ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್, ತೆಂಡುಲ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ. ಈಗಾಗಲೇ ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆದಿದ್ದು ಆತಿಥೇಯ ಇಂಗ್ಲೆಂಡ್ 2-1ರಿಂದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ 22 ರನ್ಗಳಿಂದ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಸೋತು ನಿರಾಸೆ ಅನುಭವಿಸಿದೆ. ಈಗ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸಿದೆ. ಇದಕ್ಕೂ ಮೊದಲು ಅಭಿಮಾನಿಗಳ ಮನದಲ್ಲಿ ಎದ್ದಿರುವ ಪ್ರಶ್ನೆಗೆ ಟೀಮ್ ಮ್ಯಾನೇಜ್ಮೆಂಟ್ ಉತ್ತರ ನೀಡಿದೆ.
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯಿತು. ಈ ವೇಳೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರಿಷಭ್ ಪಂತ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಮೂರನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಧ್ರುವ್ ಜುರೇಲ್ ಕೀಪಿಂಗ್ ಮಾಡಿದರು. ಹೀಗಾಗಿ ಇವರು ಮುಂದಿನ ಟೆಸ್ಟ್ ಪಂದ್ಯ ಆಡ್ತಾರಾ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿವೆ. ಈ ಬಗ್ಗೆ ಈಗ ಟೀಮ್ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಹೇಳಿಕೆ ಹೊರಬಿದ್ದಿದೆ.

ನಾಲ್ಕನೇ ಟೆಸ್ಟ್ಗೆ ಟೀಮ್ ಇಂಡಿಯಾ ಅಭ್ಯಾಸ ನಡೆಸಿದೆ. ಈ ವೇಳೆ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಆಡುವ ಬಗ್ಗೆ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಮಾತನಾಡಿದ್ದಾರೆ. ಮೂರನೇ ಟೆಸ್ಟ್ ಪಂತ್ ನೋವಿನಿಂದ ಬ್ಯಾಟ್ ಮಾಡಿದರು. ಈ ವೇಳೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲಿಲ್ಲ. ಗುರುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಪಂತ್ ಭಾಗವಹಿಸಲಿಲ್ಲ. ಪಂತ್ ವಿಶ್ರಾಂತಿ ಪಡೆದರು. ಅವರಿಗೆ ನಾನು ಹೆಚ್ಚಿನ ವಿಶ್ರಾಂತಿ ನೀಡಲು ಬಯಸುತ್ತಿದ್ದೇವೆ. ಅವರು ಮುಂದಿನ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರಿಷಭ್ ಪಂತ್ ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 6 ಇನಿಂಗ್ಸ್ಗಳಲ್ಲಿ 70.83 ಸರಾಸರಿಯಲ್ಲಿ ಒಟ್ಟು 425 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಇವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.