ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದಾರೆ. ದೀರ್ಘಕಾಲದ ವಿಶ್ರಾಂತಿಯ ಅಗತ್ಯವಿರುವ ಕಾರಣ ರಿಷಭ್ ಪಂತ್ ಕೆಲಕಾಲ ಮೈದಾನಕ್ಕೆ ಇಳಿಯುವುದು ಅಸಾಧ್ಯ. ಹೀಗಾಗಿ ರಿಷಭ್ ಪಂತ್ ಈ ವರ್ಷದ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವುದು ಖಚಿತವಾಗಿದೆ. ಈ ಬಗ್ಗೆ ಸೌರವ್ ಗಂಗೂಲಿ ಮಾಹಿತಿಯನ್ನು ನೀಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪಂತ್ ಅಲಭ್ಯತೆ ಹಿನ್ನಡೆಯುಂಟು ಮಾಡಲಿದೆ ಎಂದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಸದ್ಯ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಲಿಗಮೆಂಟ್ ಗಾಯಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣಲು ಪಂತ್ ಕನಿಷ್ಠ 3-4 ತಿಂಗಳ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಪಂತ್ ಐಪಿಎಲ್ನಲ್ಲಿ ಆಡುವುದು ಅಸಂಭವವಾಗಿದ್ದು ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್
"ಪಂತ್ ಚೇತರಿಕೆಗೆ ಸಮಯ ತೆಗೆದುಕೊಳ್ಳಲಿದೆ. ಅದು ಅಪಘಾತವಾಗಿದ್ದು ಏನನ್ನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಇನ್ನು 23 ವರ್ಷವಾಗಿರುವ ಕಾರಣ ಸಾಕಷ್ಟು ಸಮಯ ಅವರಲ್ಲಿದೆ. ಮುಂಬರುವ ಐಪಿಎಲ್ನಲ್ಲಿ ಅವರು ಆಡುವುದು ಅಸಾಧ್ಯ. ನಾನು ಡಿಸಿ ಜೊತೆಗೆ ಸಂಪರ್ಕದಲ್ಲಿದ್ದೇನೆ. ಈ ಬಾರಿ ಅದ್ಭುತ ಐಪಿಎಲ್ ಆಗಿರಲಿದೆ. ಆದರೆ ಪಂತ್ ಗಾಯಗೊಂಡಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೇಲೆ ಪರಿಣಾಮ ಬೀರಲಿದೆ" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ಸೌರವ್ ಗಂಗೂಲಿ ಕಳೆದ ವರ್ಷ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಹೀಗಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ನೇಮಕವಾಗುವ ಸಾಧ್ಯತೆಯಿದೆ. ಇನ್ನು 25ರ ಹರೆಯದ ರಿಷಬ್ ಪಂತ್ ಕಳೆದ ಡಿಸೆಂಬರ್ 20ರಂದು ದೆಹಲಿ-ಡೆಹ್ರಾಡೂನ್ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದಲ್ಲಿ ಕಾರಿ ಬೆಂಕಿಗೆ ಆಹುತಿಯಾಗುವ ಕೆಲವೇ ಕ್ಷಣಗಳ ಮುನ್ನ ರಿಷಭ್ ಪಂತ್ ಕಾರಿನಿಂದ ಹೊರಗಿಳಿಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಪಂತ್ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಆರಂಭದಲ್ಲಿ ರಿಷಭ್ ಪಂತ್ ಅವರಿಗೆ ಡೆಹ್ರಾಡೂನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಏರ್ಲಿಫ್ಟ್ ಮಾಡಿ ಮುಂಬೈನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.