ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ರಿಷಭ್ ಪಂತ್ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಆದರೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದೇ? ಅಥವಾ ಇಲ್ಲವೇ? ಎಂಬುದು ಖಚಿತವಾಗಿಲ್ಲ. ಇದಕ್ಕೆ ದೊಡ್ಡ ಕಾರಣ ಕೆಎಲ್ ರಾಹುಲ್.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ರಿಷಭ್ ಪಂತ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ವಿಕೆಟ್ಕೀಪರ್-ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಂತ್ ಅವರನ್ನು ಆಡುವ ಹನ್ನೊಂದರ ಬಳಹದಲ್ಲಿ ಕಾಣುವುದು ಅನುಮಾನ ಎನ್ನಲಾಗುತ್ತಿದೆ. ಆದರೂ ಅವರನ್ನು ಹೆಚ್ಚುವರಿ ಬ್ಯಾಟರ್ ಆಗಿ ಕಣಕ್ಕಿಳಿಸಲು ಇಲ್ಲಿದೆ ಮೂರು ಕಾರಣಗಳು.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ರಿಷಭ್ ಪಂತ್ ಅವರನ್ನು ಹೆಚ್ಚುವರಿ ಬ್ಯಾಟರ್ ಆಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ಒಂದು ಕಾರಣವೆಂದರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೂರನೇ ವೇಗದ ಬೌಲರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗೆ ಇಬ್ಬರು ಅನುಭವಿ ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ಗಳು ಕಣಕ್ಕಿಳಿಯಲಿದ್ದಾರೆ.
ಇಂತಹ ಸಂದರ್ಭದಲ್ಲಿ ರಿಷಭ್ ಪಂತ್ ಅವರು ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರೊಂದಿಗೆ ಆಡಬಹುದು. ಭಾರತ ತಂಡಕ್ಕೆ ಹೆಚ್ಚುವರಿಗೆ ಬೌಲಿಂಗ್ ಆಯ್ಕೆಗಳು ಬೇಕಾದರೆ ಕೊಹ್ಲಿ, ಗಿಲ್ ಮತ್ತು ಪಂತ್ ಸ್ವತಃ ಬೌಲಿಂಗ್ ಮಾಡಲು ಸಮರ್ಥರಾಗಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಆನೇಕ ಪ್ರಮುಖ ಬ್ಯಾಟರ್ಗಳು ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಕೆಎಲ್ ರಾಹುಲ್ ಪ್ರದರ್ಶನವೂ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಿಲ್ಲ. ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಂಗ್ ಕಳಪೆ ಪ್ರದರ್ಶನ ನೀಡಿತ್ತು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ರಿಷಭ್ ಪಂತ್ ಅವರನ್ನು ಹೆಚ್ಚುವರಿ ಬ್ಯಾಟರ್ ಆಗಿ ಬಳಸಿಕೊಳ್ಳಲಿದೆ.
ರಿಷಭ್ ಪಂತ್ ಹಲವು ಸಂದರ್ಭಗಳಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆಕ್ರಮಣಕಾರಿಯಾ ಬ್ಯಾಟಿಂಗ್ ಮಾಡುವ ರಿಷಭ್ ಪಂತ್ ಪಂದ್ಯದ ಗತಿಯನ್ನೆ ಬದಲಾಯಿಸಬಲ್ಲರು. ಈ ಕಾರಣದಿಂದಾಗಿ ಟೀಮ್ ಇಂಡಿಯಾ ರಿಷಭ್ ಪಂತ್ ಅವರನ್ನು ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ವೇಗವಾಗಿ ರನ್ ಗಳಿಸುವ ಅಗತ್ಯವಿದ್ದಾಗ ಅವರಿಗೆ ಟಾಪ್ ಆರ್ಡರ್ನಲ್ಲಿ ಆಡಸಬಹುದು. ವಿಕೆಟ್ಗಳು ಬಿದ್ದಾಗ ತಂಡಕ್ಕೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡಲು ಸಹಾ ಪಂತ್ ನೆರವಾಗಬಲ್ಲರು. ಇಂತಹ ಸಂದರ್ಭದಲ್ಲಿ ಪಂತ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಬಹುದು.