ಜುಲೈ 18, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಜುಲೈ 27ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ನಡೆಯಲಿವೆ.
ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡಲಾಗಿದೆ. ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಏಕದಿನ ತಂಡದ ನಾಯಕತ್ವ ರೋಹಿತ್ ಶರ್ಮಾ ಅವರಲ್ಲೇ ಇರಲಿದೆ.

ವಾಸ್ತವವಾಗಿ ಗೌತಮ್ ಗಂಭೀರ್ ಅವು ನೂತನ ಹೆಡ್ ಕೋಚ್ ಆದ ಬಳಿಕ ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆಗಳಾಗಿವೆ. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲಾಗಿದೆ. ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಆಗಿದ್ದರೆ, ವಿರಾಟ್ ಕೊಹ್ಲಿ ಕೂಡ ಏಕದಿನ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಎರಡೂ ಮಾದರಿಗಳ ತಂಡದ ಉಪನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಿಸಲಾಗಿದೆ. ಈ ನಡುವೆ 3 ಟಿ20 ಪಂದ್ಯಗಳಲ್ಲಿ ಕೇವಲ 24 ರನ್ ಗಳಿಸಿ ಫ್ಲಾಫ್ ಆದರೂ, ಈ ಆಟಗಾರನಿಗೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಿರುವುದು ಅಚ್ಚರಿ ತಂದಿದೆ.
ಐಪಿಎಲ್ 2024ರಲ್ಲಿ ಅಬ್ಬರಿಸಿದ್ದ ರಿಯಾನ್ ಪರಾಗ್ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ಈ ಸರಣಿಯಲ್ಲಿ ರಿಯಾನ್ ಪರಾಗ್ ವಿಶೇಷವಾದದ್ದೇನೂ ಮಾಡಲಿಲ್ಲ.
ಮೊದಲ ಪಂದ್ಯದಲ್ಲಿ ಐಪಿಎಲ್ ತಾರೆ ಕೇವಲ 2 ರನ್ ಗಳಿಸಿದ್ದು, ನಂತರ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆದರೆ ಈ ಪಂದ್ಯದಲ್ಲಿ ಚೆಂಡನ್ನು ಕೈಗೆತ್ತಿಕೊಂಡರು. ಆದರೆ ರಿಯಾನ್ ಪರಾಗ್ಗೆ ಬೌಲಿಂಗ್ನಲ್ಲಿಯೂ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಇದಾದ ನಂತರ 4ನೇ ಪಂದ್ಯದಲ್ಲಿ ಪರಾಗ್ ಕೇವಲ ಒಂದು ಸಿಕ್ಸರ್ ನೆರವಿನಿಂದ 22 ರನ್ ಗಳಿಸಿ ವಿಕೆಟ್ ಕಳೆದುಕೊಂಡಿದ್ದರು.
ಮೂಲಗಳ ಪ್ರಕಾರ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರಿಯಾನ್ ಪರಾಗ್ ಏಕದಿನ ಮತ್ತು ಟಿ20 ಎರಡು ತಂಡಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಪರಾಗ್ಗೆ ಬೌಲಿಂಗ್ ಮಾಡುವ ಸಾಮರ್ಥ್ಯವಿದೆ.
ಹೀಗಾಗಿ ಯುವ ಆಲ್ರೌಂಡರ್ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಯ್ಕೆದಾರರು ಶ್ರೀಲಂಕಾ ಪ್ರವಾಸದ ಭಾರತ ತಂಡದಲ್ಲಿ ಮತ್ತೊಮ್ಮೆ ಪರಾಗ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲು ಅವಕಾಶ ನೀಡಿದ್ದಾರೆ.
ಇನ್ನೊಂದೆಡೆ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಏಕದಿನ ತಂಡದ ಭಾಗವಾಗಿಲ್ಲ. ಅಲ್ಲದೆ, ಸ್ಫೋಟಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಟಿ20 ಸರಣಿಯನ್ನು ಮಾತ್ರ ಆಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪರಾಗ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವಕಾಶವಿದೆ.