ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಗೆ ಬಿಸಿಸಿಐ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ನೀಡಿದಷ್ಟೇ ಮಹತ್ವವನ್ನು ದೇಶೀಯ ಟೂರ್ನಿಗಳಿಗೂ ನೀಡುವಂತೆ ಸೂಚಿಸಿದೆ. ಈ ಬೆನ್ನಲ್ಲೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ರಣಜಿ ಟ್ರೋಫಿ ಆಡಲು ತಯಾರಿ ನಡೆಸಿದ್ದಾರೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ರಣಜಿ ಆಡಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಸಹ ದೇಶೀಯ ಟೂರ್ನಿಯಲ್ಲಿ ದೆಹಲಿ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.
ರಣಜಿ ಟ್ರೋಫಿಯ ಪಂದ್ಯಗಳು ಜನವರಿ 23 ರಿಂದ ಆರಂಭವಾಗಲಿವೆ. ಈ ಟೂರ್ನಿಗೆ ತಾನು ಲಭ್ಯವಿರುವುದಾಗಿ ರಿಷಭ್ ಪಂತ್ ಘೋಷಿಸಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ದೇಶೀಯ ಟೂರ್ನಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸುವ ಪ್ರಸ್ತಾಪವನ್ನು ರಿಷಭ್ ಪಂತ್ ತಿರಸ್ಕರಿಸಿದ್ದಾರೆ. ಯುವ ಆಟಗಾರ ಆಯುಷ್ ಬದೋನಿ ಅವರನ್ನು ನಾಯಕನಾಗಿ ಉಳಿಸಿಕೊಳ್ಳಬೇಕು ಎಂದು ಪಂತ್ ಸ್ವತಃ ಹೇಳಿದ್ದಾರೆ. ಹಿರಿಯ ಆಟಗಾರನೊಬ್ಬ ಕಿರಿಯ ಆಟಗಾರನನ್ನು ನಾಯಕನನ್ನಾಗಿ ಉಳಿಯಲು ಬೆಂಬಲಿಸಿರುವುದು ಶ್ಲಾಘನೀಯವಾಗಿದೆ.

ರಿಷಭ್ ಪಂತ್ ಕಳೆದ ಏಳು ವರ್ಷಗಳಿಂದ ದೇಶೀಯ ಟೂರ್ನಿಗಳಲ್ಲಿ ಆಡಿಲ್ಲ. ಈಗ ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಆಡುವುದನ್ನು ನೋಡಬಹುದಾಗಿದೆ. ವರದಿಗಳ ಪ್ರಕಾರ, ಪಂತ್ ದೆಹಲಿ ತಂಡದ ನಿಯಮಿತ ಭಾಗವಾಗಿಲ್ಲ. ಹೀಗಾಗಿ ರಣಜಿ ಟ್ರೋಫಿ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಯುವ ಆಟಗಾರ ಆಯುಷ್ ಬದೋನಿ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ತಮ್ಮ ವೃತ್ತಿಜೀವನದಲ್ಲಿ 5 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇಷ್ಟೇ ಅಲ್ಲ ಪಂತ್ ಈಗಾಗಲೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. ಹೀಗಾಗಿ ಇವರ ಅನುಭವ ಲಾಭ ಪಡೆಯಲು ದೆಹಲಿ ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಪಂತ್ ಈ ನಿರ್ಧಾರವನ್ನು ಪಂತ್ ತಿರಸ್ಕರಿಸಿದ್ದಾರೆ.
ರಣಜಿ ಟ್ರೋಫಿ "ಡಿ" ಗುಂಪಿನ ಪಂದ್ಯದಲ್ಲಿ ಸ್ಥಾನ ಪಡೆದಿರುವ ದೆಹಲಿ ತಂಡ ಆಡಿದ 5 ಪಂದ್ಯಗಳಲ್ಲಿ 1 ಜಯ ಸಾಧಿಸಿದ್ದು, 1 ಸೋಲು, 3 ಡ್ರಾ ಸಾಧಿಸಿದೆ. ಅಲ್ಲದೆ 14 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿ ಮುಂದಿನ ಪಂದ್ಯವನ್ನು ಜ.23ರಂದು ಸೌರಾಷ್ಟ್ರ ವಿರುದ್ಧ ಹಾಗೂ ಜ.30 ರಂದು ರೈಲ್ವೇಸ್ ವಿರುದ್ಧ ಪಂದ್ಯವನ್ನು ಆಡಲಿದೆ.
ರಿಷಭ್ ಪಂತ್ ಇದುವರೆಗೆ ರಣಜಿ ಟ್ರೋಫಿಯಲ್ಲಿ ದೆಹಲಿ ಪರ 15 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಬ್ಯಾಟ್ ಮಾಡಿರುವ 21 ಇನ್ನಿಂಗ್ಸ್ಗಳಲ್ಲಿ ಪಂತ್ 1,287 ರನ್ ಗಳಿಸಿದ್ದಾರೆ. ರಿಷಭ್ 61.29 ಸರಾಸರಿ ರನ್ ಗಳಿಸಿದ್ದು, ಮತ್ತು ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕ ಸಿಡಿಸಿದ್ದಾರೆ.