ಯುಪಿ ಟಿ20 ಲೀಗ್ನಲ್ಲಿ ಮೀರತ್ ಮೇವರಿಕ್ಸ್ ತಂಡದ ನಾಯಕರಾಗಿರುವ ಯುವ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು ತಮ್ಮ ತಂಡವನ್ನು ಸೆಮಿಫೈನಲ್ಗೆ ಕರೆ ತಂದಿದ್ದಾರೆ. ಇದರ ಬೆನ್ನಲ್ಲೇ ಅವರ ಅದೃಷ್ಟದ ಬಾಗಿಲು ತೆರೆದಿದೆ.
ರಿಂಕು ಸಿಂಗ್ ಈ ಹಿಂದೆ ಯಾವ ಟೂರ್ನಿಗೆ ಆಯ್ಕೆಯಾಗಿರಲಿಲ್ಲವೋ ಅದೇ ಟೂರ್ನಿಗೆ ಈಗ ಆಯ್ಕೆಯಾಗಿದ್ದಾರೆ. ದುಲೀಪ್ ಟ್ರೋಫಿ 2024 ಟೂರ್ನಿಯಲ್ಲಿ ಭಾಗವಹಿಸಲು ರಿಂಕು ಸಿಂಗ್ ಅವರಿಗೆ ಬಿಸಿಸಿಐ ಕರೆ ನೀಡಲಾಗಿದೆ.

ದುಲೀಪ್ ಟ್ರೋಫಿಯ ಉಳಿದ ಪಂದ್ಯಗಳನ್ನು ರಿಂಕು ಸಿಂಗ್ ಆಡಲಿದ್ದಾರೆ. ಅಭಿಮನ್ಯು ಈಶ್ವರನ್ ಅವರು ಮುನ್ನಡೆಸುತ್ತಿರುವ ಭಾರತ ಬಿ ತಂಡಕ್ಕೆ ಅವರು ಸೇರ್ಪಡೆಗೊಂಡಿದ್ದಾರೆ. ಇದೀಗ ದುಲೀಪ್ ಟ್ರೋಫಿಗೆ ಭಾರತ ಬಿ ತಂಡದಲ್ಲಿ ಆಯ್ಕೆಯಾಗಿರುವ ಕಾರಣ ರಿಂಕು ಯುಪಿ ಟಿ20 ಲೀಗ್ನಲ್ಲಿ ಮೀರತ್ ಮೇವರಿಕ್ಸ್ ತಂಡವನ್ನು ತೊರೆಯಬೇಕಾಗುತ್ತದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಅಭಿಮನ್ಯು ಈಶ್ವರನ್ ನೇತೃತ್ವದ ತಂಡದಲ್ಲಿ ರಿಂಕು ಆಡಲಿದ್ದಾರೆ. ಉತ್ತರ ಪ್ರದೇಶದ ಒಟ್ಟು 4 ಆಟಗಾರರು ದುಲೀಪ್ ಟ್ರೋಫಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಮತ್ತೊಂದೆಡೆ ಯುವ ವಿಕೆಟ್ ಕೀಪರ್- ಬ್ಯಾಟರ್ ಧ್ರುವ್ ಜುರೆಲ್ ಮತ್ತು ವೇಗದ ಬೌಲರ್ ಯಶ್ ದಯಾಳ್ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಬ್ಬರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ರಿಂಕು ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. "ದುಲೀಪ್ ಟ್ರೋಫಿಗೆ ಕರೆದಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಆರಂಭದಲ್ಲಿ ತಂಡಗಳನ್ನು ಘೋಷಿಸಿದಾಗ, ನಾನು ಆಯ್ಕೆಯಾಗಿರಲಿಲ್ಲ. ಆಗ ನನಗೆ ನಿರಾಶೆಯಾಯಿತು. ಇಂದು, ನಾನು ಪ್ರತಿಷ್ಠಿತ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ಪರ ಆಡಲಿರುವುದರಿಂದ ನಾನು ಇನ್ನಷ್ಟು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ರಿಂಕು ಇದುವರೆಗೆ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಥಮ ದರ್ಜೆಯಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ.
ರಿಂಕು ಸಿಂಗ್ ಆಡಿರುವ 47 ಪಂದ್ಯಗಳಲ್ಲಿ 54.7 ಸರಾಸರಿಯಲ್ಲಿ 3173 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕಗಳು ಮತ್ತು 20 ಅರ್ಧ ಶತಕಗಳು ಸೇರಿವೆ. ರಿಂಕು ಅವರ ಗರಿಷ್ಠ ಸ್ಕೋರ್ ಅಜೇಯ 163. ಸೆಪ್ಟೆಂಬರ್ 12 ರಿಂದ ಭಾರತ ಬಿ ಮತ್ತಿ ಭಾರತ ಸಿ ತಂಡಗಳ ನಡುವೆ ಪಂದ್ಯ ಆರಂಭವಾಗಲಿದೆ.