ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB) ಐಪಿಎಲ್ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ಇದ್ದರೂ ಸಹ, ಆ ತಂಡಕ್ಕೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. 17 ಐಪಿಎಲ್ ಆವೃತ್ತಿಗಳನ್ನು ಆಡಿರುವ ಆರ್ಸಿಬಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ನಿಟ್ಟಿನಲ್ಲಿ ಹಲವು ಬಾರಿ ಪ್ರಯತ್ನ ಮಾಡಿದೆ. ಈ ಬಾರಿಯೂ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಸ್ಟಾರ್ ಆಟಗಾರರನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿದೆ. ಆದರೆ ನಿರೀಕ್ಷಿತ ಆಟಗಾರರಿಗೆ ಬಿಡ್ ಮಾಡದೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಈ ಬಾರಿ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಆರ್ಸಿಬಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಯಶ್ ದಯಾಳ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಇನ್ನು 83 ಕೋಟಿ ರೂಪಾಯಿಗಳೊಂದಿಗೆ ಆರ್ಸಿಬಿ ಹರಾಜು ಅಂಗಳ ಪ್ರವೇಶಿಸಿತ್ತು. ಈ ವೇಳೆ ಸ್ಟಾರ್ ಆಟಗಾರರನ್ನು ಬಿಡ್ ಮಾಡಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಆರ್ಸಿಬಿ ಅಭಿಮಾನಿಗಳ ಆಸೆಗೆ ಪೆಟ್ಟು ನೀಡಿದೆ. ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ ಅವರಿಗೆ ತಂಡ ಹಣದ ಹೊಳೆಯನ್ನು ಹರಿಸಿದೆ. ಆದರೆ ತಂಡ ಒಬ್ಬ ನಾಯಕನನ್ನು ಪಿಕ್ ಮಾಡಲಿಲ್ಲ.

ಆರ್ಸಿಬಿ 2025ರಲ್ಲಿ ಯಾರ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಇದಕ್ಕೆ ಮೆಲ್ನೋಟಕ್ಕಂತೂ ವಿರಾಟ್ ಕೊಹ್ಲಿ ಅವರ ಹೆಸರು ಕಾಣಿಸಿಕೊಳ್ಳುತ್ತದೆ. ಆದರೆ ಟೀಮ್ ಮ್ಯಾನೇಜ್ಮೆಟ್ನಿಂದ ಯಾವುದೇ ನಿಖರ ಉತ್ತರ ಬಂದಿಲ್ಲ. ಒಂದು ವೇಳೆ ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವವನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಭುವನೇಶ್ವರ್ ಕುಮಾರ್. ಇವರು ಮೈದಾನದಲ್ಲಿ ಕಾಮ್ ಆಗಿ ಇರುತ್ತಾರೆ. ಇವರ ಈ ಗುಣವೇ ಇವರಿಗೆ ನಾಯಕತ್ವ ನೀಡುವಂತೆ ಮಾಡುತ್ತದೆ. ಅದರಲ್ಲೂ ಈಗಾಗಲೇ ಇವರು ಸನ್ರೈಸರ್ಸ್ ತಂಡದ ಪರ ನಾಯಕನಾಗಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಆರ್ಸಿಬಿ ಇವರತ್ತ ಮುಖ ಮಾಡಬಹುದು.
ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈ ಬಿಡಲಾಗಿರುವ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ, ಅವರಿಗೆ ಆರ್ಸಿಬಿ ಬಿಡ್ ಮಾಡಿ ತಮ್ಮ ಗಾಳಕ್ಕೆ ಹಾಕಿಕೊಂಡಿದೆ. ಇವರು ಸಹ ಆರ್ಸಿಬಿ ಪರ ತಂಡವನ್ನು ಮುನ್ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಜಿತೇಶ್ ಶರ್ಮಾ. ಇವರು ಸಹ ಒಬ್ಬ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್. ಇವರಿಗೆ ತಂಡ ಭಾರೀ ಮೊತ್ತವನ್ನು ನೀಡಿ ಖರೀದಿ ಮಾಡಿದೆ. ಹೀಗಾಗಿ ತಂಡ ಇವರ ಹೆಗಲಿಗೂ ಜವಾಬ್ದಾರಿಯನ್ನು ನೀಡಬಹುದು. ಅವರು ಸಹ ಕಳೆದ ಕೆಲವು ವರ್ಷಗಳಲ್ಲಿ ತಮ್ಮನ್ನು ತಾವು ಫಿನಿಷರ್ ರೀತಿ ಬಿಂಬಿಸಿಕೊಂಡಿದ್ದಾರೆ.