ರಾಯಲ್ ಚಾಂಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ನ ಫೈನಲ್ಗೆ ತಲುಪಿದೆ. ಈ ವೇಳೆ ತಂಡದ ಸಂಘಟಿತ ಆಟ ಎಲ್ಲರ ಗಮನ ಸೆಳೆದಿದೆ. ಆರ್ಸಿಬಿ ಈ ಬಾರಿ ಅಮೋಘ ಪ್ರದರ್ಶನ ನೀಡಿದೆ. ಒಂದು ತಂಡವಾಗಿ ಮೈದಾನದಲ್ಲಿ ಪ್ರದರ್ಶನ ನೀಡಿದ್ದು, ಎಲ್ಲರ ಗಮನ ಸೆಳೆದಿದೆ. ಆರಂಭದಲ್ಲಿ ಆರ್ಸಿಬಿ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಇದ್ದವು. ಆದರೆ ಲೀಗ್ ಮುಂದೆ ಸಾಗಿದಂತೆ ಈ ಪ್ರಶ್ನೆಗಳಿಗೆಲ್ಲಾ ಮೈದಾನದಲ್ಲೇ ಆಟಗಾರರು ಉತ್ತರ ನೀಡಿದ್ದಾರೆ. ಲೀಗ್ನಲ್ಲಿ ಆರ್ಸಿಬಿ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಫೈನಲ್ಗೆ ಪ್ರವೇಶಿಸಿದೆ.
ಸಾಮಾನ್ಯವಾಗಿ ಈ ಹಿಂದಿನ ಆವೃತ್ತಿಗಳಲ್ಲಿ ಆರ್ಸಿಬಿ ಬ್ಯಾಟರ್ಗಳ ಮೇಲೆ ಅವಲಂಬಿತವಾಗುತ್ತದೆ. ಅಲ್ಲದೆ ವಿರಾಟ್ ಕೊಹ್ಲಿ ಅವರ ಮೇಲೆ ಹೆಚ್ಚಿನ ಭಾರ ಇರುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಆರ್ಸಿಬಿ ಲೀಗ್ ಹಂತದಿಂದ ಹಿಡಿದ ಮೊದಲ ಕ್ವಾಲಿಫೈಯರ್ನಲ್ಲಿ ಒಟ್ಟು 10 ಪಂದ್ಯಗಳನ್ನು ಗೆದ್ದಿದೆ. ಇದರಲ್ಲಿ ಒಟ್ಟು ಎಂಟು ವಿಭಿನ್ನ ಆಟಗಾರರಿಗೆ ಪಂಧ್ಯ ಶ್ರೇಷ್ಠ ಪ್ರಶಸ್ತಿಗಳು ಲಭಿಸಿವೆ. ಈ ಅಂಕಿ ಅಂಶಗಳೇ ಆರ್ಸಿಬಿ ತಂಡದ ಶಕ್ತಿಯನ್ನು ಎದ್ದು ತೋರಿಸುತ್ತವೆ. ಹೀಗಾಗಿ ಆರ್ಸಿಬಿ ಅಭಿಮಾನಿಗಳಲ್ಲಿ ಈ ಬಾರಿ ಡಬಲ್ ಜೋಶ್ ಇದೆ.

ಆರ್ಸಿಬಿ 2016ರಲ್ಲೂ ಫೈನಲ್ಗೆ ಪ್ರವೇಶ ಪಡೆದಿತ್ತು. ಆಗ ವಿರಾಟ್ ಕೊಹ್ಲಿ ಅಮೋಘ ಫಾರ್ಮ್ನಲ್ಲಿದ್ದರು. ಆದರೆ ಈ ಬಾರಿ ಹಾಗಿ ಇಲ್ಲ. ವಿರಾಟ್ ಕೊಹ್ಲಿ ಅವರಿಗೆ ಒಂದೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಅದು ಲೀಗ್ ಹಂತದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವಾಗ. ಆ ಪಂದ್ಯದಲ್ಲಿ ವಿರಾಟ್ 72 ರನ್ ಬಾರಿಸಿ ಅಬ್ಬರಿಸಿದ್ದರು. ಉಳಿದಂತೆ ಈ ಲೀಗ್ನಲ್ಲಿ ವಿರಾಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು, ಮ್ಯಾನ್ ಆಫ್ ದಿ ಮ್ಯಾಚ್ ಹೆಚ್ಚು ಗೆಲ್ಲದೇ ಇರುವುದಕ್ಕೆ ಸಂಘಟಿತ ಆಟವೇ ಕಾರಣ. ಆರ್ಸಿಬಿ ಪರ ಯಾವೆಲ್ಲಾ ಆಟಗಾರರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಆರ್ಸಿಬಿ ತಂಡ ಐಪಿಎಲ್ ಮೆಗಾ ಹರಾಜಿನಲ್ಲಿ ಕೃನಾಲ್ ಪಾಂಡ್ಯ ಅವರನ್ನು ಪಿಕ್ ಮಾಡಿದಾಗ ಎಲ್ಲರಿಗೂ ಖುಷಿ ಆಯಿತು. ಇವರು ತಮ್ಮ ಘನತೆಗೆ ತಕ್ಕ ಆಟವನ್ನೇ ಈ ಲೀಗ್ನಲ್ಲಿ ಪ್ರದರ್ಶಿಸಿದ್ದಾರೆ. ಕೃನಾಲ್ ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದು ಈ ಸಾಧನೆ ಮಾಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಕೃನಾಲ್ ಅಜೇಯ 73 ರನ್ ಸಿಡಿಸಿದ್ದರು. ಇದರಲ್ಲಿ 5 ಬೌಂಡರಿ, 4 ಸಿಕ್ಸರ್ಗಳು ಸೇರಿವೆ.
ಇನ್ನು ಈ ಲೀಗ್ನಲ್ಲಿ ಎರಡು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಆಟಗಾರರ ಪಟ್ಟಿಯಲ್ಲಿ ರಜತ್ ಪಾಟಿದಾರ್ಗೂ ಸ್ಥಾನ. ಇವರು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ 51 ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 64 ರನ್ ಸಿಡಿಸಿ ಅಬ್ಬರಿಸಿದರು. ಈ ಎರಡೂ ಪಂದ್ಯಗಳಲ್ಲಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ರಾಜಸ್ಥಾನ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕೆ ಇಳಿದು, 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 65 ರನ್ ಸಿಡಿಸಿದರು. ಇವರ ಅಬ್ಬರಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಹುಡುಕಿಕೊಂಡು ಬಂದಿತು. ಇನ್ನು ಆರ್ಸಿಬಿ ತಂಡದ ಸ್ಟಾರ್ ಬೌಲಲ್ ಜೋಶ್ ಹ್ಯಾಜಲ್ವುಡ್ ರಾಜಸ್ಥಾನ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಈ ಮೂಲಕ ಕೈ ಜಾರಿದ್ದ ಪಂದ್ಯವನ್ನು ಮತ್ತೆ ಆರ್ಸಿಬಿ ಗೆಲ್ಲುವಂತೆ ಮಾಡಿದರು. ಈ ಪಂದ್ಯದಲ್ಲಿ ಜೋಶ್ ಡೆತ್ ಓವರ್ನಲ್ಲಿ ಕಮಾಲ್ ಪ್ರದರ್ಶನ ನೀಡಿದರು. ರಾಜಸ್ಥಾನ ವಿರುದ್ಧ ಜೋಶ್ 33 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆರ್ಸಿಬಿ ತವರಿನಲ್ಲಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ವೆಸ್ಟ್ ಇಂಡೀಸ್ನ ಸ್ಫೋಟಕ ಆಲ್ರೌಂಡರ್ ರೋಮಾರಿಯೊ ಶೆಫರ್ಡ್. ಇವರು ಚೆನ್ನೈ ವಿರುದ್ಧ ಡೆತ್ ಒವರ್ನಲ್ಲಿ ಬಿರಗಾಳಿಯೂ ನಾಚುವಂತೆ ಬ್ಯಾಟಿಂಗ್ ನಡೆಸಿದರು. ಈ ಮೂಲಕ 14 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 53 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇ ಬೇಕಾದ ಒತ್ತಡದಲ್ಲಿತ್ತು. ಎಲ್ಎಸ್ಜಿ ಈ ವೇಳೆ 231 ರನ್ಗಳ ಗುರಿಯನ್ನು ನೀಡಿತ್ತು. ಆರ್ಸಿಬಿ ಪರ 4 ವಿಕೆಟ್ಗಳು 123 ರನ್ಗಳಿಗೆ ಬಿದ್ದಾಗ, ಮಯಾಕ್ ಅಗರ್ವಾಲ್ ಹಾಗೂ ಜಿತೇಶ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಹಾರ ತೊಡಿಸಿದರು. ಈ ವೇಳೆ ಜಿತೇಶ್ ಶರ್ಮಾ ಕೇವಲ 33 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 85 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಇವರ ಅಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತು.
ಸುಯೇಶ್ ಶರ್ಮಾ ತಮ್ಮಲ್ಲಿನ ಕ್ಷಮತೆಯನ್ನು ಸಬೀತು ಪಡೆಸಲು ಮೊದಲ ಕ್ವಾಲಿಫೈಯರ್ ಪಂದ್ಯವನ್ನು ವೇದಿಕೆ ಮಾಡಿಕೊಂಡರು. ಇವರು ಎಸೆದ ಗೂಗ್ಲಿಯನ್ನು ಅರಿಯುವಲ್ಲಿ ಬ್ಯಾಟರ್ಗಳು ವಿಫಲರಾದರು. ಇವರು ಪಂಜಾಬ್ ಕಿಂಗ್ಸ್ ತಂಡ 101 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಇವರು ಕ್ವಾಲಿಫೈರ್ ಮೊದಲ ಪಂದ್ಯದಲ್ಲಿ 17 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಪರಿಣಾಮ ಇವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಲಾಯಿತು.