ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 41ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ತಂಡದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಸವಾಲಿನ ಗುರಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.
ವಿರಾಟ್ ಕೊಹ್ಲಿ ಹಾಗು ರಜತ್ ಪಾಟಿದಾರ್ ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ 207 ರನ್ಗಳ ಟಾರ್ಗೆಟ್ ಅನ್ನು ಹೈದರಬಾದ್ ತಂಡಕ್ಕೆ ಆರ್ಸಿಬಿ ನೀಡಿದೆ. ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ 7 ವಿಕೆಟ್ಗಳನ್ನು ಕಳೆದುಕೊಂಡು 206 ರನ್ಗಳನ್ನು ಪೇರಿಸಿದೆ.

ಮೊದಲ ಇನ್ನಿಂಗ್ಸ್ : ಹೈದರಾಬಾದ್ ಎದುರು ಟಾಸ್ ಗೆದ್ದು ಬ್ಯಾಟಿಂಗ್ ಶುರು ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮವಾಗಿ ರನ್ ಗಳಿಸಿದರು. ಕೇವಲ 3.5 ಓವರ್ಗಳಲ್ಲಿ 48 ರನ್ಗಳನ್ನು ಸೇರಿಸಿದ ಈ ಆರಂಭಿಕ ಜೋಡಿ ಬೃಹತ್ ರನ್ ಹೊಳೆ ಹರಿಸುವ ಸೂಚನೆ ನೀಡಿತು. ಆದರೆ
ಫಾಫ್ ಡು ಪ್ಲೆಸಿಸ್ (25) ವಿಕೆಟ್ ಕಳೆದುಕೊಳ್ಳಬೇಕಾಯಿತು.
ಬಳಿಕ ಬಂದ ವಿಲ್ ಜ್ಯಾಕ್ಸ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೇವಲ 6 ರನ್ಗಳಿಗೆ ಸೀಮಿತವಾಗಿ ಔಟ್ ಆದರು. ಇತ್ತ ಆಕ್ರಮಣಕಾರಿ ಆಟವಾಡುತ್ತಿದ್ದ ವಿರಾಟ್ ಕೊಹ್ಲಿ ಎರಡು ವಿಕೆಟ್ ಬೀಳುತ್ತಿದ್ದಂತೆ ಮಂದಗತಿ ಬ್ಯಾಟಿಂಗ್ ಶುರು ಮಾಡಿದರು. ಆದರೆ ನಾಲ್ಕನೇ ವಿಕೆಟ್ ಜೊತೆಯಾದ ರಜತ್ ಪಾಟಿದಾರ್ ಆರ್ಸಿಬಿಗೆ ಮತ್ತೊಮ್ಮೆ ಆಸರೆಯಾದರು.
ಸಿಡಿಲಬ್ಬರ ಬ್ಯಾಟಿಂಗ್ ದರ್ಬಾರ್ ನಡೆಸಿದ ರಜತ್ ಪಾಟಿದಾರ್, ಮಯಾಂಕ್ ಮಾರ್ಕಂಡೆ ಓವರ್ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರು. ಈ ಮೂಲಕ ಕೇವಲ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗು 2 ಬೌಂಡರಿ ನೆರೆವಿನಿಂದ ತಮ್ಮ ಐಪಿಎಲ್ನ ಐದನೇ ಅರ್ಧಶತಕ ಪೂರೈಸಿಕೊಂಡು ರಜತ್ ಪಾಟಿದಾರ್ ಔಟ್ ಆದರು.
ಪಾಟಿದಾರ್ ಜೊತೆಗೆ ಕೊಹ್ಲಿ (51) ಕೂಡ ಅರ್ಧಶತಕ ಹೊಡೆದು ವಿಕೆಟ್ ಕಳೆದುಕೊಂಡರು. ಕ್ಯಾಮೆರಾನ್ ಗ್ರೀನ್ ಹೊರತು ಪಡೆಸಿದರೆ ನಂತರ ಬಂದ ಯಾವುದೇ ಮಾಧ್ಯಮ ಕ್ರಮಾಂಕದ ಬ್ಯಾಟರ್ಸ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಮಹಿಪಾಲ್ ಲೊಮ್ರೋರ್ 7 ರನ್ ಗಳಿಸಿ ಔಟ್ ಆದರೆ, ದಿನೇಶ್ ಕಾರ್ತಿಕ್ 11 ರನ್ಗಳಿಗೆ ತಮ್ಮ ಆಟ ನಿಲ್ಲಿಸಿದರು. ಕೊನೆಯಲ್ಲಿ ಕ್ಯಾಮೆರಾನ್ ಗ್ರೀನ್ 37 ರನ್ಗಳಿಸಿ ಆರ್ಸಿಬಿಗೆ ಬಲ ತಂದರು. ಇನ್ನು ಕೊನೆ ಓವರ್ನಲ್ಲಿ ಇಪ್ಯಾಕ್ಟ್ ಆಟಗಾರನಾಗಿ ಕ್ರೀಸ್ಗೆ ಬಂದ ಸ್ವಪ್ನಿಲ್ ಸಿಂಗ್ 12 ರನ್ಗಳ ಬಾರಿಸಿ ಕ್ಯಾಮೆರಾನ್ ಗ್ರೀನ್ ಜೊತೆ ಅಜೇಯರಾಗಿ ಉಳಿದರು.
ಹೈದರಾಬಾದ್ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ ಜಯದೇವ್ ಉನದ್ಕತ್ 4 ಓವರ್ಗಳಲ್ಲಿ 30 ರನ್ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದು ಮಿಂಚಿದರು. ಜೊತೆಗೆ ಟಿ ನಟರಾಜನ್ 2 ವಿಕೆಟ್ ಕಬಳಿಸಿದರೆ, ಮಯಾಂಕ್ ಮಾರ್ಕಂಡೆ ಮತ್ತು ಪ್ಯಾಟ್ ಕಮಿನ್ಸ್ ತಲಾ ಒಂದು ವಿಕೆಟ್ ಪಡೆದರು.