ಆರ್ಸಿಬಿ ತಂಡದ ಸ್ಟಾರ್ ವೇಗದ ಬೌಲರ್ ಯಶ್ ದಯಾಳ್ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಸಂಬಂಧಿಸಿದಂತೆ ಯಶ್ ದಯಾಳ್ ಮೇಲೆ ಯುವತಿಯೊಬ್ಬಳು ಪ್ರಥಮ ವರ್ತಮಾನ ವರದಿಯನ್ನು ಸಹ ದಾಖಲಿಸಿದ್ದಳು. ಇದೇ ಎಫ್ಐಆರ್ ಪ್ರಶ್ನಿಸಿ ಯಶ್ ದಯಾಳ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಆರ್ಸಿಬಿ ವೇಗಿ ದಾಯಳ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಂಧನಕ್ಕೆ ತಡೆ ನೀಡಿದೆ. ಅಲ್ಲದೆ ನ್ಯಾಯಾಲಯ ಕಿರುಕುಳ ನೀಡದಂತೆ ಸೂಚಿಸಿದೆ.
ಯಶ್ ದಯಾಳ್ ಸಲ್ಲಿಸಿದ್ದ ವಿಚಾರಣೆಯನ್ನು ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಮತ್ತು ನ್ಯಾಯಮೂರ್ತಿ ಅನಿಲ್ ಕುಮಾರ್ ದಶಮ್ ಅವರ ವಿಭಾಗೀಯ ಪೀಠ ನಡೆಸಿತು. ಯಶ್ ಪರ ವಕೀಲ್ ಗೌರವ್ ತ್ರಿಪಾಠಿ ಪ್ರಕರಣವನ್ನು ಮಂಡಿಸಿದರು. ಈ ವೇಳೆ ಎರಡೂ ಪಕ್ಷಗಳ ವಕೀಲರು ತಮ್ಮ ತಮ್ಮ ವಾದವನ್ನು ಮಂಡಿಸಿದರು. ಇದೇ ವೇಳೆ ಕೋರ್ಟ್ಗೆ ಉಭಯ ಪಕ್ಷಗಳು ಐದು ವರ್ಷಗಳಿಂದ ಸಂಬಂಧಲ್ಲಿದ್ದವು ಎಂದು ಮೌಖಿಕವಾಗಿ ತಿಳಿಸಿದ್ದವು. ಎಫ್ಐಆರ್ನಲ್ಲಿ ಬಲಿಪಶು ಯುವತಿ ವಿವಾಹದ ಸುಳ್ಳು ಭರವಸೆಯನ್ನು ನೀಡಿದ್ದರು ಎಂದು ದೂರು ದಾಖಲಿಸಿದ್ದಳು.

ಯಶ್ ದಯಾಳ್ ತನ್ನ ಮೇಲೆ 5 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿ ದೂರು ನೀಡಿದ್ದಾರೆ. ಇದರಿಂದಾಗಿ ಯಶ್ ದಯಾಳ್ ತೊಂದರೆಯಲ್ಲಿ ಸಿಕ್ಕಿ ಕೊಂಡಿದ್ದಾರೆ. ಆರ್ಸಿಬಿ ವೇಗಿ ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಕೋರ್ಟ್, "ನಿಮ್ಮನ್ನ ಬೇರೆಯವರು ಒಂದು ದಿನ, 2 ದಿನ, 3 ದಿನ ಮೂರ್ಖರನ್ನಾಗಿ ಮಾಡಬಹುದು. ಆದರೆ 5 ವರ್ಷಗಳ ಕಾಲ ಸಂಬಂಧ ಹೊಂದಿದ್ದೀರಿ. ಇಷ್ಟು ಸಮಯ ಯಾರು ಯಾರನ್ನೂ ಮುರ್ಖರನ್ನಾಗಿ ಮಾಡಲು ಸಾಧ್ಯವೇ ಇಲ್ಲ ಎಂದು ವಿಭಾಗೀಯ ಪೀಠವು ಹೇಳಿದೆ.
ಯಶ್ ದಯಾಳ್ ಮೇಲೆ ಆರೋಪವನ್ನು ಹೊರಿಸಿರುವ ಸಂತ್ರಸ್ತೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ 4 ರಿಂದ 6 ವಾರಗಳ ನಂತರ ನಡೆಯಲಿದೆ.
ಜುಲೈ 6 ರಂದು ಗಾಜಿಯಾಬಾದ್ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಯಶ್ ದಯಾಳ್ ಅವರ ವಿರುದ್ಧ ಯುವತಿ ಐಪಿಸಿ ಸೆಕ್ಷನ್ 69 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಶ್ ದಯಾಳ್ ಅವರು ಎಫ್ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯಶ್ ದಯಾಳ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಅಲಹಾಬಾದ್ ಹೈಕೋರ್ಟ್ನ ದ್ವಿಪಕ್ಷೀಯ ಪೀಠ ವಿಚಾರಣೆ ನಡೆಸಿದೆ.