ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್-ವಿಕೆಟ್ಕೀಪರ್ ರಿಷಭ್ ಪಂತ್ ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ 2025 ತಂಡದ ಭಾಗವಾಗಿದ್ದಾರೆ. ಆದರೆ, ಇಲ್ಲಿವರೆಗೆ ರಿಷಬ್ ಪಂತ್ ಅವರಿಗೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿಲ್ಲ. ಇದರಿಂದ ಅವರ ಅಭಿಮಾನಿಗಳು ಸ್ವಲ್ಪ ಬೇಸರಗೊಂಡಿದ್ದಾರೆ. ಆದರೆ, ಇದರ ಮಧ್ಯೆ ರಿಷಬ್ ಪಂತ್ ಅವರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ. ರಿಷಬ್ ಪಂತ್ ಅವರು ಪ್ರತಿಷ್ಠಿತ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರ ವರ್ಷದ ವಿಶ್ವ ಕಮ್ಬ್ಯಾಕ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.
ರಿಷಬ್ ಪಂತ್ ಜೊತೆಗೆ ಜಿಮ್ನಾಸ್ಟ್ ರೆಬೆಕಾ, ಆಂಡ್ರೇಡ್ ಕೂಡ ಈ ಪಟ್ಟಿಯಲ್ಲಿದ್ದಾರೆ. ರೆಬೆಕಾ ಅವರು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಇದಕ್ಕೂ ಮುನ್ನ ಅವರು ಕ್ರೂಸಿಯೇಟ್ ಲಿಗಮೆಂಡ್ ಗಾಯಗಳೊಂದಿಗೆ ಹೋರಾಡಿದ್ದರು. ಈ ಇಬ್ಬರಲ್ಲದೆ, ಸ್ಕೀ ರೇಸರ್ಗಳಾದ ಲಾರಾ ಗಟ್-ಬೆಹ್ರಾಮಿ, ಕೇಲೆಬ್ ಡ್ರೆಸ್ಸೆಲ್, ಮಾರ್ಕ್ ಮಾರ್ಕ್ವೆಜ್ ಮತ್ತು ಈಜುಪಟು ಅರಿಯಾನೆ ಟಿಟ್ಮಸ್ ಅವರನ್ನು ಕೂಡ ಈ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 21 ರಂದು ಮ್ಯಾಡ್ರಿಡ್ನಲ್ಲಿ ನಡೆಯಲಿದೆ. ಇಲ್ಲಿವರೆಗೆ ಭಾತರದಿಂದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮಾತ್ರ ಪ್ರತಿಷ್ಠಿತ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತೆಂಡೂಲ್ಕರ್ 2020ರಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಈ ಪ್ರಶಸ್ತಗೆ ನಾಮನಿರ್ದೇಶನಗೊಂಡಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆ ಪಂತ್ ಪಾತ್ರರಾಗಿದ್ದಾರೆ.
ರಿಷಭ್ ಪಂತ್ ಡಿಸೆಂಬರ್ 30, 2022 ರಂದು ದೆಹಲಿಯಿಂದ ತಮ್ಮ ಹುಟ್ಟೂರು ರೂರ್ಕಿಗೆ ಹೋಗುತ್ತಿದ್ದಾಗ ಕಾರು ಅಪಘಾತಕ್ಕೀಡಾದರು. ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆಯ ನಂತರ ಪಂತ್ ಅವರನ್ನು ಮುಂಬೈಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಬಿಸಿಸಿಐನ ತಜ್ಞ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಲ ಮೊಣಕಾಲಿನ ಮೂರು ಅಸ್ಥಿರಜ್ಜುಗಳ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಪುನರ್ವಸತಿಯನ್ನು ಪೂರ್ಣಗೊಳಿಸಿದರು.
ರಿಷಭ್ ಪಂತ್ 629 ತಂಡಕ್ಕೆ ಮರಳಿದ ನಂತರ ಉತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡರು. ಅವರು ಒಂದರ ನಂತರ ಒಂದರಂತೆ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದರು. 2024 ರ ಟಿ20 ವಿಶ್ವಕಪ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂತ್ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಪ್ರಸ್ತುತ ಅವರನ್ನು 2025 ರ ಚಾಂಪಿಯನ್ಸ್ ಟ್ರೋಫಿಯ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಪಂತ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.
ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಪರ ರಿಷಬ್ ಪಂತ್ ಆಡಲಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ಲಕ್ನೋ ಫ್ರಾಂಚೈಸಿ 27 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಖರೀದಿಸಿದೆ. ಅಲ್ಲದೆ, ತಂಡದ ನಾಯಕನ್ನಾಗಿ ಪಂತ್ ಅವರನ್ನು ನೇಮಕ ಮಾಡಲಾಗಿದೆ.