ಪರ ಮಾರ್ಕೊ ಜಾನ್ಸೆನ್ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರು ತಮ್ಮ 4 ಓವರ್ಗಳಲ್ಲಿ 10 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಆರ್ಸಿಬಿ ಪರ ವೇಗದ ಬೌಲರ್ ಜೋಶ್ ಹೇಜಲ್ವುಡ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಹೇಜಲ್ವುಡ್ ಅವರು 3 ಓವರ್ಗಳಲ್ಲಿ 14 ರನ್ಗಳನ್ನು ನೀಡುವ ಮೂಲಕ 3 ವಿಕೆಟ್ ಉರುಳಿಸಿದರು. ಈ ಮೂಲಕ ಅವರು ಐಪಿಎಲ್ 2025 ರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಪಡೆಯುವ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಜಲ್ವುಡ್ ಆಡಿರುವ 7 ಪಂದ್ಯಗಳಲ್ಲಿ 12 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ನೂರ್ ಅಹ್ಮದ್ 12 ವಿಕೆಟ್ಗಳೊಂದಿಗೆ ಇದ್ದಾರೆ.
ಬೆಂಗಳೂರು ತಂಡ ನೀಡಿದ 96 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಪ್ರಭ್ಸಿಮ್ರಾನ್ ಸಿಂಗ್ 13 ರನ್ಗಳಿಸಿ ಔಟಾದರೆ, ಪ್ರಿಯಾಂಶ್ ಆರ್ಯ ಕೂಡ ಕೇವಲ 13 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇದಾದ ನಂತರ, ಬಂದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಜೋಶ್ ಇಂಗ್ಲಿಷ್ ಮೂರನೇ ವಿಕೆಟ್ಗೆ 20 ರನ್ಗಳ ಜೊತೆಯಾಟ ಆಡಿದರು. ಶ್ರೇಯಸ್ ಅಯ್ಯರ್ ಕೇವಲ 7 ರನ್ ಗಳಿಸುವಲ್ಲಿ ಯಶಸ್ವಿಯಾದರು. ಜೋಶ್ ಇಂಗ್ಲಿಷ್ ಕೂಡ 14 ರನ್ ಗಳಿಸಿ ಔಟಾದರು.
ಪಂಜಾಬ್ ಕಿಂಗ್ಸ್ 53 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು. ಈ ವೇಳೆ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿಯನ್ನು ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಜೋಡಿ ವಹಿಸಿಕೊಂಡರು. ಐದನೇ ವಿಕೆಟ್ಗೆ ಈ ಜೋಡಿ 21 ಎಸೆತಗಳಲ್ಲಿ 28 ರನ್ಗಳ ಜೊತೆಯಾಟ ಕಂಡುಬಂದಿತು. ನೆಹಾಲ್ ಅಜೇಯ 33 ರನ್ಗಳ ಇನ್ನಿಂಗ್ಸ್ ಆಡಿದರು. ಆರ್ಸಿಬಿ ಪರ ಬೌಲಿಂಗ್ನಲ್ಲಿ ಜೋಶ್ ಹೇಜಲ್ವುಡ್ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ಕೀಪರ್), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್, ಯಶ್ ದಯಾಲ್.
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್ (ವಿಕೆಟ್ಕೀಪರ್), ಶಶಾಂಕ್ ಸಿಂಗ್, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್