
ನವದೆಹಲಿ, ಸೆಪ್ಟೆಂಬರ್ 11: ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಕ್ರಿಕೆಟ್ ಅಭಿಮಾನಿಗಳು ತನ್ನನ್ನು ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಸುತ್ತಿರುವುದು ಸರಿ ಕಾಣುತ್ತಿಲ್ಲ. ಬದಲಿಗೆ ತಾನು ತನ್ನದೇ ಶೈಲಿಯಲ್ಲಿ ಆಟವನ್ನು ಸುಧಾರಿಸುವತ್ತ ಅವರ ಗಮನವಿದೆ.
ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಆಟದಲ್ಲಿ ಸುಧಾರಿಸುವತ್ತ ಪಂತ್ ಗಮನ ಹರಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ಆಯ್ಕೆ ಸಮಿತಿಗೆ ಪಂತ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಕಾಣಿಸುತ್ತಿದ್ದಾರೆ. ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಯಲ್ಲೂ ಧೋನಿ ಅನುಪಸ್ಥಿತಿಯಲ್ಲಿ ರಿಷಬ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರಲಿದ್ದಾರೆ.
ಧೋನಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಂತ್, 'ಒಟ್ಟಿನಲ್ಲಿ ನಂಗೆ ಧೋನಿ ಅಂದ್ರೆ ಇಷ್ಟ. ನಾನೀಗ ಆಟದತ್ತ ಗಮನ ಹರಿಸುತ್ತಿದ್ದೇನೆ. ಇದಕ್ಕಾಗಿ ಒಂದು ಸಮಯದಲ್ಲಿ ಒಂದು ಪಂದ್ಯವನ್ನು ತೆಗೆದುಕೊಳ್ಳುತ್ತಿದ್ದೇನೆ. ಪ್ರತಿದಿನವೂ ಆಟ ಸುಧಾರಿಸುವತ್ತ ಪ್ರಯತ್ನಿಸುತ್ತಿದ್ದೇನೆ,' ಎಂದರು.
ದೇಶಕ್ಕಾಗಿ ಹೆಚ್ಚು ಪಂದ್ಯಗಳನ್ನು ಗೆಲ್ಲಲು ಶ್ರಮಿಸುತ್ತಿರುವುದಾಗಿಯೂ ಪಂತ್ ಹೇಳಿಕೊಂಡಿದ್ದಾರೆ. 'ವೆಸ್ಟ್ ಇಂಡೀಸ್ನಲ್ಲಿ ತಂಡ ನಿಜಕ್ಕೂ ಉತ್ತಮ ಆಟವನ್ನಾಡಿತು. ನನ್ನ ಆಟವನ್ನು ಸುಧಾರಿಸಿಕೊಳ್ಳುವತ್ತ ನಾನು ಗಮನ ಹರಿಸುತ್ತಿರುವ ಜೊತೆ ಜೊತೆಗೆ ಟೀಮ್ ಇಂಡಿಯಾಕ್ಕೆ ಹೆಚ್ಚು ಪಂದ್ಯಗಳನ್ನು ಗೆಲ್ಲಲು ನನ್ನಿಂದಾದ ನೆರವು ನೀಡುತ್ತಿದ್ದೇನೆ,' ಎಂದು ಪಂತ್ ತಿಳಿಸಿದರು.
ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಂತ್, 'ನಾವು ಉತ್ತಮ ಅಭ್ಯಾಸ ನಡೆಸಿದ್ದೇವೆ. ನಮ್ಮ ಮನಸ್ಥಿತಿ ಉತ್ತಮವಾಗಿದೆ. ಆ ಸರಣಿಯಲ್ಲಿ ಅತ್ಯುತ್ತಮ ಆಟ ಆಡಬಯಸಿದ್ದೇವೆ,' ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.