ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೆ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುತ್ತಿರುವ ಭಾರತ, ಸುಸ್ಥಿತಿಯಲ್ಲಿದೆ. ಈ ವೇಳೆ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ರಿಷಭ್ ಪಂತ್ ಕ್ರಿಸ್ ವೋಕ್ಸ್ ಅವರ ಎಸೆತದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಆಂಬ್ಯುಲೆನ್ಸ್ನಲ್ಲಿ ಕೂರಿಸಿಕೊಂಡು ಹೋಗಲಾಯಿತು. ಇದರಿಂದ ಟೀಮ್ ಇಂಡಿಯಾ ಚಿಂತೆ ಹೆಚ್ಚಾಯಿತು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಟೀಮ್ ಮ್ಯಾನೇಜ್ಮೆಂಟ್ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.
ಕ್ರಿಸ್ ವೋಕ್ಸ್ ಅವರ ಎಸೆತದಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಗಿದೆ. ನಾಲ್ಕನೇ ಟೆಸ್ಟ್ನ ಎರಡನೇ ದಿನದಾಟದ ವೇಳೆ ರಿಷಭ್ ಪಂತ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡರು. ಈ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಸಹ ಒಂದು ಟ್ವೀಟ್ ಮಾಡಿದೆ.

ಇನಿಂಗ್ಸ್ನ 102ನೇ ಓವರ್ ಮಾಡಲು ಬೆನ್ ಸ್ಟೋಕ್ಸ್ ಮುಂದಾದರು. ಈ ವೇಳೆ ಶಾರ್ದೂಲ್ ಠಕೂರ್ ನಾಲ್ಕನೇ ಎಸೆತದಲ್ಲಿ ತಾಳ್ಮೆ ಕಳೆದುಕೊಂಡರು. ಇವರ ಬ್ಯಾಟ್ನ ಅಂಚಿಗೆ ಬಡಿದ ಚೆಂಡು ಬೆನ್ ಡಕೆಟ್ ಕೈ ಸೇರಿತು. ಆಗ ಮ್ಯಾಂಚೆಸ್ಟರ್ ಮೈದಾನದಲ್ಲಿ ವಿದ್ಯುತ್ ಸಂಚಾರ ಆದಂತೆ ಆಯಿತು. ಇದಕ್ಕೆ ಕಾರಣ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಬ್ಯಾಟ್ ಹಿಡಿದು ಕೊಂಚ ಕುಂಟುತ್ತಾ, ಮೆಟ್ಟಿಲ್ಲುಗಳನ್ನು ಇಳಿದರು. ಆಗ ರಿಷಭ್ ಪಂತ್ ಅವರನ್ನು ಕಂಡು ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ರಿಷಭ್ ಪಂತ್ ಅವರ ಸ್ಕ್ಯಾನ್ ವರದಿಯಲ್ಲಿ ಅವರ ಮೂಳೆ ಮರಿದಿದ್ದು ಧೃಡ ಪಟ್ಟಿದೆ. ಆದರೂ ರಿಷಭ್ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಬ್ಯಾಟಿಂಗ್ ಮಾಡಲು ಮುಂದಾಗಿದ್ದಾರೆ. ಇವರ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ಇಟ್ಟಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಿರದೇ ಇದ್ದರೂ ಸಹ ಅವರು ಬ್ಯಾಟ್ ಮಾಡಲು ಮೈದಾನಕ್ಕೆ ಬಂದರು. ಆದರೆ ಇವರು ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಎಂದು ಬಿಸಿಸಿಐ ಈ ಮೊದಲೇ ಟ್ವೀಟ್ ಮಾಡಿ ತಿಳಿಸಿದೆ.
ರಿಷಭ್ ಪಂತ್ ಅವರ ಗಾಯಕ್ಕೆ ಆರು ವಾರಗಳ ವಿಶ್ರಾಂತಿ ಅವಶ್ಯಕ ಎಂದು ತಿಳಿದುಂದಿದೆ. ಹೀಗಾಗಿ ಇವರು ಐದನೇ ಟೆಸ್ಟ್ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈಗ ಬರುತ್ತಿರುವ ವರದಿಗಳು ನಿಜವಾದ್ರೆ, ಇಶಾನ್ ಕಿಶನ್, ಎರಡು ವರ್ಷದ ಬಳಿಕ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
ಭಾರತ ಎರಡನೇ ದಿನದಾಟವನ್ನು 4 ವಿಕೆಟ್ ನಷ್ಟಕ್ಕೆ 264 ರನ್ಗಳಿಂದ ಮುಂದುವರೆಸಿ, 358 ರನ್ಗಳಿಗೆ ಮೊದಲ ಇನಿಂಗ್ಸ್ನಲ್ಲಿ ಆಲೌಟ್ ಆಯಿತು. ಈ ವೇಳೆ ರವೀಂದ್ರ ಜಡೇಜಾ (20), ಶಾರ್ದೂಲ್ ಠಾಕೂರ್ (41), ವಾಷಿಂಗ್ಟನ್ ಸುಂದರ್ (27) ತಂಡಕ್ಕೆ ಕೊಂಚ ಆಧಾರವಾದರು. ಇನ್ನು ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡಿದರು. ಇವರು 75 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 5, ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರು.