
ಇರಾನಿ ಕಪ್ಗಾಗಿ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ತಂಡವನ್ನು ಪ್ರಕಟಿಸಲಾಗಿದೆ. ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಹೊರತಾಗಿಯೂ ಸರ್ಫರಾಜ್ ಖಾನ್ ತಂಡಕ್ಕೆ ಆಯ್ಕೆಯಾಗಿಲ್ಲ.
ಕನ್ನಡಿಗ ಮಯಾಂಕ್ ಅಗರ್ವಾಲ್ರನ್ನು ಶೇಷ ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ನಾಯಕ ಯಶ್ ಧುಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಿಯಾಂಕ್ ಪಾಂಚಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಅಭಿಮನ್ಯು ಈಶ್ವರನ್ ಮತ್ತು ಯಶಸ್ವಿ ಜೈಸ್ವಾಲ್ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ರನ್ ಗಳಿಸಲು ವಿಫಲವಾಗಿರುವ ಕೆಎಲ್ ರಾಹುಲ್ ಇರಾನಿ ಕಪ್ನಲ್ಲಿ ಆಡುತ್ತಾರೆ ಎಂದು ನಿರೀಕ್ಷೆ ಮಾಡಿತ್ತಾದರೂ, ಅವರು ಭಾರತ ತಂಡದಲ್ಲೇ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಫರಾಜ್ ಖಾನ್ ತಂಡಕ್ಕೆ ಆಯ್ಕೆಯಾಗದಿರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ. ಸರ್ಫರಾಜ್ ಕಳೆದ 26 ರಣಜಿ ಟ್ರೋಫಿ ಪಂದ್ಯಗಳಲ್ಲಿ 106.70 ಸರಾಸರಿಯಲ್ಲಿ 3000 ರನ್ ಗಳಿಸಿದ್ದಾರೆ. 12 ಶತಕಗಳು, 7 ಅರ್ಧಶತಕಗಳನ್ನು ಬಾರಿಸಿದ್ದಾರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಬೇಕೆನ್ನುವ ಒತ್ತಾಯ ಇತ್ತಾದರೂ ಅವರು ಆಯ್ಕೆಯಾಗಲಿಲ್ಲ. ಈಗ ಇರಾನಿ ಕಪ್ಗಾಗಿ ಕೂಡ ಅವರನ್ನು ನಿರ್ಲಕ್ಷಿಸಲಾಗಿದೆ.

ಮಾರ್ಚ್ 1ರಿಂದ ಪಂದ್ಯ ಆರಂಭ
ಇರಾನಿ ಕಪ್ ಪಂದ್ಯ ಮಾರ್ಚ್ 1ರಿಂದ ಆರಂಭವಾಗಲಿದೆ. ಗ್ವಾಲಿಯರ್ ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಮೊದಲು ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿತ್ತು, ಭಾರತ ಆಸ್ಟ್ರೇಲಿಯಾ ಟೆಸ್ಟ್ ಧರ್ಮಶಾಲಾದಿಂದ ಇಂದೋರ್ ಗೆ ಸ್ಥಳಾಂತರವಾದ ನಂತರ ಇರಾನಿ ಕಪ್ ಪಂದ್ಯವನ್ನು ಗ್ವಾಲಿಯರ್ ಗೆ ಸ್ಥಳಾಂತರಿಸಲಾಗಿದೆ.
ಕಳೆದ ಬಾರಿ ಇರಾನಿ ಕಪ್ ಫೈನಲ್ನಲ್ಲಿ ಶೇಷ ಭಾರತ ಮತ್ತು ಸೌರಾಷ್ಟ್ರ ಸೆಣೆಸಿದ್ದವು. ಶೇಷ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಆಗಿದೆ. ಬಂಗಾಳ ವೇಗಿ ಮುಕೇಶ್ ಕುಮಾರ್, ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಕೂಡ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇರಾನಿ ಕಪ್ಗಾಗಿ ಉಭಯ ತಂಡಗಳು
ಶೇಷ ಭಾರತ ತಂಡ: ಮಾಯಾಂಕ್ ಅಗರ್ವಾಲ್, ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಖೇಶ್ ಕುಮಾರ್, ಅತೀತ್ ಶೆತ್, ಚೇತನ್ ಸಕಾರಿಯಾ, ನವ್ದೀಪ್ ಸೈನಿ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಮಯಾಂಕ್ ಮಾರ್ಕಂಡೆ, ಸೌರಭ್ ಕುಮಾರ್, ಆಕಾಶ್ ದೀಪ್, ನಾನಾ ಇಂದ್ರಜಿತ್, ಪುಲ್ಕಿತ್ ನಾರಂಗ್, ಯಶ್ ಧುಲ್.
ಮಧ್ಯಪ್ರದೇಶ: ರಜತ್ ಪಟಿದಾರ್, ಯಶ್ ದುಬೆ, ಹಿಮಾಂಶು ಮಂತ್ರಿ (ವಿಕೆಟ್ ಕೀಪರ್), ಹರ್ಷ ಗಾವ್ಲಿ, ಶುಭಮ್ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕಾ, ಸರಂಶ್ ಜೈನ್, ಆವೇಶ್ ಖಾನ್, ಅಂಕಿತ್ ಕುಶ್ವಾ, ಗೌರವ್ ಯಾದವ್, ಅನುಭವ್ ಅಗರ್ವಾಲ್, ಮಿಹಿರ್ ಹಿರ್ವಾನಿ.