2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಸಮೀಪಿಸುತ್ತಿದೆ. ಜೂನ್ 1ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ಆರಂಭವಾಗಲಿದ್ದು, ಒಟ್ಟು 20 ತಂಡಗಳು ಭಾಗವಹಿಸಲಿವೆ.
ಇದೇ ವೇಳೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೂ ಮುನ್ನ ತನ್ನ ಕೊನೆಯ ಟಿ20 ಸರಣಿಯಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು ತವರಿನಲ್ಲಿ ಎದುರಿಸುತ್ತಿದ್ದು, ಮೊದಲ ಪಂದ್ಯವನ್ನು ಗೆದ್ದು ಬೀಗಿದೆ.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಕಗ್ಗಂಟಾಗಿ ಪರಿಣಮಿಸಲಿದೆ. 15 ಸದಸ್ಯರ ತಂಡಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ತಟ್ಟಿದೆ. ಕ್ರಿಕೆಟ್ನ ಚುಟುಕು ಸ್ವರೂಪದಲ್ಲಿ ಬಹುತೇಕ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.

ಅಲ್ಲದೆ, ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ಗೆ ಪುನರಾಗಮನ ಮಾಡಿದ್ದು, ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡ್ಮೂರು ಆಟಗಾರರು ಗಾಯಕ್ಕೆ ತುತ್ತಾಗಿದ್ದು, ಫಿಟ್ನೆಸ್ ಸಾಬೀತುಪಡಿಸಿದರೆ, ಭಾರತ ತಂಡ ಸೇರ್ಪಡೆಯಾಗಲು ಎದುರು ನೋಡುತ್ತಿದ್ದಾರೆ.
ಇನ್ನು 2024ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಸ್ಥಾನವನ್ನು ಯಾರು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮತ್ತೊಂದು ಗೊಂದಲ ನಿರ್ಮಾಣವಾಗಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್, ಇಶಾನ್ ಕಿಶನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಸ್ಪರ್ಧೆಯಲ್ಲಿದ್ದಾರೆ.

ಇದೀಗ ಜಿತೇಶ್ ಶರ್ಮಾ 2024ರ ಟಿ20 ವಿಶ್ವಕಪ್ಗಾಗಿ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಅನುಭವಿ ರಿಷಭ್ ಪಂತ್ ಅವರು ಫಿಟ್ ಆಗಿದ್ದರೆ ಮತ್ತು ಲಭ್ಯವಿದ್ದರೆ ನಾಯಕ ರೋಹಿತ್ ಶರ್ಮಾ ಅವರ ಮೊದಲ ಆಯ್ಕೆಯಾಗುತ್ತಾರೆ ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
2022ರ ಡಿಸೆಂಬರ್ 30ರಂದು ನಡೆದ ಭೀಕರ ಕಾರು ಅಪಘಾತದ ನಂತರ ರಿಷಭ್ ಪಂತ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇದೇ ವೇಳೆ, ಜನವರಿ 11ರಂದು ಮೊಹಾಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆರು ವಿಕೆಟ್ಗಳ ಗೆಲುವಿನಲ್ಲಿ ಜಿತೇಶ್ ಶರ್ಮಾ 20 ಎಸೆತಗಳಲ್ಲಿ 31 ರನ್ ಗಳಿಸಿದರು.
ಕಲರ್ಸ್ ಸಿನೆಪ್ಲೆಕ್ಸ್ನಲ್ಲಿ ನಡೆದ ಚರ್ಚೆಯ ವೇಳೆ, ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಜಿತೇಶ್ ಶರ್ಮಾ ಸ್ಥಾನದ ಬಗ್ಗೆ ಸುರೇಶ್ ರೈನಾ ಅವರನ್ನು ಕೇಳಲಾಯಿತು.
"ಸಂಜು ಸ್ಯಾಮ್ಸನ್ ಅವರು ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಬಹುದಾದ್ದರಿಂದ ಅವರು ಅಸ್ತ್ರವಾಗಬಲ್ಲರು ಎಂದು ನಾನು ಭಾವಿಸುತ್ತೇನೆ. ಜಿತೇಶ್ ಶರ್ಮಾ ಕೂಡ ಅಲ್ಲಿದ್ದಾನೆ. ಆದರೆ ರೋಹಿತ್ ಶರ್ಮಾ ಅವರ ಮೊದಲ ಆಯ್ಕೆ ರಿಷಭ್ ಪಂತ್ ಆಗಿರುತ್ತದೆ. ಐಪಿಎಲ್ನ ಎರಡು ತಿಂಗಳುಗಳಲ್ಲಿ ಆತ ಏನು ಮಾಡುತ್ತಾನೆ ಎಂಬುದರ ಆಧಾರದ ಮೇಲೆ ಪುನರಾಗಮನ ಮಾಡಲಿದ್ದಾನೆ," ಎಂದು ಸುರೇಶ್ ರೈನಾ ತಿಳಿಸಿದರು.
ಇನ್ನು ಸಂಜು ಸ್ಯಾಮ್ಸನ್ ಕೂಡ ವಿಕೆಟ್ಕೀಪರ್-ಬ್ಯಾಟರ್ ಸ್ಥಾನದ ರೇಸ್ನಲ್ಲಿ ಜಿತೇಶ್ ಶರ್ಮಾಗಿಂತ ಮುಂದಿರಬೇಕು ಎಂದು ಭಾರತದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಹೇಳಿದರು.
"ಇಶಾನ್ ಕಿಶನ್ ಮತ್ತೊಂದು ಆಯ್ಕೆಯಾಗಿದೆ. ಜಿತೇಶ್ ಶರ್ಮಾ ಅಸಾಧಾರಣವಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದಾಗ್ಯೂ, ಸಂಜು ಸ್ಯಾಮ್ಸನ್ ಪ್ರಭಾವವನ್ನು ತರುತ್ತಾರೆ. ಸಂಜು ದೊಡ್ಡ ಶಾಟ್ಗಳನ್ನು ಆಡುತ್ತಾರೆ ಮತ್ತು ನಾಯಕನಂತೆ ಯೋಚಿಸುತ್ತಾರೆ. ನನಗೆ ಅವನ ಮೇಲೆ ಅಪಾರ ವಿಶ್ವಾಸವಿದೆ," ಎಂದು ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅಭಿಪ್ರಾಯಪಟ್ಟರು.
ಭಾರತಕ್ಕೆ ಎಡಗೈ ವಿಕೆಟ್ ಕೀಪರ್-ಬ್ಯಾಟರ್ ಬೇಕಾದರೆ, ಮೊದಲ ಎರಡು ಆಯ್ಕೆಗಳಾಗಿ ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಅವರನ್ನು ಹೆಸರಿಸಿದರು. ಕಿಶನ್ ಮತ್ತು ಸ್ಯಾಮ್ಸನ್ ಕೂಡ ಎಕ್ಸ್-ಫ್ಯಾಕ್ಟರ್ಗಳು ಎಂದು ಒಪ್ಪಿಕೊಂಡ ಸುರೇಶ್ ರೈನಾ, ಟೀಮ್ ಇಂಡಿಯಾ ನಿರ್ದಿಷ್ಟವಾಗಿ ಯಾರನ್ನೂ ನೋಡದಿದ್ದರೂ ಸಹ ಮೊದಲ ಆಯ್ಕೆ ರಿಷಭ್ ಪಂತ್ ಆಗಿರುತ್ತದೆ ಎಂದು ಪುನರುಚ್ಚರಿಸಿದರು.