ದೇಶೀಯ ಟೂರ್ನಿಗಳಿಗೆ ಸಂಬಂಧಿಸಿದಂತೆ ಯಾವುದೇ ಅಂಕಿ ಅಂಶಗಳು ಬೇಕಾದಲ್ಲಿ ಥಟ್ಟನೇ ನೆನಪಾಗುತ್ತಿದ್ದ ಹೆಸರು ಚೆನ್ನಗಿರಿ ಕೇಶವ್ ಮೂರ್ತಿ. ಅಂಕಿ ಅಂಶಗಳನ್ನು ಪಟಪಟನೇ ಹೇಳುವ ಖ್ಯಾತಿ ಪಡೆದಿದ್ದ ಚೆನ್ನಗಿರಿ ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ ಹಾಗೂ ಮಗಳು ಸವಿತಾ, ಮಗ ಸಂಜಯ್ ಅವರನ್ನು ಅಗಲಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಾಗಲು ಹೆಗಲಿದೆ ಒಂದು ಚೀಲ ಹಾಕಿಕೊಂಡು, ಪ್ರೆಸ್ ಬಾಕ್ಸ್ನಲ್ಲಿ ಚಿರಪರಿಚಿತ ಮುಖ ಚೆನ್ನಗಿರಿ ಕೇಶವ್ ಮೂರ್ತಿ. ಇವರು ಆ ದಿನ ಪಂದ್ಯಕ್ಕೆ ಸಂಬಂಧಿಸಿದ ವಿಶೇಷ ಅಂಕಿ ಅಂಶಗಳ ಪೇಪರ್ಗಳನ್ನ ಕ್ರೀಡಾ ಪತ್ರಕರ್ತರ ಕೈಗೆ ನೀಡುತ್ತಿದ್ರು. ದೇಶೀಯ ಕ್ರಿಕೆಟ್ ಟೂರ್ನಿಯ ಯಾವುದೇ ಅಂಕಿ ಅಂಶಗಳನ್ನು ಕೇಳಿದ್ರೂ ಚೆನ್ನಗಿರಿ ಅವರು ಒಂದು ನಿಮಿಷ ಮೇಲ್ ಮಾಡುವೇ ಎಂದು ಹೇಳುತ್ತಿದ್ದರು. ಇವರ ಅಂಕಿ ಅಂಶಗಳ ಲೈಬ್ರರಿಯಲ್ಲಿ ಹಲವು ಮಹತ್ವದ ಅಂಕಿ ಅಂಶಗಳು ಅಡಗಿ ಕೊಂಡಿವೆ.

ರಣಜಿ ಟ್ರೋಫಿ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿದಾಗ ಚೆನ್ನಗಿರಿ ಅಂಕಿ ಅಂಶಗಳ ಗುಚ್ಚಗಳನ್ನೇ ಕ್ರೀಡಾ ಪತ್ರಕರ್ತರಿಗೆ ಕಳುಹಿಸುತ್ತಿದ್ದರು. ಇನ್ನು ಬರೀ ಇವರು ಅಂಕಿ ಅಂಶಗಳನ್ನು ಮಾತ್ರ ಹೇಳುವ ಮಾಂತ್ರಿಕ ಅಲ್ಲ. ಇವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪತ್ತೆದಾರಿ ಕಾದಂಬರಿಗಳು, ಕ್ರಿಕೆಟ್ಗೆ ಸಂಬಂಧಿಸಿದ ಪುಸ್ತಕಗಳನ್ನು ಇವರು ಬರೆದಿದ್ದಾರೆ.
ಚೆನ್ನಗಿರಿ ಕೇಶವ್ ಮೂರ್ತಿ ಅವರ ಜೀವನಾಧಾರಿತ ಪುಸ್ತಕ ಸಾಹಿತ್ಯವೇ ಹಸಿರು, ಕ್ರಿಕೆಟೇ ಉಸಿರು ಎಂಬ ಪುಸ್ತಕವನ್ನು ಸ್ಪಿನ್ ಮಾಂತ್ರಿಕ ಕ್ರಿಕೆಟ್ ದಿಗ್ಗಜ ಬಿಎಸ್ ಚಂದ್ರಶೇಖರ್ ಅವರ ಸ್ವಗ್ರಹದಲ್ಲಿ ಬಿಡುಗಡೆ ಆಗಿತ್ತು.