
ನವದೆಹಲಿ, ಆಗಸ್ಟ್ 23: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಳಿಕ ಅವರ ಜಾಗಕ್ಕೆ ರಿಷಬ್ ಪಂತ್ ಸೂಕ್ತ ಅನ್ನೋ ಅಭಿಪ್ರಾಯವನ್ನು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸುತ್ತಲೇ ಇದ್ದಾರೆ. ಭಾರತದ ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕೂಡ ಇದೇ ಮಾತು ಹೇಳಿದ್ದಾರೆ.
'ಧೋನಿ ಜಾಗಕ್ಕೆ ಇರುವ ಆಟಗಾರರಲ್ಲಿ ರಿಷಬ್ ಪಂತ್ ಬೆಸ್ಟ್ ಆಟಗಾರ. ಆತ ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ. ಇನ್ನು ಬಹುಶಃ ಏಕದಿನ ಮತ್ತು ಟಿ20ಯಲ್ಲೂ ಉತ್ತಮ ಪ್ರದರ್ಶನದ ಮೂಲಕ ಇದನ್ನು ಸಾಬೀತು ಪಡಿಸಬಲ್ಲರು. ಹೀಗಾಗಿ ಧೋನಿ ಜಾಗಕ್ಕೆ ಪಂತ್ ಉತ್ತಮ ಆಟಗಾರ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸ್ಥಾನಕ್ಕೆ ವೃದ್ಧಿಮಾನ್ ಸಾಹ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಗಾಯದ ಸಮಸ್ಯೆ ಅಲ್ಲಿ ನೆಲೆಯೂರಲು ಅವರನ್ನು ಬಿಡಲಿಲ್ಲ. ಇನ್ನು ದಿನೇಶ್ ಕಾರ್ತಿಕ್ ಮತ್ತು ಪಾರ್ಥಿವ್ ಪಟೇಲ್ ಕೂಡ ಅದೃಷ್ಟ ಪರೀಕ್ಷೆ ಮಾಡಿದರಾದರೂ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು.
ಮಾತು ಮುಂದುವರೆಸಿದ ಸೆಹ್ವಾಗ್, 'ರಿಷಬ್ ಪಂತ್ ಕೊಂಚ ಕಾಲಾವಾಶ ತೆಗೆದುಕೊಳ್ಳಲಿದ್ದಾರೆ. ಆಟದ ವೇಳೆ ಶಾಟ್ಗಳನ್ನು ಆರಿಸುವಾಗ ತಪ್ಪೆಸಗುವುದನ್ನು ಪಂತ್ ಸರಿಪಡಿಸಿಕೊಂಡರೆ, ಆತ ಟೀಮ್ ಇಂಡಿಯಾಕ್ಕೆ ದೀರ್ಘ ಕಾಲ ಸೇವೆ ಸಲ್ಲಿಸಬಲ್ಲ,' ಎಂದು ನುಡಿದರು.
2018ರಲ್ಲಿ ಟ್ರೆಂಡ್ಬ್ರಿಡ್ಜ್ನ ನಾಟಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದ್ದ ಪಂತ್, 15 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 49.71ರ ಸರಾಸರಿಯಲ್ಲಿ 696 ರನ್ ಗಳಿಸಿದ್ದಾರೆ. ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ನಲ್ಲಿ 20 ರನ್ಗಳಿಸಿ ಆಡುತ್ತಿದ್ದಾರೆ. ಭಾರತ 68.5 ಓವರ್ಗೆ 6 ವಿಕೆಟ್ ಕಳೆದು 203 ರನ್ ಗಳಿಸಿದೆ.