ಭಾರೀ ಕುತೂಹಲ ಹೆಚ್ಚಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅವನಲ್ಲ ಇವನಲ್ಲಾ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳ ದಿಕ್ಕು ತಪ್ಪಿಸುತ್ತಲೇ ಇದ್ದ ಟೀಮ್ ಮ್ಯಾನೇಜ್ಮೆಂಟ್ ಅಂತಿಮವಾಗಿ, ಈ ಬಾರಿ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದೆ. ತಂಡದ ಮಾಲೀಕ ಸಂಜಯ್ ಗೋಯೆಂಕಾ ಆವರು ರಿಷಭ್ ಪಂತ್ ಅವರನ್ನು ತಂಡದ ನಾಯಕ ಎಂದು ಘೋಷಣೆ ಮಾಡಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್ ಅವರಿಗೆ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ ದಾಖಲೆಯ 27 ಕೋಟಿ ರೂ. ನೀಡಿ ಬಾಜಿ ಗೆದ್ದಿತ್ತು. ಈಗ ಈ ತಂಡದ ದುಬಾರಿ ಆಟಗಾರನ ಹೆಗಲಿಗೆ ನಾಯಕತ್ವದ ಪಟ್ಟವನ್ನು ನೀಡಲು ಮಾಲೀಕರು ಮುಂದಾಗಿದ್ದಾರೆ. ಈ ಮೂಲಕ ರಿಷಭ್ ಪಂತ್ ಮತ್ತೊಮ್ಮೆ ಐಪಿಎಲ್ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಎಲ್ಎಸ್ಜಿ ಮೆಗಾ ಹರಾಜಿನ ಅಂಗಳಕ್ಕೆ ಬಿಟ್ಟಿತ್ತು. ಹೀಗಾಗಿ ಇವರ ಸ್ಥಾನವನ್ನು ತುಂಬ ಬಲ್ಲ ಕ್ಷಮತೆ ಹೊಂದಿರುವ ಪ್ಲೇಯರ್ ಹುಡುಕಾಟವನ್ನು ಲಕ್ನೋ ಹರಾಜಿನಲ್ಲಿ ನಡೆಸಿತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಡಲಾಗಿದ್ದ ರಿಷಭ್ ಪಂತ್ ಅವರ ಹೆಸರು ಕೇಳುತ್ತಿದ್ದ, ಎಲ್ಎಸ್ಜಿ ಮಾಲೀಕರು ಹಣದ ಹೊಳೆಯನ್ನು ಹರಿಸಲು ಆರಂಭಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ದುಬಾರಿ ಆಟಗಾರರ ಪಟ್ಟಿಗೆ ರಿಷಭ್ ಎಂಟ್ರಿ ಪಡೆದರು.
ರಾಹುಲ್ ಹಾಗೂ ಎಲ್ಎಸ್ಜಿ ಮಾಲೀಕ ಸಂಜಯ್ ಗೋಯೆಂಕಾ ನಡುವೆ ಲೀಗ್ ಹಂತದ ಕೊನೆಯ ಪಂದ್ಯದ ಬಳಿಕ ಮಾತಿನ ಚಕಮಕಿ ನಡೆದಿತ್ತು. ಇದು ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ, ಇವರನ್ನು ತಂಡ ಕೈ ಬಿಡುತ್ತದೆ ಎಂದು ಹೇಳಲಾಗುತ್ತಿತ್ತು. ಅಂತೆಯೇ ಅವರನ್ನು ಎಲ್ಎಸ್ಜಿ ತಂಡ ಉಳಿಸಿಕೊಳ್ಳಲಿಲ್ಲ.

ರಿಷಭ್ ಪಂತ್ ಅವರಿಗೆ ನಾಯಕತ್ವ ನೀಡಲಾಗುತ್ತದೆ ಎಂಬ ಮಾತುಗಳು ಓಡಾಡುತ್ತಿವ ಮಧ್ಯದಲ್ಲಿ, ಎಲ್ಎಸ್ಜಿ ಮ್ಯಾನೇಜ್ಮೆಂಟ್ ನಮ್ಮ ತಂಡದಲ್ಲಿ ನಾಯಕತ್ವದ ಗುಣಗಳನ್ನು ಹೊಂದಿರುವ ಸಾಕಷ್ಟು ಆಟಗಾರರು ಇದ್ದಾರೆ. ನಾವು ಯೋಚನೆ ಮಾಡುತ್ತಿದ್ದೇವೆ ಎಂದು ತಿಳಿಸಿತ್ತು. ರಿಷಭ್ ಪಂತ್ ಅವರಿಗೆ ನಾಯಕ ಪಟ್ಟ ನೀಡಿದ ಬೆನ್ನಲ್ಲೆ, ವೆಸ್ಟ್ ಇಂಡೀಸ್ನ ಸ್ಟಾರ್ ಆಟಗಾರ ನಿಕೋಲಸ್ ಪೂರನ್ಗೆ ನಿರಾಸೆ ಆಗಿದೆ.
ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ಏಳು ತಂಡಗಳ ನಾಯಕರನ್ನು ನಿರ್ಧರಿಸಿವೆ. ಲಕ್ನೋ ಸೂಪರ್ ಜೈಂಟ್ಸ್ ರಿಷಭ್ ಪಂತ್, ಚೆನ್ನೈ ಸೂಪರ್ ಕಿಂಗ್ಸ್ ರಿತುರಾಜ್ ಗಾಯಕ್ವಾಡ್, ಗುಜರಾತ್ ಟೈಟಾನ್ಸ್ ಶುಭ್ಮನ್ ಗಿಲ್, ರಾಜಸ್ಥಾನ್ ರಾಯಲ್ಸ್ ಸಂಜು ಸ್ಯಾಮ್ಸನ್, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ, ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪ್ಯಾಟ್ ಕಮ್ಮಿನ್ಸ್ ಪಟ್ಟವನ್ನು ಅಲಂಕರಿಸಿದ್ದಾರೆ. ಆರ್ಸಿಬಿ, ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಾಯಕರನ್ನು ಇನ್ನೂ ನಾಯಕನನ್ನು ಘೋಷಿಸಿಲ್ಲ.