ಮೈದಾನಕ್ಕಿಳಿದರೆ ಯಾರಿಗೂ ಬೇಸರವಾಗದ ಆಟಗಾರ ರಿಷಬ್ ಪಂತ್. ಕೆಲವೊಮ್ಮೆ ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಇನ್ನು ಕೆಲವೊಮ್ಮೆ ತಮ್ಮ ತಮಾಷೆಯ ವರ್ತನೆಯಿಂದ ಮೈದಾನದಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಆಟವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಸಾಮರ್ಥ್ಯವೂ ಅವರಿಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಆದರೆ ಇದಕ್ಕೂ ಮುನ್ನ ಪಂತ್ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಪಂತ್ ಕಿವೀಸ್ ಪಾಳಯ ಸೇರಿ ಸಖತ್ ಸುದ್ದಿಯಾಗಿದ್ದಾರೆ. ಪಂತ್ ಈ ಕೃತ್ಯ ಎಸಗಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ಅವರು ಈ ಕೃತ್ಯದಿಂದಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

ರಿಷಬ್ ಪಂತ್ ಕಳೆದ ತಿಂಗಳು ದುಲೀಪ್ ಟ್ರೋಫಿಯಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅಭಿಮನ್ಯು ಈಶ್ವರನ್ ನಾಯಕತ್ವದಲ್ಲಿ ಭಾರತ ಬಿ ತಂಡದ ಭಾಗವಾಗಿದ್ದರು. ಈ ವೇಳೆ ಶುಭಮನ್ ಗಿಲ್ ನಾಯಕತ್ವದ ಭಾರತ ಎ ಮತ್ತು ಭಾರತ ಬಿ ನಡುವಿನ ಪಂದ್ಯದ ನಾಲ್ಕನೇ ದಿನದ ರಿಷಬ್ ಪಂತ್ ಭಾರೀ ಸುದ್ದಿಯಾಗಿದ್ದರು. ನಾಲ್ಕನೇ ದಿನದ ಬ್ಯಾಟಿಂಗ್ಗೂ ಮುನ್ನ ಶುಭಮನ್ ಗಿಲ್ ತಮ್ಮ ತಂಡವನ್ನು ಮೈದಾನದಲ್ಲಿ ಭೇಟಿ ಮಾಡಿ ಚರ್ಚಿಸಿದ್ದರು.
ಈ ಸಂದರ್ಭದಲ್ಲಿ ರಿಷಬ್ ಪಂತ್ ರಹಸ್ಯವಾಗಿ ಗಿಲ್ ಪಡೆಯನ್ನು ಸೇರಿಕೊಂಡು ಅಲ್ಲಿನ ಅವರ ಸಂಪೂರ್ಣ ಯೋಜನೆಯನ್ನು ಕೇಳಿಸಿಕೊಂಡಿದ್ದರು. ಇದಾದ ನಂತರ ಅವರು ನಗುತ್ತಾ ತಮ್ಮ ತಂಡದ ಕಡೆ ಹೋಗಿದ್ದರು. ಪಂತ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡಿತ್ತು. ಜೊತೆಗೆ ಪಂತ್ ಚಾಣಾಕ್ಷತನದ ಬಗ್ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಕಿವೀಸ್ ಪಡೆಗೆ ರಿಷಬ್ ಪಂತ್ ಶಾಕ್ ನೀಡಿದ್ದಾರೆ. ಡ್ರಿಂಕ್ಸ್ ಬ್ರೇಕ್ನಲ್ಲಿ ರಿಷಬ್ ಪಂತ್ ಅವರು ಕಿವೀಸ್ ಪಡೆಯ ಬ್ಯಾಟರ್ಗಳೊಂದಿಗೆ ನೀರು ಕುಡಿಯುತ್ತಿರುವ ಫೋಟೋ ವೈರಲ್ ಆಗಿದೆ. ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಜೊತೆಗೆ ಪಂತ್ ಇರುವುದು ಫೋಟೋದಲ್ಲಿದೆ. ಅಲ್ಲದೆ ಫೋಟೋದ ಮತ್ತೊಂದು ಭಾಗದಲ್ಲಿ ಭಾರತ ತಂಡದ ಇತರ ಆಟಗಾರರು ಇದ್ದಾರೆ. ಆದರೆ ಪಂತ್ ಕಿವೀಸ್ ಆಟಗಾರರೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ. ಈ ಮೂಲಕ ಒಬ್ಬ ಆಟಗಾರ ಪಂದ್ಯವನ್ನು ಗೆಲ್ಲಲು ಹೀಗೂ ತನ್ನ ಬುದ್ದಿವಂತಿಕೆಯನ್ನು ಖರ್ಚು ಮಾಡಬಹುದು ಎಂಬ ಸಣ್ಣ ಉದಾಹರಣೆಯನ್ನು ರಿಷಬ್ ಪಂತ್ ತೋರಿಸಿಕೊಟ್ಟಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದ ಮಧ್ಯೆದಲ್ಲೇ ರಿಷಬ್ ಪಂತ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ಪಂದ್ಯದ ಮಧ್ಯದಲ್ಲಿಯೇ ಮೈದಾನ ತೊರೆದಿದ್ದಾರೆ. 37ನೇ ಓವರ್ನ ಕೊನೆಯ ಎಸೆತದಲ್ಲಿ, ರವೀಂದ್ರ ಜಡೇಜಾ ಎಸೆದ ಚೆಂಡು ನೇರವಾಗಿ ಪಂತ್ ಮೊಣಕಾಲಿಗೆ ಬಡಿದಿತ್ತು. ಚೆಂಡು ಬಡಿದ ರಭಸಕ್ಕೆ ಗಾಯಗೊಂಡು ಪಂತ್ ನೇರವಾಗಿ ನಿಲ್ಲಲ್ಲು ಸಾಧ್ಯವಾಗಲಿಲ್ಲ. ಹೀಗಾಗಿ ಮೈದಾನದಿಂದ ಅವರು ಹೊರ ನಡೆದಿದ್ದಾರೆ. ಪಂತ್ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.