ಸದ್ಯ ಭಾರತದಲ್ಲಿ ಏಕದಿನ ಸರಣಿಗಳು ನಡೆಯುತ್ತಿವೆ. ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್, ಕೊನೆಯ ಏಕದಿನ ಪಂದ್ಯವನ್ನು ಬುಧವಾರ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಆಡಲಿವೆ. ಭಾರತ ಈಗಾಗಲೇ ಸರಣಿಯನ್ನು ಗೆದ್ದು ಕೊಂಡಿದ್ದು ಆತ್ಮವಿಶ್ವಾಸದಲ್ಲಿದೆ. ಈ ಸರಣಿಗಳು ಮುಗಿದ ಬಳಿಕ ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಕಾವು ಆರಂಭವಾಗಲಿದೆ. ಫೆಬ್ರವರಿ 14 ರಂದು ಲೀಗ್ನ ಮೂರನೇ ಆವೃತ್ತಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ.
ಎರಡನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಕನಸಿನ್ನು ಆರ್ಸಿಬಿ ಕಾಣುತ್ತಿದೆ. ಈಗಾಗಲೇ ಆರ್ಸಿಬಿ ಆಟಗಾರ್ತಿಯರು ಮೈದಾನದಲ್ಲಿ ಸಮರಭ್ಯಾಸ ನಡೆಸಿದ್ದಾರೆ. ಈ ದೊಡ್ಡ ಲೀಗ್ ಆರಂಭಕ್ಕೂ ಮುನ್ನವೇ ಆರ್ಸಿಬಿಯ ಸ್ಟಾರ್ ಆಟಗಾರರು ತಂಡವನ್ನು ತೊರೆದಿದ್ದರು. ತಂಡ ಇವರ ರಿಪ್ಲೇಸ್ ಮೆಂಟ್ ಸಹ ಮಾಡಿದೆ. ಆರ್ಸಿಬಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಉತ್ಸಾಹದಲ್ಲಿದ್ದು, ಆರ್ಸಿಬಿ ತಂಡದ ರಚನೆ ಹೇಗಿರಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಆರ್ಸಿಬಿ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಆರ್ಸಿಬಿ ಪರ ಈ ಬಾರಿ ನಾಯಕರಾಗಿ ಸ್ಮೃತಿ ಮಂದನಾ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇವರು ಬೆಂಗಳೂರು ತಂಡದ ಪರ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರೊಂದಿಗೆ ಯಾರು ಇನಿಂಗ್ಸ್ ಆರಂಭಿಸುತ್ತಾರೆ ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳ ಮನದಲ್ಲಿ ಮೂಡಿದೆ. ಸ್ಮೃತಿಗೆ ಇಂಗ್ಲೆಂಡ್ ತಂಡ 33 ವರ್ಷದ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇವರಿಬ್ಬರೂ ತಮ್ಮ ನೈಜ ಆಟವನ್ನು ಆಡಿದರೆ ಬಿಗ್ ಸ್ಕೋರ್ ಕನಸು ನನಸಾಗುತ್ತದೆ.
ಮೂರನೇ ಕ್ರಮಾಂಕದಲ್ಲಿ ಭಾರತದ ಸಬ್ಬಿನೇನಿ ಮೇಘನಾ ಆಡಿದರೆ ಸೂಕ್ತ. ಇವರು ಈಗಾಗಲೇ ಆರ್ಸಿಬಿ ಪರ 7 ಪಂದ್ಯಗಳಲ್ಲಿ ಬ್ಯಾಟ್ ಮಾಡಿ 168 ರನ್ ಸಿಡಿಸಿದ್ದಾರೆ. ಇನ್ನು ಇವರು ಆಕ್ರಮಣಕಾರಿ ಆಟಕ್ಕೂ ಹೆಸರುವಾಸಿ. ಇನ್ನು ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಎಲ್ಲಿಸಾ ಪೆರ್ರಿ ಆರ್ಸಿಬಿ ದೊಡ್ಡ ಶಕ್ತಿ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದಲ್ಲದೆ, ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗುತ್ತಾರೆ. ಹೀಗಾಗಿ ಇವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ. ರಾಘವಿ ಬಿಶ್ತ್ ಅವರ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಚಾ ಘೋಷ್ ತಮ್ಮ ನೈಜ ಆಟವನ್ನು ಆಡಿ ತಂಡಕ್ಕೆ ನೆರವಾಗಬೇಕಿದೆ. ಆಶಾ ಶೋಭನಾ ಮತ್ತು ರೇಣುಕಾ ಠಾಕೂರ್ ವೇಗದ ಬೌಲಿಂಗ್ ದಾಳಿಯನ್ನು ಬಲಪಡಿಸಲಿದ್ದಾರೆ. ಜಾರ್ಜಿಯಾ ವೇರ್ಹ್ಯಾಮ್ ತಮ್ಮ ಅಮೋಘ ಲೆಗ್ ಸ್ಪಿನ್ ದಾಳಿಯಿಂದ ಎದುರಾಳಿಗೆ ಕಾಟ ನೀಡಬಲ್ಲರು. ಇನ್ನು ಗುಜರಾತ್ ಪರ ಆಡಿದ್ದ ಕಿಮ್ ಗಾರ್ತ್ ಆರ್ಸಿಬಿ ಬೌಲಿಂಗ್ಗೆ ಶಕ್ತಿ ತುಂಬಲಿದ್ದಾರೆ. ಇನ್ನು ಕನ್ನಡತಿ ಶ್ರೇಯಾಂಕಾ ಪಾಟೀಲ್ ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು. ಈ ಬಾರಿ ಮತ್ತೆ ಅಂತಹದ್ದೇ ಸಾಧನೆ ಮರುಕಳಿಸುವ ವಿಶ್ವಾಸದಲ್ಲಿದ್ದಾರೆ.