ಐಪಿಎಲ್ನಿಂದ ಆರ್ಸಿಬಿ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಹೊರಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದರು. ಭುಜದ ಮೂಳೆ ಸ್ಥಾನದಿಂದ ಹೊದಬಂದಿದ್ದು, ನಂತರ ಫಿಸಿಯೋಗಳು ಅದನ್ನು ಸ್ವಸ್ಥಾನಕ್ಕೆ ಮರಳಿಸುವಲ್ಲಿ ಯಶಸ್ವಿಯಾಗಿದ್ದರು. ತಂಡದ ಜೊತೆ ಕೋಲ್ಕತ್ತಾಗೆ ತೆರಳಿದ್ದ ಅವರು ಸದ್ಯ ಅಲ್ಲಿಂದ ಇಂಗ್ಲೆಂಡ್ಗೆ ತೆರಳಿದ್ದಾರೆ.
ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ರೀಸ್ ಟೋಪ್ಲಿ ಐಪಿಎಲ್ನಿಂದ ಹೊರಬಿದ್ದಿರುವುದಾಗಿ ಹೇಳಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಸಮಯದಲ್ಲಿ ಮಾತನಾಡಿದ ಸಂಜಯ್ ಬಂಗಾರ್ ರೀಸ್ ಟೋಪ್ಲಿ ಇಂಗ್ಲೆಂಡ್ಗೆ ವಾಪಸ್ ಹೋಗಿರುವುದಾಗಿ ಮಾಹಿತಿ ನೀಡಿದರು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

"ದುರದೃಷ್ಟವಶಾತ್, ರೀಸ್ ಟೋಪ್ಲೆ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ನಾವು ಅವರನ್ನು ಮರಳಿ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದೇವೆ ಆದರೆ ದುರದೃಷ್ಟವಶಾತ್, ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ನಾವು ಸರಿಯಾದ ಸಮಯದಲ್ಲಿ ಬದಲಿ ಆಟಗಾರನನ್ನು ಹೆಸರಿಸುತ್ತೇವೆ," ಎಂದು ಆರ್ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಖಚಿತಪಡಿಸಿದ್ದಾರೆ.

ರೀಸ್ ಟೋಪ್ಲಿ ಹೇಗೆ ಗಾಯಗೊಂಡರು?
ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ರೀಸ್ ಟೋಪ್ಲಿ ಬೌಂಡರಿ ತಡೆಯುವ ಯತ್ನದಲ್ಲಿ ಭುಜಕ್ಕೆ ಗಾಯಮಾಡಿಕೊಂಡರು. ಪಂದ್ಯದ 8ನೇ ಓವರ್ ನಲ್ಲಿ ಕರಣ್ ಶರ್ಮಾ ಬೌಲಿಂಗ್ನಲ್ಲಿ ತಿಲಕ್ ವರ್ಮಾ ಹೊಡೆತವನ್ನು ತಡೆಯಲು ಡೈವ್ ಮಾಡಿದ ಟೋಪ್ಲಿ ಭುಜದ ಮೇಲೆ ದೇಹದ ಭಾರವನ್ನು ಬಿಟ್ಟ ಕಾರಣ, ಗಾಯ ಮಾಡಿಕೊಂಡರು. ನಂತರ ಫಿಸಿಯೋಗಳು ಅವರನ್ನು ಮೈದಾನದಿಂದ ಹೊರ ಕರೆದುಕೊಂಡು ಹೋದರು.
2023ರ ಐಪಿಎಲ್ನಲ್ಲಿ ಆರ್ ಸಿಬಿ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ಟೂರ್ನಿ ಆರಂಭಕ್ಕೆ ಮುನ್ನವೇ ವಿಲ್ ಜ್ಯಾಕ್ಸ್ ಹೊರಗುಳಿದರು. ನಂತರ ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಕೂಡ ಹಿಮ್ಮಡಿ ಗಾಯದಿಂದ ಐಪಿಎಲ್ನಿಂದ ಹೊರ ಬಿದ್ದಿದ್ದಾರೆ. ಈ ಪಟ್ಟಿಗೆ ಈಗ ರೀಸ್ ಟೋಪ್ಲಿ ಸೇರ್ಪಡೆಯಾಗಿದ್ದಾರೆ.
ತಂಡದ ಮತ್ತೊಬ್ಬ ವೇಗದ ಬೌಲರ್ ಜೋರ್ಶ ಹೇಜಲ್ವುಡ್ ಕೂಡ ಗಾಯಗೊಂಡಿದ್ದು, ಅವರು ಇನ್ನೂ ಆರ್ ಸಿಬಿ ತಂಡವನ್ನು ಸೇರಿಕೊಂಡಿಲ್ಲ. ಏಪ್ರಿಲ್ 14ರಂದು ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಸಂಜಯ್ ಬಂಗಾರ್ ಹೇಳಿದರು. ವನಿಂದು ಹಸರಂಗ ಕೂಡ ಏಪ್ರಿಲ್ 10 ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಕೋಚ್ ಮಾಹಿತಿ ನೀಡಿದರು.
ಜೋಶ್ ಹೇಜಲ್ವುಡ್ ಏಪ್ರಿಲ್ 14ರಂದು ತಂಡವನ್ನು ಸೇರಿಕೊಂಡರು ಅವರು ತಕ್ಷಣವೇ ಮೈದಾನಕ್ಕೆ ಇಳಿಯುವುದು ಅನುಮಾನ ಎನ್ನಲಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ತವರಿನಲ್ಲಿ ನಡೆಯಲಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹೇಜಲ್ವುಡ್ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೇಜಲ್ವುಡ್ ಬರುವವರೆಗೂ ಇಂಗ್ಲೆಂಡ್ನ ಎಡಗೈ ವೇಗದ ಬೌಲರ್ ಡೇವಿಡ್ ವಿಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ.
ಅತಿ ಶೀಘ್ರದಲ್ಲೇ ರೀಸ್ ಟೋಪ್ಲಿ ಬದಲಾಗಿ ಬೇರೆ ಆಟಗಾರರನ್ನು ಹೆಸರಿಸಲಾಗುತ್ತದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ. ಆರ್ ಸಿಬಿ ಬೌಲಿಂಗ್ ಸದ್ಯ ಮುಖ್ಯ ಸಮಸ್ಯೆಯಾಗಿರುವುದರಿಂದ ಉತ್ತಮ ಬೌಲರ್ ಗಾಗಿ ಆರ್ ಸಿಬಿ ತಂಡದ ಮ್ಯಾನೇಜ್ಮೆಂಟ್ ಹುಡುಕಾಟ ನಡೆಸಲಿದೆ. ಮುಂದಿನ ಪಂದ್ಯಕ್ಕೆ ಮುನ್ನ ಬದಲೀ ಆಟಗಾರರನ್ನು ಹೆಸರಿಸುವ ಸಾಧ್ಯತೆ ಇದೆ.