ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೌದಿಯಲ್ಲಿ ನಡೆದ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಿದೆ. ಹಲವು ದೇಶೀಯ ಹಾಗೂ ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸಿನಲ್ಲಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನು ಹಲವು ಮಾಜಿ ಆಟಗಾರರನ್ನು ಉಳಿಸಿಕೊಳ್ಳಬಹುದಿತ್ತು ಎಂಬ ಪ್ರಶ್ನೆಗಳು ಮೂಡಿವೆ. ಇದರಲ್ಲಿ ಪ್ರಮುಖವಾಗಿ ಮೊಹಮ್ಮದ್ ಸಿರಾಜ್, ವಿಜಯ್ಕುಮಾರ್ ವೈಶಾಖ್, ವಿಲ್ ಜಾಕ್ಸ್ ಹೆಸರುಗಳು ಸೇರಿವೆ.
ಆರ್ಸಿಬಿ ತನ್ನ ರಿಟೇನ್ ಲೀಸ್ಟ್ ರಿಲೀಸ್ ಮಾಡಿದಾಗ ಆ ಪಟ್ಟಿಯಲ್ಲಿ ಯುವ ಆಟಗಾರರಾದ ರಜತ್ ಪಾಟಿದಾರ, ಯಶ್ ದಾಯಳ್ ಸೇರಿದಂತೆ ವಿರಾಟ್ ಕೊಹ್ಲಿಗೆ ಮಣೆ ಹಾಕಲಾಗಿತ್ತು. ಆದರೆ ಆರ್ ಸಿಬಿ ಆಕಾಶ್ ದೀಪ್ ಅವರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಅಲ್ಲದೆ ಹರಾಜಿನಲ್ಲಿ ಇವರಿಗೆ ಬಾಜಿ ಕಟ್ಟುವಲ್ಲಿ ಸಹ ಹಿಂದೆ ಬಿದ್ದಿತು. ಈಗ ಆಸ್ಟ್ರೇಲಿಯಾದಲ್ಲಿ ಆಕಾಶ್ ದೀಪ್ ನೀಡುತ್ತಿರುವ ಪ್ರದರ್ಶನವನ್ನು ನೋಡಿ ಆರ್ಸಿಬಿ ಕೈ ಕೈ ಹಿಚಿಕೊಳ್ಳುತ್ತಿದೆ. ಈ ಸ್ಟಾರ್ ಯುವ ಆಟಗಾರನನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 8 ಕೋಟಿ ನೀಡಿ ತಂಡಕ್ಕೆ ಖರೀದಿಸಿದೆ.

ಆಕಾಶ್ ದೀಪ್ ದೇಶೀಯ ಕ್ರಿಕೆಟ್ನಲ್ಲಿ ಬಂಗಾಳ ತಂಡದ ಪರ ಆಡುತ್ತಾರೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಶಿಸ್ತು ಬದ್ಧ ದಾಳಿ ಸಂಘಟಿಸುವ ಆಕಾಶ್, ಸೀಮಿತ ಓವರ್ಗಳ ಕ್ರಿಕೆಟ್ನಲ್ಲೂ ಮಿಂಚಿದ್ದಾರೆ ಇವರು ಬಂಗಾಳ ಪರ 50 ಓವರ್ಗಳ ಪಂದ್ಯಗಳಲ್ಲಿ 24.50 ಸರಾಸರಿಯಲ್ಲಿ 42 ವಿಕೆಟ್ಗಳನ್ನು 28 ಪಂದ್ಯಗಳಲ್ಲಿ ಪಡೆದಿದ್ದಾರೆ. ಇನ್ನು ದೇಶೀಯ ಟಿ20 ಕ್ರಿಕೆಟ್ನಲ್ಲಿ ಇವರು ಆಡಿದ 23 ಪಂದ್ಯಗಳಲ್ಲಿ 49 ವಿಕೆಟ್ ಪಡೆದಿದ್ದಾರೆ. ವಿಕೆಟ್ ಕಬಳಿಸುವ ಕ್ಷಮತೆಯನ್ನು ಗುರುತಿಸಿ ಆರ್ಸಿಬಿ ಇವರಿಗೆ ಸ್ಥಾನ ನೀಡಬೇಕಿತ್ತು.
ಆಕಾಶ್ ದೀಪ್ ಉತ್ತಮ ವೇಗದ ಬೌಲರ್. ಅಲ್ಲದೆ ಹಲವು ವೇರಿಯೇಷನ್ಗಳನ್ನು ಹೊಂದಿದ್ದಾರೆ. ಇವರ ಬೌಲಿಂಗ್ ಟಿ20 ಕ್ರಿಕೆಟ್ನ ಪವರ್ಪ್ಲೇನಲ್ಲಿ ತಂಡದ ನೆರವಿಗೆ ಬರುತ್ತಿತ್ತು. ಟ್ರೆಂಟ್ ಬೌಲ್ಟ್ ಹಾಗೂ ಮೊಹಮ್ಮದ್ ಶಮಿ ಹೊಸ ಚೆಂಡಿನಲ್ಲಿ ಹೇಗೆ ಪರಿಣಾಮ ಕಾರಿಯೋ ಹಾಗೆ ಆಕಾಶ್ ಸಹ ಪರಿಣಾಮ ಕಾರಿ. ಇವರು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಬೌಲರ್. ಇವರು ಸ್ಥಿರವಾಗಿ ಬ್ಯಾಟರ್ಗಳಿಗೆ ಕಾಟ ನೀಡ ಬಲ್ಲರು.

ಆಕಾಶ್ ದೀಪ್ ಆರ್ಸಿಬಿ ಪರ ಆಡಿದ ಎಂಟು ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಅವರಿಗೆ 2022ರ ಐಪಿಎಲ್ನಲ್ಲೇ ಹೆಚ್ಚಿನ ಅವಕಾಶ ಸಿಕ್ಕಿದೆ. ಆದರೆ ಕಳೆದ ಆವೃತ್ತಿಯಲ್ಲಿ ಇವರನ್ನು ಒಮ್ಮೆ ಮಾತ್ರ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಿತು.
ಆಕಾಶ್ ದೀಪ್ ಹಂತ ಹಂತವಾಗಿ ಸಾಧನೆಯ ಮೆಟ್ಟಿಲು ಏರುತ್ತಾ, ಭಾರತದ ಪರ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಫಾಲೋ ಆನ್ ಭೀತಿ ಎದುರಾಗಿದ್ದಾಗ ಇವರು ಬ್ಯಾಟ್ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪ್ಲೇಯರ್ ಬಿಟ್ಟು ಆರ್ಸಿಬಿ ಬಿಗ್ ಮಿಸ್ಟೇಕ್ ಮಾಡಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.