ಕಳೆದ 10 ವರ್ಷಗಳಿಂದ ಭಾರತ ಎದುರು ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಸ್ಕಾರ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ತವರಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಎರಡು ಬಾರಿ ಮಣ್ಣು ಮುಕ್ಕಿಸಿರುವ ಟೀಮ್ ಇಂಡಿಯಾ ಹ್ಯಾಟ್ರಿಕ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.
2020-21ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಅದ್ಭುತ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ ತಂಡವನ್ನು ಭಾರತ 2-1 ಅಂತರದಿಂದ ಸೋಲಿಸಿತ್ತು. ಬ್ರಿಸ್ಬೇನ್ ಗಬ್ಬಾದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಭ್ ಪಂತ್ ಅಜೇಯ 89 ರನ್ಗಳ ಇನಿಂಗ್ಸ್ ಆಡುವ ಮೂಲಕ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು.

ಗಬ್ಬಾ ಮೈದಾನದಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಕಾಂಗೂರು ಪಡೆ ಆಜೇಯರಾಗಿತ್ತು. ಆದರೆ ಪಂತ್ ಆಡಿದ ಆಟಕ್ಕೆ ಕಾಂಗೂರು ಪಡೆ ಗಬ್ಬಾದಲ್ಲಿ ಸೋಲಿನ ರುಚಿ ನೋಡಬೇಕಾಗಿತ್ತು. ಈ ಗೆಲುವಿನ ಮೂಲಕ ಭಾರತ ಇತಿಹಾಸ ಸೃಷ್ಟಿಸಿತ್ತು. ಭಾರತದ ಯಶಸ್ಸಿನಲ್ಲಿ ರಿಷಬ್ ಪಂತ್ ಪ್ರಮುಖ ಪಾತ್ರ ವಹಿಸಿದ್ದರು. ಇದು ಪಂತ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದಾಗಿದ್ದು, ಪಂತ್ ಗಬ್ಬಾ ಟೆಸ್ಟ್ ಹೀರೋ ಎಂದು ಕರೆಯಲಾಗುತ್ತಿತ್ತು. ಇದೀಗ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್, ಗಬ್ಬಾ ಟೆಸ್ಟ್ ಗೆಲುವಿನ ಹೀರೋ ರಿಷಬ್ ಪಂತ್ ಅಲ್ಲ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಟಿಮ್ ಪೈನ್ ಹೇಳಿಕೆ ಸಂಚಲನ ಮೂಡಿಸಿದೆ. ' ಕೊನೆಯ ಆಸ್ಟ್ರೇಲಿಯಾ ಸರಣಿಯಲ್ಲಿ ಅನೇಕ ಜನರು ರಿಷಬ್ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಆದರೆ ಆ ಟೆಸ್ಟ್ ಸರಣಿಯನ್ನು ಗೆಲುವಿನ ಆಟಗಾರ ಚೇತೇಶ್ವರ ಪೂಜಾರ. ಅವರು ನಮ್ಮ ವೇಗದ ಬೌಲರ್ಗಳಿಗೆ ಬೆವರಿಳಿಸಿದ್ದರು. ಅವರ ದೇಹಕ್ಕೆ ಹಲವು ಬಾರಿ ಚೆಂಡು ಬಡಿದ ನಂತರವೂ ಎದ್ದು ನಿಲ್ಲುತ್ತಿದ್ದರು ಎಂದು ಹೇಳಿದ್ದಾರೆ.
ಗಬ್ಬಾ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ರಿಷಭ್ ಪಂತ್ ಅಜೇಯ 89 ರನ್ಗಳನ್ನು ಕಲೆ ಹಾಕಿದರೆ, ಚೇತೇಶ್ವರ ಪೂಜಾರ ಅವರ ಕೊಡುಗೆಯೂ ಪ್ರಮುಖವಾಗಿತ್ತು. ಪಂತ್ ಒಂದು ಕಡೆ ಆಕ್ರಮಣಕಾರಿಯಾಗಿ ರನ್ ಗಳಿಸುತ್ತಿದ್ದಾಗ, ಪೂಜಾರ ಆಸ್ಟ್ರೇಲಿಯಾದ ಬೌಲರ್ಗಳ ಬೆವರಿಳಿಸಿದ್ದರು. ತಾಳ್ಮೆಯುವ ಬ್ಯಾಟಿಂಗ್ ಮಾಡಿದ ಪೂಜಾರ ಭಾರತಕ್ಕೆ ಗೋಡೆಯಂತೆ ನಿಂತಿದ್ದರು. ಆದರೆ, ಈ ಬಾರಿ ಭಾರತ ತಂಡದಲ್ಲಿ ಪೂಜಾರ ಮತ್ತು ಅಜಿಂಕ್ಯ ರಹಾನೆ ಇಲ್ಲ. ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿ ಸೋತ ನಂತರ ವೇಗದ ಬೌಲರ್ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯು ಭಾರತಕ್ಕೆ ಸವಾಲಾಗಬಹುದು.
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಪ್ರಕಟಿಸಿರುವ ಭಾರತ ತಂಡದ ಬಗ್ಗೆ ಮಾತನಾಡಿರುವ ಟಿಮ್ ಪೈನ್, 'ನನ್ನ ಪ್ರಕಾರ ಆಸ್ಟ್ರೇಲಿಯಾ ತಂಡ ಆರಂಭದಿಂದಲೂ ಬಲಿಷ್ಠವಾಗಿದೆ. ಭಾರತದ ಪ್ರದರ್ಶನ ವಿಶೇಷವೇನೂ ಆಗಿಲ್ಲ. ಅವರ ಬ್ಯಾಟಿಂಗ್ ಸ್ವಲ್ಪ ವೀಕ್ ಆಗಿದೆ. ಹೊರಗೆ ಆಸ್ಟ್ರೇಲಿಯಾದ ಬ್ಯಾಟಿಂಗ್ ಉತ್ತಮವಾಗಿ ಕಾಣುತ್ತಿಲ್ಲ. ಆದರೆ ಆಟಗಾರರ ಗುಣಮಟ್ಟ ನಮಗೆ ತಿಳಿದಿದೆ. ಭಾರತಕ್ಕೆ ಮೊಹಮ್ಮದ್ ಶಮಿ ಅನುಪಸ್ಥಿತಿ ಪರಿಣಾಮ ಬೀರಬಹುದು. ಅವರು ಕಳೆದ ಬಾರಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಈಗ ಬುಮ್ರಾ ಮೇಲೆ ಹೆಚ್ಚಿನ ಒತ್ತಡವಿರುತ್ತದೆ ಎಂದು ತಿಳಿಸಿದ್ದಾರೆ.