
ಭೀಕರ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವ ಕ್ರಿಕೆಟಿಗ ರಿಷಭ್ ಪಂತ್ ಟ್ವಿಟ್ಟರ್ನಲ್ಲಿ ಮತ್ತೆರಡು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಾಕರ್ ಸಹಾಯದಿಂದ ನಡೆಯಲು ಆರಂಭಿಸಿರುವ ಎರಡು ಫೋಟೋಗಳನ್ನು ರಿಷಭ್ ಪಂತ್ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸ್ಪೂರ್ತಿದಾಯಕ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ ಟೀಮ್ ಇಂಡಿಯಾದ ಯುವ ಕ್ರಿಕೆಟಿಗ.
ಡಿಸೆಂಬರ್ 30ರಂದು ಮುಂಜಾನೆ ರಿಷಭ್ ಪಂತ್ ತಮ್ಮ ಮನೆಯತ್ತ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಮುಂಜಾನೆ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದ ತೀವ್ರತೆಗೆ ಪಂತ್ ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಆದರೆ ಅದೃಷ್ಟವಶಾತ್ ಸ್ಥಳೀಯರ ಸಹಾಯದಿಂದ ಪಂತ್ ಕಾರಿನಿಂದ ಹೊರಬರಲು ಸಾಧ್ಯವಾದ ಕಾರಣ ದೊಡ್ಡ ಅಸಾಹುತದಿಂದ ಪಾರಾಗಿದ್ದರು.
ಅಪಘಾತದ ಬಳಿಕ ಮೊದಲಿಗೆ ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಭ್ ಪಂತ್ ಅವರನ್ನು ಬಳಿಕ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಒಂದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಭಾರತದ ಯುವ ಆಟಗಾರನ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡಿದೆ. ಬಲ ಮೊಣಕಾಲಿನ ಲಿಗಮೆಂಟ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು ಸಾಕಷ್ಟು ಚೇತರಿಕೆ ಕಂಡುಬಂದಿದೆ.
ಒಂದು ತಿಂಗಳ ಅಂತರದಲ್ಲಿ ಪಂತ್ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಮೊಣಕಾಲಿಗೆ ಸಂಬಂದಿಸಿದಂತೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ. ಡಾ. ದಿನ್ಶಾ ಪರ್ಡಿವಾಲಾ ನೇತೃತ್ವದ ವೈದ್ಯದ ತಂಡ ಮೂರು ಗಂಟೆಗಳ ಮ್ಯಾರಥಾನ್ ಶಸ್ತ್ರಚಿಕಿತ್ಸೆಯಲ್ಲಿ ಪಂತ್ ಅವರ ಹಿಂಭಾಗದ ಕ್ರೂಸಿಯೇಟ್ ಅಸ್ಥಿರಜ್ಜು ಮತ್ತು ಮಧ್ಯದ ಕೊಲ್ಯಾಟರಲ್ ಅಸ್ಥಿರಜ್ಜುಗಳ ಶಸ್ತ್ರಿಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ ಒಂದು ತಿಂಗಳಲ್ಲಿ ಅವರ ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ.
ಇನ್ನು ರಿಷಭ್ ಪಂತ್ ಕಾರು ಅಪಘಾತವಾದ ತಕ್ಷಣವೇ ಅವರನ್ನು ಮೊದಲಿಗೆ ಹತ್ತಿರದಲ್ಲಿದ್ದ ಸಾಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜನವರಿ 4ರಂದು ರಿಷಭ್ ಪಂತ್ ಅವರನ್ನು ಏರ್ಲಿಫ್ಟ್ ಮಾಡಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ದಿನ್ಶಾ ಪರ್ಡಿವಾಲಾ ನೇತೃತ್ವದ ತಂಡ ಪಂತ್ ಆರೋಗ್ಯದ ಮೇಲೆ ನಿಗಾವಹಿಸಿದೆ.