
ಬೆಂಗಳೂರು, ಜುಲೈ 3: ವಿಶ್ವಕಪ್ನಲ್ಲಿ ಈಗಾಗಲೇ ಸೆಮಿಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡಿರುವ ಟೀಮ್ ಇಂಡಿಯಾ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಎತ್ತುವ ಯೋಜನೆಯಲ್ಲಿದೆ. ಬೆಂಗಳೂರು ಮೂಲದ ಅಕ್ಕಸಾಲಿಗರೊಬ್ಬರು ಪುಟಾಣಿ ವಿಶ್ವಕಪ್ ಟ್ರೋಫಿ ತಯಾರಿಸುವ ಮೂಲಕ ಕೊಹ್ಲಿ ಬಳಗಕ್ಕೆ ವಿಭಿನ್ನ ರೀತಿಯಲ್ಲಿ ಶುಭ ಕೋರಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮೂಲತಃ ಬೆಂಗಳೂರಿನವರಾದ ನಾಗರಾಜ್ ರೇವಂಕಾರ್ ಅವರು ಕೇವಲ 1.5 ಸೆಂ.ಮೀ. ಎತ್ತರದ, ಐಸಿಸಿ ವಿಶ್ವಕಪ್ ಟ್ರೋಫಿಯನ್ನೇ ಹೋಲುವ ಟ್ರೋಫಿ ನಿರ್ಮಿಸಿದ್ದಾರೆ. ಕೇವಲ 0.49 ಗ್ರಾಂ ತೂಗುವ ಈ ಪುಟಾಣಿ ಚಿನ್ನದ ವಿಶ್ವಕಪ್ ಟ್ರೋಫಿ ಈಗ ಜನಾಕರ್ಷಿಸುತ್ತಿದೆ.
'ವಿಶ್ವಕಪ್ ಕ್ರಿಕೆಟ್ ಗುಂಗಿನಲ್ಲಿರುವ ಈ ಹೊತ್ತಿಗೆ ಅರ್ಥ ಒದಗಿಸಲು ನಾನಿದನ್ನು ತಯಾರಿಸಿದ್ದೇನೆ. ಭಾರತ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಡಿಯಲ್ಲಿ, ಆಶಯದಡಿಯಲ್ಲಿ ಈ ಪುಟಾಣಿ ಕಪ್ ತಯಾರಿಸಿದ್ದೇನೆ. 0.49 ಗ್ರಾಂ ತೂಗುವ, 1.5 ಸೆಂ.ಮೀ ಎತ್ತರದ ಈ ವಿಶ್ವಕಪ್ ನೋಡಲು ಬಹಳಷ್ಟು ಜನ ಬಂದು ಹೋಗುತ್ತಿದ್ದಾರೆ.
ಮಂಗಳವಾರ (ಜುಲೈ 3) ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾವನ್ನು 28 ರನ್ಗಳಿಂದ ಸೋಲಿಸುವುದರೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿವೆ.
ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನು ಸೆಣಸಾಡಲಿವೆ. ಆದರೆ ಅವಕಾಶ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪಾಲಿಗೆ ಹೆಚ್ಚು. ಮುಂದೆ ಭಾರತಕ್ಕೆ ಶ್ರೀಲಂಕಾ ವಿರುದ್ಧ ಪಂದ್ಯವಿದ್ದು ಇದರಲ್ಲೂ ಭಾರತ ಗೆಲ್ಲುವ ನಿರೀಕ್ಷೆಯಿದೆ.