
ಡಿಸೆಂಬರ್ 31ರಂದು ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
"ಶುಕ್ರವಾರ ರಿಷಬ್ ಪಂತ್ ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಸದ್ಯ ವೈದ್ಯರ ತಪಾಸಣೆಯಲ್ಲಿದ್ದಾರೆ. ಮುಂದಿನ ಬೆಳವಣಿಗೆ ಮತ್ತು ಪುನರ್ವಸತಿ ಬಗ್ಗೆ ಡಾ. ದಿನ್ಶಾ ಪರ್ದಿವಾಲಾ ಮತ್ತು ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ಔಷಧ ತಂಡವು ನಿರ್ಧಾರ ಮಾಡಲಿದ್ದಾರೆ" ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಮುಂಬೈನ ಅಂಧೇರಿಯ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ಆರ್ತ್ರೋಸ್ಕೊಪಿ ಸರ್ವಿಸ್ ನಿರ್ದೇಶಕ ಡಾ. ಪಾರ್ದಿವಾಲಾ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು.
ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂತ್ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಡೆದಾಡಲು ಸಾಧ್ಯವಾಗದ ಕಾರಣ ರಿಷಬ್ ಪಂತ್ರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಕರೆದೊಯ್ಯಲಾಯಿತು. ಮುಂಬೈ ಆಸ್ಪತ್ರೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ ಪಂತ್
ರಿಷಬ್ ಪಂತ್ ಮೊಣಕಾಲು ಮತ್ತು ಪಾದಕ್ಕೆ ಗಾಯಗಳಾಗಿರುವುದರಿಂದ ಅವರು ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಅವರನ್ನು ಹೆಚ್ಚುವರಿ ಶಸ್ತ್ರಚಿಕಿತ್ಸೆಗಾಗಿ ಲಂಡನ್ಗೆ ಕಳುಹಿಸಲು ಕೂಡ ಬಿಸಿಸಿಐ ಸಜ್ಜಾಗಿದೆ. ಮೊಣಕಾಲು ಮತ್ತು ಪಾದದ ಅಸ್ಥಿರಜ್ಜು ಗಾಯದಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ.
ಈಗ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಲಂಡನ್ಗೆ ಚಿಕಿತ್ಸೆ ಕೊಡುವ ಯೋಚನೆಯನ್ನು ಬಿಸಿಸಿಐ ಕೈಬಿಟ್ಟಿರುವ ಸಾಧ್ಯತೆ ಇದೆ. ರಿಷಬ್ ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಆಗಲಿ ಆಸ್ಪತ್ರೆಯಾಗಲಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಏಕದಿನ ವಿಶ್ವಕಪ್ಗೆ ಕೂಡ ಅಲಭ್ಯ
ರಿಷಬ್ ಪಂತ್ ಪಾದ ಮತ್ತು ಮೊಣಕಾಲಿನ ಅಸ್ಥಿರಜ್ಜು ಗಾಯ ಮಾಡಿಕೊಂಡಿರುವುದರಿಂದ ಅವರು ಚೇತರಿಸಿಕೊಳ್ಳಲು ಇನ್ನೂ 9 ತಿಂಗಳ ಸಮಯ ಬೇಕಾಗಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪಾದ ಮತ್ತು ಮೊಣಕಾಲಿಗಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ, ಸಂಪೂರ್ಣವಾಗಿ ಫಿಟ್ ಆಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಈ ಮೊದಲು ಅವರು ವಿಶ್ವಕಪ್ ವೇಳೆಗೆ ಫಿಟ್ ಆಗುತ್ತಾರೆ ಎನ್ನಲಾಗಿತ್ತು, ಆದರೆ ಸದ್ಯದ ಮಾಹಿತಿ ಪ್ರಕಾರ ಅವರು ಏಕದಿನ ವಿಶ್ವಕಪ್ನಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ.