
ಅಹ್ಮದಾಬಾದ್: ರಿಷಭ್ ಪಂತ್ ಮೈದಾನಕ್ಕಿಳಿದ್ದಾರೆಂದರೆ ಅಲ್ಲಿ ಮನರಂಜನೆಗೇನೂ ಕಮ್ಮಿಯಿಲ್ಲ. ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲೂ ಪಂತ್ ಪ್ಲೇಯಿಂಗ್ XIನಲ್ಲಿದ್ದಾರೆ. ವಿಕೆಟ್ ಕೀಪಿಂಗ್ ಮಾಡುವ ಪಂತ್ ಸ್ಟಂಪ್ ಹಿಂದೆ ಒಟಗುಟ್ಟುತ್ತಾ ಬಿಟ್ಟೀ ಮನರಂಜನೆಯೂ ನೀಡುತ್ತಿರುತ್ತಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ನಲ್ಲಿ ರಿಷಭ್ ಪಂತ್, ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಝ್ಯಾಕ್ ಕ್ರಾಲೆ ಅವರ ಔಟ್ಗೆ ಕಾರಣರಾಗಿದ್ದರೆ. ಬ್ಯಾಟಿಂಗ್ ಮಾಡುತ್ತಿದ್ದ ಕ್ರಾಲೆಯನ್ನು ಉರಿಸಿರುವ ಪಂತ್ ಅವರ ವಿಕೆಟ್ ಉರುಳುವಂತೆ ನೋಡಿಕೊಂಡಿದ್ದಾರೆ.
ಘಟನೆ ನಡೆದಿರೋದು 7ನೇ ಓವರ್ನಲ್ಲಿ. ಓವರ್ ಎಸೆಯಲು ಅಕ್ಸರ್ ಪಟೇಲ್ ಬಂದಿದ್ದರು. ಆಗ ಕೀಪಿಂಗ್ ಮಾಡುತ್ತಿದ್ದ ಪಂತ್ ಅಕ್ಸರ್ ಅವರನ್ನುದ್ದೇಶಿಸಿ, 'ಯಾರೋ ಒಬ್ಬರು ಸಿಟ್ಟುಗೊಳ್ಳುತ್ತಿದ್ದಾರೆ. ಯಾರೋ ಒಬ್ಬರು ಸಿಟ್ಟುಗೊಳ್ಳುತ್ತಿದ್ದಾರೆ,' ಎಂದು ಕ್ರಾಲೆಗೆ ಕೇಳಿಸುವಂತೆ ಹೇಳಿದರು.
ಪಂತ್ ಮಾತು ಕೇಳಿದ ಕ್ರಾಲೆ ಇನ್ನಷ್ಟು ಸಿಟ್ಟುಗೊಂಡು ಮುಂದಿನ ಎಸೆತಕ್ಕೆ ಸಿಕ್ಸ್ ಬಾರಿಸಲು ಮುಂದಾದರು. ಆದರೆ ಆಗಸಕ್ಕೆ ಚಿಮ್ಮಿದ ಚೆಂಡು ಸೀದಾ ಬಂದು ಮೊಹಮ್ಮದ್ ಸಿರಾಜ್ ಅವರ ಕೈ ಸೇರಿತು. ಕ್ರಾಲೆ 9 ರನ್ನಿಗೆ ಪೆವಿಲಿಯನ್ಗೆ ನಿರ್ಗಮಿಸಬೇಕಾಯ್ತು. ಇದೇ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮಧ್ಯೆಯೂ ಮಾತಿನ ಚಕಮಕಿ ನಡೆದಿತ್ತು.