ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿ ಸುಸ್ಥಿತಿಯಲ್ಲಿದೆ. ಆದರೆ ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರಿಗೆ ಗಾಯವಾಗಿದ್ದು, ಮ್ಯಾನೆಜ್ಮೆಂಟ್ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ರಿಷಭ್ ಪಂತ್ ಬ್ಯಾಟ್ ಮಾಡುತ್ತಾರಾ ಎಂಬ ಚಿಂತೆಗಳು ಆರಂಭವಾಗಿವೆ.
ರಿಷಭ್ ಪಂತ್ ನಾಲ್ಕನೇ ಟೆಸ್ಟ್ನಲ್ಲಿ ಅಮೋಘವಾಗಿ ಬ್ಯಾಟಿಂಗ್ ನಡೆಸಿದ್ದರು. ಇವರು ತಮ್ಮ ನೈಜ್ಯ ಆಟದ ಮೂಲಕ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದರು. ಇವರು 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದ್ದಾಗ, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಅವರ ಎಸೆತದಲ್ಲಿ ರಕ್ಷಣಾತ್ಮಕ ಆಟವನ್ನು ಆಡಲು ಮುಂದಾದರು. ಈ ವೇಳೆ ಇವರ ಬ್ಯಾಟ್ಗೆ ಬಡಿದ ಚೆಂಡು ನೇರವಾಗಿ ಇವರ ಪಾದಕ್ಕೆ ಬಡಿಯಿತು. ಪರಿಣಾಮ ರಿಷಭ್ ತೀವ್ರ ನೋವನ್ನು ಅನುಭವಿಸಿದರು.

ರಿಷಭ್ ಪಂತ್ ಅವರ ಯಾತನೆಯನ್ನು ಕಂಡು ತಂಡದ ಫಿಜಿಯೋ ಮೈದಾನಕ್ಕೆ ಬಂದರು. ಮೈದಾನದಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ, ಗಾಯ ಕಡಿಮೆ ಆಗಲಿಲ್ಲ. ಆಗ ರಿಷಭ್ ಪಂತ್ ಅವರ ಶೂವನ್ನು ತೆಗೆದು ನೋಡಿದಾಗ ಪಾದದಲ್ಲಿ ರಕ್ತ ಕಾಣಿಸಿಕೊಂಡಿತ್ತು. ಇದರಿಂದ ಪಂತ್ ತಮ್ಮ ಬಲಗಾಲನ್ನು ನೆಲ್ಕೆ ಊರಲು ಸಹ ಆಗಲಿಲ್ಲ. ಆಗ ಮೈದಾನಕ್ಕೆ ಬಂದಿದ್ದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇವರಿಗೆ ಸಹಾಯ ಮಾಡಿದರು. ಕಾಲು ಊರಲು ಬಾರದೇ ಇದ್ದಾಗ, ಮೈದಾನಕ್ಕೆ ಆಂಬ್ಯುಲೆನ್ಸ್ ಕರೆಸಲಾಯಿತು. ರಿಷಭ್ ಪಂತ್ ಅದರಲ್ಲಿ ಕೂತು ಮೈದಾನದಿಂದ ಹೊರ ನಡೆದರು.
ಭಾರತ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುವಾಗ ರಿಷಭ್ ಪಂತ್ 68ನೇ ಓವರ್ ಎದುರಿಸುತ್ತಿದ್ದರು. ಈ ಓವರ್ನ ನಾಲ್ಕನೇ ಎಸೆತದಲ್ಲಿ ರಿಷಭ್, ಕ್ರಿಸ್ ವೋಕ್ಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಬಾರಿಸಲು ಹೋದರು. ಬ್ಯಾಟಿಗ್ ಚೆಂಡಿನ ಸಂಪರ್ಕ ಸರಿಯಾಗಿ ಆಗಲಿಲ್ಲ. ಪರಿಣಾಮ ಬ್ಯಾಟ್ನ ಅಂಚಿಗೆ ಬಡಿದ ಚೆಂಡು ನೇರವಾಗಿ ಅವರ ಕಾಲಿಗೆ ಬಡಿಯಿತು. ಬಳಿಕ ಪಂತ್ ಬಹುಕಾಲ ನೋವಿನಿಂದ ಬಳಲುತ್ತಿದ್ದರು.
ರಿಷಭ್ ಪಂತ್ ಬಗ್ಗೆ ಬಿಸಿಸಿಐ ಅಪ್ಡೇಟ್ ನೀಡಿದೆ. ಪಂತ್ ಗಾಯಕ್ಕೆ ತುತ್ತಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಬ್ಯಾಟ್ ಮಾಡುವಾಗ ಅವರ ಕಾಲಿಗೆ ಗಾಯವಾಗಿದೆ. ರಿಷಭ್ ಸ್ಕ್ಯಾನ್ಗೆ ಒಳಪಟ್ಟಿದ್ದಾರೆ. ಸದ್ಯ ಇವರು ಬಿಸಿಸಿಐ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.