ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ನಾಯಕ ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗದ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ರೋಹಿತ್ ಶರ್ಮಾ ಕೆಲಸವನ್ನು ಸುಲಭಗೊಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಬದಲಿಗೆ ವಿಶ್ವ ಚಾಂಪಿಯನ್ ಬೌಲರ್ ಅನ್ನು ರಿಕಿ ಪಾಂಟಿಂಗ್ ಆಯ್ಕೆ ಮಾಡಿದ್ದಾರೆ.
ರಿಕಿ ಪಾಂಟಿಂಗ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯಕ್ಕೆ ಭಾರತ ತಂಡದ ಆಡುವ ಹನ್ನೊಂದರ ಬಳಗದಿಂದ ಯುವ ಸ್ಟಾರ್ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಹೊರಗಿಡಲು ಸಲಹೆ ನೀಡಿದ್ದಾರೆ. ಹರ್ಷಿತ್ ರಾಣಾ ಬದಲಿಗೆ ಅರ್ಷದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಲು ರೋಹಿತ್ ಶರ್ಮಾಗೆ ಹೇಳಿದ್ದಾರೆ.

ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಲ್ಲದೆ ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪ್ರವೇಶಿಸುತ್ತಿದೆ. ಬುಮ್ರಾ ಸ್ಥಾನಕ್ಕೆ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಾಣಾ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಂತಹ ಮೆಗಾ ಟೂರ್ನಿಯಲ್ಲಿ ಅರ್ಷದೀಪ್ ಸಿಂಗ್ ಕಣಕ್ಕಿಳಿಯುವುದು ಸೂಕ್ತ ಎಂದು ಪಾಂಟಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಕಿ ಪಾಂಟಿಂಗ್, ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ನಾನು ಎಡಗೈ ವೇಗದ ಬೌಲರ್ ಅನ್ನು ಆಯ್ಕೆ ಮಾಡುತ್ತೇನೆ. ಬುಮ್ರಾ ಬದಲಿಗೆ ಅರ್ಷದೀಪ್ ಅವರನ್ನು ತಂಡದಲ್ಲಿಯೇ ಇರಿಸಿಕೊಳ್ಳಬೇಕು. ಅವರು ಟಿ20 ಕ್ರಿಕೆಟ್ನಲ್ಲಿ ಎಷ್ಟು ಉತ್ತಮ ಬೌಲರ್ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರ ಕೌಶಲ್ಯಗಳ ಬಗ್ಗೆ ಮಾತನಾಡಿದರೆ, ಹೊಸ ಚೆಂಡಿನಲ್ಲಿ ಮತ್ತು ಡೆತ್ ಓವರ್ಗಳಲ್ಲಿ ಬುಮ್ರಾ ಅವರಂತೆ ಅರ್ಷದೀಪ್ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಒಂದು ವೇಳೆ ಅರ್ಷದೀಪ್ ಅವರಿಗೆ ಅವಕಾಶ ನೀಡದಿದ್ದರೆ, ಭಾರತ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ ಎಂದಿದ್ದಾರೆ.
ಹರ್ಷಿತ್ ರಾಣಾ ಪ್ರತಿಭಾನ್ವಿತ ಬೌಲರ್. ಅವರನ್ನು ಆಡುವ ಹನ್ನೊಂದರಿಂದ ಹೊರಗಿಡುವುದರಿಂದ ಅವರು ಯಾವುದರಿಂದಲೂ ವಂಚಿತರಾಗುತ್ತಿದ್ದಾರೆ ಎಂದರ್ಥವಲ್ಲ. ಹೊಸ ಚೆಂಡಿನಲ್ಲಿ ಅವರು ಏನು ಅದ್ಭುತಗಳನ್ನು ಮಾಡಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಡೆತ್ ಓವರ್ಗಳಲ್ಲಿ ಅವರು ಅರ್ಷದೀಪ್ ಸಿಂಗ್ ಅವರಷ್ಟು ಅದ್ಭುತವಾಗಿ ಬೌಲಿಂಗ್ ಮಾಡುವುದಿಲ್ಲ. ಎಡಗೈ ವೇಗದ ಬೌಲರ್ ತಂಡದಲ್ಲಿರುವುದು ಬೌಲಿಂಗ್ ದಾಳಿಗೆ ಉತ್ತಮವಾಗಿದೆ. ಮೆಗಾ ಟೂರ್ನಿಗಳಲ್ಲಿ ಅಗ್ರ ಕ್ರಮಾಂಕದಲ್ಲಿ ಹೆಚ್ಚು ಬಲಗೈ ಬ್ಯಾಟರ್ಗಳು ಇರುವಾಗ, ಎಡಗೈ ಬೌಲರ್ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದು ಪಾಂಟಿಂಗ್ ತಿಳಿಸಿದ್ದಾರೆ.