
ಮಹಿಳಾ ಪ್ರೀಮಿಯರ್ ಲೀಗ್ 2023ರ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳು ಇಂದು (ಶುಕ್ರವಾರ) ಮುಖಾಮುಖಿಯಾಗಲಿವೆ. ಆಡಿರುವ ಮೂರು ಪಂದ್ಯಗಳಲ್ಲಿ ಸೋತಿರುವ ಆರ್ಸಿಬಿ ಮೊದಲ ಜಯದ ಹುಡುಕಾಟದಲ್ಲಿದೆ.
ಶುಕ್ರವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಮುಂಬೈನ ಬ್ರಬೌರ್ನೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಯುಪಿ ವಾರಿಯರ್ಸ್ ಇದುವರೆಗೂ 2 ಪಂದ್ಯಗಳನ್ನಾಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಮತ್ತೊಂದು ಪಂದ್ಯದಲ್ಲಿ ಸೋಲನುಭವಿಸಿದೆ.
ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಆರ್ ಸಿಬಿ 4ನೇ ಪಂದ್ಯದಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಎದುರಾಳಿ ತಂಡಗಳಿಗೆ 200 ರನ್ಗಳನ್ನು ಬಿಟ್ಟುಕೊಟ್ಟಿದೆ. ಮೂರು ಪಂದ್ಯಗಳಿಂದ ಕೇವಲ 10 ವಿಕೆಟ್ ಮಾತ್ರ ಪಡೆದುಕೊಂಡಿರುವುದು ತಂಡದ ಬೌಲಿಂಗ್ ಎಷ್ಟು ದುರ್ಬಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಪಡೆ ಸುಧಾರಿಸಿದರೆ ಮಾತ್ರ ಆರ್ ಸಿಬಿ ಗೆಲ್ಲುವ ಬಗ್ಗೆ ಭರವಸೆ ಹೊಂದಬಹುದು. ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದರೂ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ನಾಯಕಿ ಸ್ಮೃತಿ ಮಂದಾನ ದೊಡ್ಡ ಮೊತ್ತವನ್ನು ಗಳಿಸಬೇಕಾಗಿದೆ.

ಮತ್ತೊಂದು ಹೈಸ್ಕೋರಿಂಗ್ ಪಂದ್ಯ ಸಾಧ್ಯತೆ
ಆರ್ಸಿಬಿ ಮತ್ತು ಯುಪಿ ವಾರಿಯರ್ಸ್ ತಂಡಗಳಲ್ಲಿ ಬಲಿಷ್ಠ ಬ್ಯಾಟರ್ ಗಳು ಇದ್ದು ಮತ್ತೊಂದು ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಆರ್ ಸಿಬಿ ಈ ಮೊದಲಿನ ಮೂರು ಪಂದ್ಯಗಳನ್ನು ಆಡಿದೆ, ಮೂರು ಪಂದ್ಯಗಳಲ್ಲೂ 200ಕ್ಕಿಂತ ಹೆಚ್ಚಿನ ರನ್ ಬಿಟ್ಟುಕೊಟ್ಟಿದೆ.
ಆರ್ ಸಿಬಿ ಪರವಾಗಿ ಶ್ರೇಯಾಂಕ ಪಾಟೀಲ್ ಭರವಸೆಯ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಎಲ್ಲಿಸ್ ಪೆರ್ರಿ, ಹೀಥರ್ ನೈಟ್, ಮೇಗನ್ ಶುಟ್ರಿಂದ ಉತ್ತಮ ಪ್ರದರ್ಶನ ಬರಬೇಕಾಗಿದೆ. ಸೋಫಿ ಡಿವೈನ್ ಫಾರ್ಮ್ ಕಂಡುಕೊಂಡಿರುವುದು ತಂಡಕ್ಕೆ ಉತ್ತಮ ಬೆಳವಣಿಗೆಯಾಗಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿರುವ ಯುಪಿ ವಾರಿಯರ್ಸ್ ಆರ್ ಸಿಬಿ ವಿರುದ್ಧ ಗೆಲ್ಲುವ ಯೋಜನೆಯಲ್ಲಿದೆ. ಅಲಿಸ್ಸಾ ಹೀಲಿ ನಾಯಕತ್ವದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತಹಿಲಾ ಮೆಕ್ಗ್ರಾತ್ ಕಳೆದ ಪಂದ್ಯದಲ್ಲಿ 50 ಎಸೆತಗಳಲ್ಲಿ 90 ರನ್ ಗಳಿಸಿ ಉತ್ತಮ ಫಾರ್ಮ್ನಲ್ಲಿದ್ದಾರೆ. ದೀಪ್ತಿ ಶರ್ಮಾ, ಕಿರಣ್ ನವಿಗೆರೆ ಉತ್ತಮ ಪ್ರದರ್ಶನ ನೀಡಿದರೆ ತಂಡ ಮತ್ತೊಂದು ಗೆಲುವು ದಾಖಲಿಸಬಹುದು.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್ಸಿಬಿ: ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್.
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.